ಮೋದಿ ಪ್ರಧಾನಿಯಾದ ಮೇಲೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ: ಆರಗ ಜ್ಞಾನೇಂದ್ರ

KannadaprabhaNewsNetwork |  
Published : Apr 24, 2024, 02:16 AM IST
ನರಸಿಂಹರಾಜಪುರ ಪಟ್ಟಣದಲ್ಲಿ ನಡೆದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು.ಸಭೆಯಲ್ಲಿ ಬೆಲ್ತಾಂಗಡಿ ಶಾಸಕ ಹರೀಶ ಪೂಂಜ, ಮಾಜಿ ಸಚಿವ ಡಿ.ಎನ್‌.ಜೀವರಾಜ್‌,ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ಉಗ್ರರು ಕಲ್ಲು ಹೊಡೆಯುತ್ತಿದ್ದರು. ಆದರೆ, 2014ರ ಲ್ಲಿ ಮೋದಿ ಪ್ರಧಾನಿಯಾದ ಮೇಲೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ ನೀಡಿ ಕಲ್ಲು ಹೊಡೆದವರ ಮೇಲೆ ಗುಂಡು ಹೊಡೆಯಿರಿ ಎಂದು ತಾಕತ್ತಿನ ನಾಯಕತ್ವ ಪ್ರದರ್ಶಿಸಿದರು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

- ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಬೈಕಾ ಜಾಥಾ, ಪಾದಯಾತ್ರೆ । ಬಹಿರಂಗ ಪ್ರಚಾರ ಸಭೆ ವಾರ್ತೆ, ನರಸಿಂಹರಾಜಪುರ

ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ಉಗ್ರರು ಕಲ್ಲು ಹೊಡೆಯುತ್ತಿದ್ದರು. ಆದರೆ, 2014ರ ಲ್ಲಿ ಮೋದಿ ಪ್ರಧಾನಿಯಾದ ಮೇಲೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ ನೀಡಿ ಕಲ್ಲು ಹೊಡೆದವರ ಮೇಲೆ ಗುಂಡು ಹೊಡೆಯಿರಿ ಎಂದು ತಾಕತ್ತಿನ ನಾಯಕತ್ವ ಪ್ರದರ್ಶಿಸಿದರು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸೋಮವಾರ ರಾತ್ರಿ ಪಟ್ಟಣದ ಗಣಪತಿ ಪೆಂಡಾಲ್‌ ಸಮೀಪ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತ ನಾಡಿದರು. 2014 ರಲ್ಲಿ ಮೋದಿ ಪ್ರಧಾನಿಯಾದಾಗ ದೇಶದ ಖಜಾನೆ ಖಾಲಿಯಾಗಿತ್ತು. ಕಾಂಗ್ರೆಸ್‌ ನವರು ಖಾಲಿ ಚೊಂಬನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಕಳೆದ 10 ವರ್ಷದಲ್ಲಿ ಖಾಲಿ ಚೊಂಬನ್ನು ಮೋದಿಯವರು ಅಕ್ಷಯ ಪಾತ್ರೆ ಮಾಡಿದ್ದಾರೆ. ಕಾಂಗ್ರೆಸ್‌ ನವರು ದೇಶದ ಬಂಗಾರವನ್ನು ವಿಮಾನದಲ್ಲಿ ವಿದೇಶಕ್ಕೆ ಕಳಿಸಿ ಸಾಲ ಮಾಡಿದ್ದರು. ಈಗ ಸುಳ್ಳು ಜಾಹೀರಾತು ಹಾಕುತ್ತೀರಿ. ಈ ತಿಂಗಳ 26 ರಂದು ಮತದಾರರು ಕಾಂಗ್ರೆಸ್‌ ನವರಿಗೆ ಖಾಲಿ ಚೆಂಬು ನೀಡುತ್ತಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ನವರಿಗೆ ಸಾಧನೆಗಳ ಮೇಲೆ ಮತ ಕೇಳಲು ಸಾಧ್ಯವಿಲ್ಲವೇ? ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅಧಿಕಾರ ಹೋಗುತ್ತದೆ ಎಂದು ತುರ್ತ ಪರಿಸ್ಥಿತಿ ತಂದು ವಾಜಪೇಯಿ ಸೇರಿದಂತೆ ಎಲ್ಲಾ ವಿರೋಧ ಪಕ್ಷದ ಮುಖಂಡರನ್ನು ಜೈಲಿಗೆ ಕಳಿಸಿದ್ದರು. ಶಹಬಾನು ಪ್ರಕರಣ ಒಂದರಲ್ಲಿ ಆಗ ಪ್ರದಾನಿಯಾಗಿದ್ದ ರಾಜೀವ್ ಗಾಂದಿ ಮುಸ್ಲಿಮರಿಗೆ ಅನುಕೂಲವಾಗಲಿ ಎಂದು ಕಾನೂನನ್ನೆ ಬದಲಾವಣೆ ಮಾಡಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಮಾಡಿದ್ದರು. 3 ಬಾರಿ ತಲಾಕ್‌ ಎಂದು ಹೇಳಿದರೆ ಪತ್ನಿಯನ್ನು ಪತಿ ತ್ಯಜಿಸಬಹುದಿತ್ತು. ಆದರೆ, ಮೋದಿ ಸರ್ಕಾರ ಬಂದ ಮೇಲೆ ತ್ರಿವಳಿ ತಲಾಕ್ ಪದ್ಧತಿ ತೆಗೆದು ಈ ದೇಶದ ಮುಸ್ಲಿಂ ಮಹಿಳೆಯರಿಗೆ ಸಹೋದರರಾಗಿದ್ದಾರೆ ಎಂದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ,ಶಾಸಕ ಹರೀಶ್ ಪೂಂಜ ಮಾತನಾಡಿ, 60 ವರ್ಷ ಈ ದೇಶ ಆಳಿದ ಕಾಂಗ್ರೆಸ್‌ ಸರ್ಕಾರ ಮಹಿಳೆಯರು ಚೆಂಬು ಹಿಡಿದು ಬಯಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ಆದರೆ, ಕಳೆದ 10 ವರ್ಷದಲ್ಲಿ ನರೇದ್ರ ಮೋದಿ ಸರ್ಕಾರ ಬಯಲು ಮುಕ್ತ ಶೌಚಾಲಯ ನಿರ್ಮಾಣ ಮಾಡಿ ಮಹಿಳೆಯರಿಗೆ ನೆಮ್ಮದಿ ತಂದಿದ್ದಾರೆ. ಈ ಹಿಂದೆ ಅಂತಾರಾಷ್ಟೀಯ ಮಟ್ಟದ ಸಭೆಯಲ್ಲಿ ನಮ್ಮ ದೇಶದ ಪ್ರಧಾನಿ ಹಿಂದಿನ ಬೆಂಚಿನಲ್ಲಿ ಕುಳಿಕು ಕೊಳ್ಳಬೇಕಾಗಿತ್ತು. ಈಗ ನರೇಂದ್ರಮೋದಿ ಎಲ್ಲರನ್ನು ಹಿಂದೆ ಹಾಕಿ ಮೊದಲನೇ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ರಾಮ ಮಂದಿರ ಕಟ್ಟಲಾಗಿದೆ. ಕಾಶಿ, ಉಜ್ಜಯನಿ ಸೇರಿದಂತೆ ಎಲ್ಲಾ ದೇವಸ್ಥಾನಗಳ ಪುನರ್ ನಿರ್ಮಾಣ ವಾಗುತ್ತಿದೆ. ದತ್ತಪೀಠದ ವಿಚಾರದಲ್ಲಿ ಜಯಪ್ರಕಾಶ ಹೆಗ್ಡೆ ಅವರ ನಿಲುವು ಏನು ? ಎಂದು ಸೃಷ್ಠ ಪಡಿಸಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 4 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಯನ್ನು ಗೆಲ್ಲಿಸಬೇಕಾಗಿದೆ. ಲೋಕಸಭಾ ಚುನಾವಣೆ ನಂತರ ಎಲ್ಲಾ ಗ್ಯಾರಂಟಿಗಳಿಗೆ ಚೊಂಬಾಗಲಿದೆ ಎಂದು ಭವಿಷ್ಯ ನುಡಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ದೇವೇಗೌಡರು ದೇಶದ ಹಿತದೃಷ್ಠಿಯಿಂದ ಬಿಜೆಪಿ ಹಾಗೂ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದ್ದಾರೆ. 2014 ರಿಂದ ನರೇಂದ್ರ ಮೋದಿಯವರು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಿಜಪಿಯಲ್ಲಿ ಪ್ರಾಮಾಣಿಕ ಕಾರ್ಯಕರ್ತರ ಪಡೆ ಇದೆ. ಚುನಾವಣೆಯಲ್ಲಿ ಒಂದೊಂದು ಮತವೂ ಅಮೂಲ್ಯ. ಈ ದೇಶದ ಆರ್ಥಿಕತೆಯಲ್ಲಿ 5 ನೇ ಸ್ಥಾನಕ್ಕೆ ಬರಲು ನರೇಂದ್ರ ಮೋದಿ ಕಾರಣ ರಾಗಿದ್ದಾರೆ. ಬಾಂಬ್ ಹಾಕಿದವರಿಗೆ ಮೋದಿ ಜೈಲು ಶಿಕ್ಷೆ ನೀಡುತ್ತಾರೆ. ಭಾರತಕ್ಕೆ ಜೈಕಾರ ಹಾಕಿದರೆ ಸಹೋದರರಂತೆ ಕಾಣುತ್ತಾರೆ. ದೇಶಕ್ಕಾಗಿ ನಡೆಯಲಿದೆ ಈ ಚುನಾವಣೆ ಎಂದರು.

