ಹೊಸಪೇಟೆ: ಸಂಪತ್ತನ್ನು ನಿರಾಕರಿಸಿ, ಒಳ್ಳೆಯ ಮಾತುಗಳು ಮತ್ತು ವಿಚಾರಗಳು ಬೇಕು ಎಂದು ಹೇಳುವ ಮೂಲಕ ಆ ಕಾಲದ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ತಿಳಿಸುತ್ತಾರೆ. ಬಟ್ಟೆ ನೇಯ್ದು ಜೀವನ ನಡೆಸುತ್ತಿದ್ದ ವ್ಯಕ್ತಿ, ನನಗೆ ಸಂಪತ್ತು ಬೇಡ ಎಂದ ಮಹಾಶರಣ. ವಚನಕಾರನಾಗಿ, ತತ್ವಜ್ಞಾನಿಯಾಗಿ, ಚಿಂತಕನಾಗಿ ಕಾಣುತ್ತಾರೆ ಎಂದು ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಸಮಾರಂಭದ ಅಧ್ಯಕ್ಷೆವಹಿಸಿ ಮಾತನಾಡಿ, ದೇವರ ದಾಸಿಮಯ್ಯ ಕುರಿತು ಮೂಲಭೂತ ಸಂಶೋಧನೆ ಅಗತ್ಯವಿದೆ. ಜೀವನದ ಮೇಲೆ ಪ್ರೀತಿ ಹೊಂದಿದವರೇ ವಚನಕಾರರು ಎಂದು ಹೇಳುತ್ತ ದಾಸಿಮಯ್ಯನವರ ವಚನಗಳಲ್ಲಿ ಕಾಣುವ ಸಂಸಾರಿಕ ಅಂಶಗಳನ್ನು ಅವರು ವಿವರಿಸಿದರು.
ದೊಡ್ಡ ವಚನಕಾರರಿಗೆ ಅನೇಕ ಅರಸರ, ಅಧಿಕಾರಿಗಳ ಬೆಂಬಲವಿದ್ದು, ಅಂಥವರ ನಡುವೆ ದಾಸಿಮಯ್ಯನವರ ವಚನಗಳನ್ನು ಇಂದಿಗೂ ನಾವು ನೆನಪಿಸಿಕೊಳ್ಳುತ್ತಿರುವುದು, ಅವರ ವಚನಗಳಲ್ಲಿನ ಸತ್ವದ ಮಹತ್ವವನ್ನು ತೋರಿಸುತ್ತದೆ. ಬಟ್ಟೆಯ ಮೂಲಕ ಮಾನವನನ್ನು ನಾಗರಿಕ ಜೀವನದತ್ತ ಕರೆತರುವಲ್ಲಿ ಈ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ. ಗೋವಿಂದ ಹಾಗೂ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಅಧಿಕಾರಿಗಳು, ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಡಾ. ಗೋವಿಂದ ಸ್ವಾಗತಿಸಿದರು. ಟಿ. ಅಕ್ಷತಾ ನಿರೂಪಿಸಿದರು.