ಗದಗ-ಹರಪನಹಳ್ಳಿ ರೈಲು ಮಾರ್ಗ ಬೇಡಿಕೆ ಮತ್ತೆ ಮುನ್ನೆಲೆಗೆ

KannadaprabhaNewsNetwork |  
Published : Jan 07, 2026, 02:45 AM IST
ಗದಗ ಹರಪನಹಳ್ಳಿ ರೈಲ್ವೆ ಮಾರ್ಗದ ನಕಾಶೆ | Kannada Prabha

ಸಾರಾಂಶ

ರೈಲ್ವೆ ಹೋರಾಟ ಸಮಿತಿ ತಾಲೂಕು ಸಂಚಾಲಕ ಎಸ್‌.ಎಸ್‌. ಪಾಟೀಲ್‌ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಹೂವಿನಹಡಗಲಿ: ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾದ ಗದಗ-ಹರಪನಹಳ್ಳಿ ರೈಲು ಮಾರ್ಗ ಬೇಡಿಕೆಯನ್ನು ಈ ಬಾರಿಯಾದರೂ ಈಡೇರಿಸಬೇಕೆಂದು ರೈಲ್ವೆ ಸಮಿತಿಯು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ.

ಭಾನುವಾರ ಜಿಂದಾಲ್‌ಗೆ ಬಂದಿದ್ದ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಇಲ್ಲಿನ ರೈಲ್ವೆ ಹೋರಾಟ ಸಮಿತಿ ತಾಲೂಕು ಸಂಚಾಲಕ ಎಸ್‌.ಎಸ್‌. ಪಾಟೀಲ್‌ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಗದಗ-ಹರಪನಹಳ್ಳಿ ರೈಲು ಮಾರ್ಗದ ಹೋರಾಟ ಕಾಲು ಶತಮಾನದ್ದು. ಆಗಿನಿಂದಲೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಈ ಹಿಂದೆ ರೈಲ್ವೆ ಸಚಿವರಾಗಿದ್ದ ಸದಾನಂದ ಗೌಡ ತಮ್ಮ ಚೊಚ್ಚಲ ರೈಲ್ವೆ ಬಜೆಟ್‌ನಲ್ಲಿ ಆದ್ಯತೆ ನೀಡಿ ಸರ್ವೆಗೆ ಹಸಿರು ನಿಶಾನೆ ತೋರಿದ್ದರು. ಅಲ್ಲಿಂದ ಈ ವರೆಗೂ ಗದಗ ಹರಪನಹಳ್ಳಿ ರೈಲ್ವೆ ಮಾರ್ಗದ ಸ್ಥಿತಿಗತಿ ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಾರಿ ನಮ್ಮ ಮನವಿ ಪುರಸ್ಕರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಅಖಂಡ ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಕೊನೆ ತಾಲೂಕು ಕೇಂದ್ರ ಹೂವಿನಹಡಗಲಿ, ಸತತ ಬರಗಾಲದಿಂದ ತತ್ತರಿಸುತ್ತಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿದೆ. ಡಾ. ನಂಜುಂಡಪ್ಪ ವರದಿ ಅನ್ವಯ ತೀರಾ ಹಿಂದುಳಿದ ತಾಲೂಕು ಕೇಂದ್ರವೆಂಬ ಹಣೆಪಟ್ಟಿ ಹೊತ್ತುಕೊಂಡಿರುವ ಈ ತಾಲೂಕಿಗೆ ರೈಲ್ವೆ ಮಾರ್ಗ ಅಗತ್ಯವಿದೆ. ಬೇಡಿಕೆ ಈಡೇರಿದರೆ ತಕ್ಕಮಟ್ಟಿಗೆ ಅಭಿವೃದ್ಧಿ ಸಮಾತೋಲನ ಕಾಣಲು ಸಾಧ್ಯವಿದೆ. ಈ ಭಾಗದಲ್ಲಿ ಸಾಕಷ್ಟು ರೈತರು ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಭೌಗೋಳಿಕ ಸೂಚ್ಯಂಕದಡಿ ಹಡಗಲಿ ಮಲ್ಲಿಗೆ ಬೆಳೆ ಮಾನ್ಯತೆ ಪಡೆದಿದೆ. ಇವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ರೈತರು ಪ್ರತಿ ವರ್ಷ ನಷ್ಟಕ್ಕೀಡಾಗುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಈ ಭಾಗದಲ್ಲಿ ರಾಜ್ಯದ ಲಕ್ಷಾಂತರ ಭಕ್ತರ ಆರಾಧ್ಯದೈವ ಮೈಲಾರಲಿಂಗೇಶ್ವರ, ಕುರುವತ್ತಿ ಬಸವೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಲ್ಯಾಣಿ ಚಾಲುಕ್ಯರ ಶಿಲ್ಪಕಲೆ ವೈಭವ ಹೊಂದಿರುವ ನೂರಾರು ದೇವಸ್ಥಾನಗಳು ಇವೆ. ರೈಲ್ವೆ ವ್ಯವಸ್ಥೆ ಇಲ್ಲದೇ ಈ ವರೆಗೂ ಶ್ರೀಮಂತ ಶಿಲ್ಪ ವೈಭವ ಪ್ರವಾಸಿಗರಿಂದ ದೂರ ಉಳಿದಿದೆ. ರೈಲ್ವೆ ಮಾರ್ಗದಿಂದ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಆದ್ಯತೆ ಸಿಗುವ ಸಾಧ್ಯತೆಗಳಿವೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಜತೆಗೆ, ಈ ಭಾಗದಲ್ಲಿಯೂ ವ್ಯಾಪಾರ-ವಹಿವಾಟು ಹೆಚ್ಚಾಗುತ್ತದೆ. ಆದರಿಂದ ರೈಲ್ವೆ ಮಾರ್ಗ ರಚನೆಯಾಗಬೇಕಿದೆ ಎಂದರು.ಈ ಕುರಿತು ಮಾತನಾಡಿದ ಸಚಿವ ವಿ.ಸೋಮಣ್ಣ, ಬೆಂಗಳೂರು, ಮೈಸೂರು ಭಾಗದ ಪ್ರವಾಸಿಗರು ಮತ್ತು ಪ್ರಯಾಣಿಕರು ವಿಜಯಪುರ, ಸೊಲ್ಲಾಪುರ ಹಾಗೂ ಮಹಾರಾಷ್ಟ್ರದ ಕಡೆಗೆ ಹೋಗಲು ಗದಗ-ಹರಪನಹಳ್ಳಿ ರೈಲ್ವೆ ನೇರ ಮಾರ್ಗವಾಗಲಿದೆ. ಈ ರೈಲ್ವೆ ಮಾರ್ಗದಿಂದ ಬೆಂಗಳೂರು-ಸೊಲ್ಲಾಪುರಕ್ಕೆ 120ರಿಂದ 130 ಕಿಮೀ ಕಡಿಮೆಯಾಗಲಿದೆ. ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಬಹು ವರ್ಷಗಳ ಬೇಡಿಕೆಯಾಗಿದೆ. ಅದಕ್ಕಾಗಿಯೇ ಹೋರಾಟಗಳು ನಡೆದಿವೆ. ಈ ಕುರಿತು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ವ್ಯಾಪ್ತಿಯ ಜನಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೇಲೆ ಒತ್ತಡ ತಂದು, ಪ್ರಸಕ್ತ ವರ್ಷದ ರೈಲ್ವೆ ಬಜೆಟ್‌ನಲ್ಲಿ ಮಂಡನೆ ಮಾಡುವಂತೆ ಇಚ್ಛಾಸಕ್ತಿ ತೋರಬೇಕಿದೆ ಎಂದು ರೈಲ್ವೆ ಹೋರಾಟ ಸಮಿತಿ ಸಂಚಾಲಕ ಎಸ್‌.ಎಸ್‌. ಪಾಟೀಲ್‌ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