ಗದಗ ಜಿಲ್ಲೆ ಗೋಡಂಬಿ ಬೆಳೆಗೆ ಹೆಚ್ಚು ಸೂಕ್ತ- ಡಾ. ನಾಗರಾಜಪ್ಪ

KannadaprabhaNewsNetwork | Published : Mar 23, 2025 1:32 AM

ಸಾರಾಂಶ

ಜಿಲ್ಲೆಯಲ್ಲಿ ಗೋಡಂಬಿ ಬೆಳೆಗೆ ಸೂಕ್ತವಾದ ವಾತಾವರಣವಿದೆ. ಗೋಡಂಬಿ ಬೆಳೆಯು ಅತೀ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿದ್ದು ಖರ್ಚು ಕಡಿಮೆ ಹೆಚ್ಚಿನ ಲಾಭಾಂಶ ಹೊಂದಿದ ಬೆಳೆಯಾಗಿದೆ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಡಾ. ನಾಗರಾಜಪ್ಪ ಅಡಿವೆಪ್ಪಾರ ಹೇಳಿದರು.

ಗದಗ: ಜಿಲ್ಲೆಯಲ್ಲಿ ಗೋಡಂಬಿ ಬೆಳೆಗೆ ಸೂಕ್ತವಾದ ವಾತಾವರಣವಿದೆ. ಗೋಡಂಬಿ ಬೆಳೆಯು ಅತೀ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿದ್ದು ಖರ್ಚು ಕಡಿಮೆ ಹೆಚ್ಚಿನ ಲಾಭಾಂಶ ಹೊಂದಿದ ಬೆಳೆಯಾಗಿದೆ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಡಾ. ನಾಗರಾಜಪ್ಪ ಅಡಿವೆಪ್ಪಾರ ಹೇಳಿದರು.

ಅವರು ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಐ.ಸಿ.ಎ.ಆರ್.-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ ಕೋಚಿನ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗೋಡಂಬಿ ಬೆಳೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಡಾ. ರಾಮೇಗೌಡ ಜಿ.ಕೆ. ಗೋಡಂಬಿ ಬೆಳೆಯಲ್ಲಿ ಬರುವ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ಗೋಡಂಬಿ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಆರ್.ಓದುಗೌಡರ್ ಮಾತನಾಡಿ, ಜಿಲ್ಲೆಯಲ್ಲಿ ಬೆಳೆಯುವ ಗೋಡಂಬಿಯು ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ರಫ್ತು ಮಾಡಲು ಯೋಗ್ಯವಾಗಿದೆ. ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಲಹೆಯಿಂದ ಹುಲಕೋಟಿಯಲ್ಲಿ ಗೋಡಂಬಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದ್ದು, ಇದರಿಂದ ಗೋಡಂಬಿ ಬೆಳೆಗಾರರಿಗೆ ಉತ್ತಮ ಧಾರಣೆ ದೊರೆಯುತ್ತಿದೆ ಎಂದರು. ಗೋಡಂಬಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಈಶ್ವರಪ್ಪ ಹಂಚಿನಾಳ ಗೋಡಂಬಿ ಬೆಳೆಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು. ತೋಟಗಾರಿಕೆ ಉಪ ನಿರ್ದೇಶಕ ಶಶಿಕಾಂತ ಕೋಟೆಮನಿ ಮಾತನಾಡಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಹಯೋಗದೊಂದಿಗೆ ಜಿಲ್ಲೆಯಲ್ಲಿ 2 ಸಾವಿರ ಎಕರೆಯಷ್ಟು ಗೋಡಂಬಿ ಬೆಳೆಯನ್ನು ವಿಸ್ತರಿಸಲಾಗಿದೆ. ಗೋಡಂಬಿ ಬೆಳೆಗಾರರಿಗೆ ಸಸಿ ವಿತರಣೆ ಹಾಗೂ ಬೆಳೆ ನಿರ್ವಹಣೆಗೆ ಸಹಾಯಧನ ನೀಡುವ ಮೂಲಕ ತೋಟಗಾರಿಕೆ ಇಲಾಖೆ ಹಾಗೂ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೋಚಿನ್ ನೆರವಾಗುತ್ತಿವೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಸುಧಾ ಮಂಕಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ಎಚ್. ಭಂಡಿ ಸ್ವಾಗತಿಸಿದರು. ಡಾ. ಕೆ.ವ್ಹಿ. ಪಾಟೀಲ ವಂದಿಸಿದರು. ಹೇಮಾವತಿ ಹಿರೇಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿನಾಯಕ ನಿರಂಜನ್ ನಿರೂಪಿಸಿದರು. ಹುಲಕೋಟಿ ಗ್ರಾಮದ ಪ್ರಗತಿಪರ ರೈತರಾದ ಶ್ರೀ ವಿಶ್ವನಾಥಗೌಡ ಹಿರೇಗೌಡರ, ಸುಭಾಸಗೌಡ ಆದಪ್ಪಗೌಡರ, ಕೆ.ವ್ಹಿ. ಆದಪ್ಪಗೌಡರ ಇನ್ನಿತರರು ಉಪಸ್ಥಿತರಿದ್ದರು.

ಗದಗ ಜಿಲ್ಲೆಯ ಸುಮಾರು 140ಕ್ಕೂ ಹೆಚ್ಚು ಗೋಡಂಬಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದ ನಂತರ ಗೋಡಂಬಿ ಬೇಸಾಯದ ಕುರಿತು ತಾಂತ್ರಿಕ ಸಲಹೆ ಹಾಗೂ ರೈತರ ಜೊತೆ ಗುಂಪು ಚರ್ಚೆಯನ್ನು ಏರ್ಪಡಿಸಲಾಯಿತು. ತದನಂತರ ಗೋಡಂಬಿ ಬೆಳೆದ ರೈತರ ತೋಟಗಳಿಗೆ ಹಾಗೂ ನೂತನವಾಗಿ ಪ್ರಾರಂಭವಾಗಿರುವ ಗೋಡಂಬಿ ಸಂಸ್ಕರಣಾ ಘಟಕಕ್ಕೆ ಕ್ಷೇತ್ರ ಭೇಟಿ ಏರ್ಪಡಿಸಲಾಯಿತು.

Share this article