ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಬೊಮ್ಮಯ್ಯ- ಕೆಂಪಮ್ಮ ದಂಪತಿ ಪುತ್ರ ದಲಿತ ಜನಾಂಗದ ಯುವಕ ಪ್ರಸನ್ನ (35) ಅನಾರೋಗ್ಯದಿಂದಾಗಿ ಬುಧವಾರ ನಿಧನರಾದರು. ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗ ಮೃತರ ಕುಟುಂಬಸ್ಥರಿಗೆ ಸೇರಿದ ಕೃಷಿ ಭೂಮಿ ಇದೆ. ಮೂಲ ನಕಾಶೆಯಲ್ಲಿರುವ ರಸ್ತೆಯನ್ನು ಪಾಲಿಟೆಕ್ನಿಕ್ ಸಂಸ್ಥೆಯವರು ಮುಚ್ಚಿ ರೈತರು ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದಂತೆ ಮಾಡಿದ್ದಾರೆ. ಇದರಿಂದ ರೈತರು ಕೃಷಿ ಚಟಿವಟಿಕೆಗೆ ತೆರಳಲು ಮತ್ತು ಕುಟುಂಬಸ್ಥರು ನಿಧನರಾದಾಗ ಅವರ ಅಂತ್ಯ ಸಂಸ್ಕಾರವನ್ನು ತಮ್ಮ ಸ್ವಂತ ಜಮೀನಿನಲ್ಲಿ ನೆರವೇರಿಸಬೇಕಾದರೆ ನಾಲ್ಕು ಕಿಮಿ ಬಳಸಬೇಕಾದ ಸ್ಥಿತಿಯಿದೆ.
ರೈತ ಕುಟುಂಬದಲ್ಲಿ ಯಾರಾದರೂ ಸತ್ತರೆ ಕಾಲೇಜು ಹಿಂಭಾಗದ ತಮ್ಮ ಜಮೀನಿಗೆ ತೆರಳಿ ಅಂತ್ಯ ಸಂಸ್ಕಾರ ಮಾಡಲು ತೊಂದರೆಯಾಗಿದೆ. ಈ ಬಗ್ಗೆ ರೈತರು ಹಲವು ಸುತ್ತಿನ ಹೋರಾಟ ನಡೆಸುತ್ತಿದ್ದರೂ ತಾಲೂಕು ಆಡಳಿತ ಹಳೆಯ ರಸ್ತೆ ಬಿಡಿಸುವ ಅಥವಾ ಪರ್ಯಾಯ ರಸ್ತೆ ಬಿಡಿಸಿಕೊಡುವ ಬಗ್ಗೆ ಇದುವರೆಗೂ ಮುಂದಾಗಿಲ್ಲ.ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು 2025ರ ಜನವರಿಯಲ್ಲೇ ಸ್ಥಳೀಯ ಆಡಳಿದೊಂದಿಗೆ ಚರ್ಚಿಸಿ ಪರ್ಯಾಯ ರಸ್ತೆ ಬಿಡಿಸಿ ವರದಿ ಮಾಡುವಂತೆ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಲಿಖಿತ ಆದೇಶ ಮಾಡಿದ್ದರೂ ಇದುವರೆಗೂ ರಸ್ತೆ ಮಾತ್ರ ದೊರಕಿಲ್ಲ.
ರೈತರ ಮನವಿ ಮೇರೆಗೆ ತಾಲೂಕು ಆಡಳಿತ ಪಾಲಿಟೆಕ್ನಿಕ್ ಜಾಗದ ಪೂರ್ವದ ಅಂಚಿನಲ್ಲಿ ಬಸ್ ಡಿಪೋಗೆ ಹೊಂದಿಕೊಂಡಂತೆ ಬದಲಿ ಜಾಗವನ್ನು ರಸ್ತೆಗಾಗಿ ಗುರುತಿಸಿ ಅಗತ್ಯ ಸರ್ವೆ ಸ್ಕೆಚ್ ಮಾಡಿಸಿ ಜಿಲ್ಲಾಡಳಿತಕ್ಕೆ ಕಳುಹಿಸಿದೆ. ತಾಲೂಕು ಆಡಳಿತ ವರದಿ ಆಧರಿಸಿ ರೈತರಿಗೆ ಅಗತ್ಯ ರಸ್ತೆ ಬಿಡಿಸಲು ಮುಂದಾಗಬೇಕಾಗಿದ್ದ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದೆ.
ಜಮೀನಿಗೆ ತೆರಳಲು ಅಗತ್ಯ ರಸ್ತೆ ಇಲ್ಲದ ಕಾರಣ ಮೃತ ಪ್ರಸನ್ನರ ಶವಯಾತ್ರೆ ಅನಿವಾರ್ಯವಾಗಿ ಕಾಲೇಜು ಆವರಣದಿಂದಲೇ ಹಿಂಭಾಗದ ಜಮೀನಿಗೆ ತೆರಳುವ ವೇಳೆ ತಾಲೂಕು ಆಡಳಿತ ವಿರುದ್ಧ ಮೃತನ ಕುಂಟಬಸ್ಥರು ತೀವ್ರ ಆಕ್ರೋಶ ಹೊರಹಾಕಿದರು.