ಇದಕ್ಕೂ ಮೊದಲು ವಿವಿಧ ಗ್ರಾಮಗಳಿಂದ ಆಗಮಿಸಿ ಬೈಕ್‌ ಜಾಥದ ಮೂಲಕ ಬಸ್ತಿಮಠಕ್ಕೆ ಬಂದರು. ನಂತರ ಪಾದಯಾತ್ರೆ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು ವೇದಿಕೆಗೆ ಆಗಮಿಸಿದರು.

ಸಭೆಯಲ್ಲಿ ಬಿಜೆಪಿ ಮುಖಂಡ ರಾಮಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್‌, ಬಿಜೆಪಿ ತಾ.ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿದಯಾನಂದ್‌, ಮುಖಂಡರಾದ ಎಚ್‌.ಡಿ.ಲೋಕೇಶ, ಪುಣ್ಯ ಪಾಲ್, ಪರ್ವೀಜ್‌,ಶಿವದಾಸ್‌,ಬಿ.ಟಿ.ರವಿ, ಮಾಲತೇಶ್‌, ರೇಖಾ ಮಂಜುನಾಥ್‌, ಪ್ರೀತಂ, ಸವಿತರತ್ನಾಕರ ಇದ್ದರು.

--- ಬಾಕ್ಸ್---

ಶೃಂಗೇರಿ ಕ್ಷೇತ್ರಕ್ಕೆ ಎಷ್ಟು ಹಣ ತಂದಿದ್ದೀರಿ.?

ಸರಳ, ಸಜ್ಜನ ಕೋಟಾ ಶ್ರೀನಿವಾಸ ಪೂಜಾರಿಯನ್ನುಮತದಾರರು ಗೆಲ್ಲಿಸಬೇಕಾಗಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು. ಕಳೆದ 5 ವರ್ಷ 11ತಿಂಗಳಲ್ಲಿ ಶಾಸಕರು ಶೃಂಗೇರಿ ಕ್ಷೇತ್ರಕ್ಕೆ ಎಷ್ಟು ಹಣ ತಂದಿದ್ದೀರಿ. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು 3500 ಕೋಟಿ ತಂದಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಲೆಕ್ಕವಿಲ್ಲದಷ್ಟು ಹಣ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ ಶೃಂಗೇರಿ ಕ್ಷೇತ್ರವನ್ನು, ನರಸಿಂಹ ರಾಜಪುರವನ್ನು ಅಭಿವೃದ್ಧಿ ಮಾಡಿದ್ದೆ . ಈಗ ಅಭಿವೃದ್ಧಿ ನಿಂತುಹೋಗಿದೆ. ಜನೌಷದಿ ನಿಂತುಹೋಗಿದೆ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''