ಕನ್ನಡಪ್ರಭ ವಾರ್ತೆ ಮಂಡ್ಯನಿರಂತರ ಕಲಿಕೆಯಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಹೆಚ್ಚು ಜಾಗೃತರಾಗಬೇಕು. ಈ ಸಮಯದಲ್ಲಿ ಯಾರೂ ಮೈಮರೆಯಬಾರದು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.
ಪಠ್ಯದ ಬಗ್ಗೆ ಏನೇ ಸಮಸ್ಯೆ, ಗೊಂದಲಗಳಿದ್ದರೂ ಈಗಲೇ ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕು. ಕಠಿಣ ವಿಷಯಗಳ ಕಡೆ ಹೆಚ್ಚು ಆಸಕ್ತಿ ಕೊಟ್ಟು ಓದಿ ಮನನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಗುಂಪು ಚರ್ಚೆಯಿಂದಲೂ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ನೀವೇ ನಿತ್ಯದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕಲಿಕೆಯಲ್ಲಿ ತೊಡಗಿದಾಗ ಪರೀಕ್ಷೆ ಎದುರಿಸುವುದು ಸುಲಭವಾಗಲಿದೆ ಎಂದು ನುಡಿದರು.
ಪರೀಕ್ಷೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಬಾರದು. ಮೊಬೈಲ್, ಟೀವಿಯಿಂದ ದೂರವಿರಬೇಕು. ಬೆಳಗಿನ ಜಾವ ಬೇಗ ಎದ್ದು ಓದುವುದರಿಂದ ವಿಷಯಗಳು ಮನನವಾಗುತ್ತವೆ. ನೀವು ಎಷ್ಟು ಗಂಟೆ ಓದುವಿರಿ ಎನ್ನುವುದು ಮುಖ್ಯವಲ್ಲ. ಓದಿದಷ್ಟು ಸಮಯ ಎಷ್ಟು ವಿಷಯ ಅರಿತುಕೊಂಡಿರಿ ಎನ್ನುವುದು ಮುಖ್ಯವಾಗುತ್ತದೆ. ಮನಸ್ಸನ್ನು ಸದಾ ಉಲ್ಲಾಸದಿಂದ ಇರಿಸಿಕೊಂಡಾಗ ನಿರಾಳವಾಗಿ ಪರೀಕ್ಷೆ ಎದುರಿಸಬಹುದು ಎಂದು ಹೇಳಿದರು.ಅಂದಿನ ವಿಷಯಗಳನ್ನು ಅಂದೇ ಅಭ್ಯಾಸ ಮಾಡಿಕೊಂಡರೆ ಓದು ಸುಲಭವಾಗುತ್ತದೆ. ಮೊದಲೆಲ್ಲಾ ಸೋಮಾರಿತನ ಮಾಡಿಕೊಂಡು ಪರೀಕ್ಷಾ ಸಮಯದಲ್ಲಿ ಓದಲು ಕುಳಿತರೆ ಒತ್ತಡಕ್ಕೆ ಸಿಲುಕುವಿರಿ. ಭಯ ಹೆಚ್ಚಾಗುತ್ತದೆ. ಗೊಂದಲಕ್ಕೆ ಸಿಲುಕಿ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಆ ಸಮಯದಲ್ಲೇ ಏನೇ ಓದಿದರೂ ಅರ್ಥವಾಗುವುದಿಲ್ಲ. ಅದಕ್ಕಾಗಿ ಈಗಿನಿಂದಲೇ ಕಲಿಕೆಯತ್ತ ಗಮನಹರಿಸುವಂತೆ ತಿಳಿಸಿದರು.
ಮುಖ್ಯ ಶಿಕ್ಷಕ ಎಂ.ಎಚ್.ಪುಟ್ಟಸ್ವಾಮಿ, ಶಿಕ್ಷಕ-ಶಿಕ್ಷಕಿಯರು ಹಾಜರಿದ್ದರು.