ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಿನಿಮಾ ಮಾದರಿ ಕೊಲೆ ಪ್ರಕರಣ ಭೇದಿಸಿದ ಗದಗ ಪೊಲೀಸರು

KannadaprabhaNewsNetwork | Updated : Jun 16 2025, 08:15 AM IST

ಸುಮಾರು ಆರು ತಿಂಗಳ ಹಿಂದೆ ಯುವತಿಯೋರ್ವಳು ನಾಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದು, ಅವಳ ಪ್ರಿಯಕರನೇ ತನ್ನ ಹೊಲದಲ್ಲಿ ಬೀಭತ್ಸವಾಗಿ ಕೊಲೆ ಮಾಡಿ ಬಳಿಕ ಶವವನ್ನು ಹೊಲದಲ್ಲಿ ಹೂತು ಹಾಕಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಗದಗ: ಸುಮಾರು ಆರು ತಿಂಗಳ ಹಿಂದೆ ಯುವತಿಯೋರ್ವಳು ನಾಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದು, ಅವಳ ಪ್ರಿಯಕರನೇ ತನ್ನ ಹೊಲದಲ್ಲಿ ಬೀಭತ್ಸವಾಗಿ ಕೊಲೆ ಮಾಡಿ ಬಳಿಕ ಶವವನ್ನು ಹೊಲದಲ್ಲಿ ಹೂತು ಹಾಕಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಇದು ಮಲಯಾಳಂನ ಸೂಕ್ಷ್ಮದರ್ಶಿನಿ ಸಿನಿಮಾದ ಕಥೆಯನ್ನು ಹೋಲುತ್ತದೆ ಎನ್ನಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಆರೋಪಿಯು, ತನ್ನನ್ನು ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದ ಪ್ರೇಯಸಿಯನ್ನು ಹೊಲಕ್ಕೆ ಕರೆದೊಯ್ದು ಅಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಅವಳ ವೇಲ್‌ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ ಎಂದು ತಿಳಿಸಿದರು. ಬಳಿಕ ಸಾಕ್ಷಿ ನಾಶಪಡಿಸಲು ಅವಳ ದೇಹವನ್ನು ತನ್ನ ಹೊಲದ ಬದುವಿನ ಬಳಿ ಹಳ್ಳದ ದಡದಲ್ಲಿ ಹೂತು ಹಾಕಿದ್ದ. ಬಳಿಕ ಮೂಳೆಗಳನ್ನು ಚದುರಿಸಿ ಹಾಕಿದ್ದ ಎಂದು ವಿವರಿಸಿದರು.

ಗದಗ ಪುಟ್ಟರಾಜ ನಗರದ ನಿವಾಸಿ ಮಧುಶ್ರೀ ಅಂಗಡಿ (24) ಹತ್ಯೆಗೀಡಾದ ಯುವತಿ. ಅವಳ ಪ್ರಿಯಕರ ಸತೀಶ ಹಿರೇಮಠ ಹತ್ಯೆಗೈದ ಆರೋಪಿ.

2025ರ ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್‌ ಠಾಣೆಗೆ ಗದಗ ಪುಟ್ಟರಾಜ ನಗರದ ನಿವಾಸಿ ಬಸವರಾಜ ಅಂಗಡಿ ದೂರು ನೀಡಿ 2024 ರ ಡಿಸೆಂಬರ 16 ರಂದು ರಾತ್ರಿ ತನ್ನ ಸಹೋದರಿ ಮಧುಶ್ರೀ ಯಾರಿಗೂ ತಿಳಿಸದೇ ಹೋಗಿದ್ದಾಳೆ ಎಂದು ದೂರು ದಾಖಲಿಸಿದ್ದರು.

ಪೊಲೀಸರು ಮಧುಶ್ರೀ ಪ್ರಿಯಕರ ಸತೀಶ ಹಿರೇಮಠ (28) ಎಂಬಾತನ ಮೇಲೆ ಸಂಶಯಗೊಂಡು ಆತನನ್ನು ವಿಚಾರಣೆಗೊಳಪಡಿಸಿದಾಗ ತಾನು, ಅವಳನ್ನು ಹಾತಲಗೇರಿ ನಾಕಾದಲ್ಲಿ ಬಿಟ್ಟು ಬಂದಿದ್ದಾಗಿ ತಿಳಿಸಿದ್ದಾನೆ.

ಆದರೆ ಎಷ್ಟೇ ಹುಡುಕಿದರೂ ಮಧುಶ್ರೀಯ ಬಗ್ಗೆ ಪತ್ತೆಯಾಗದೇ ಇದ್ದಾಗ ಪೊಲೀಸರು ಸತೀಶನ ಮೊಬೈಲ್‌ ಲೊಕೇಶನ್‌ ಮತ್ತು ಚಲನವಲನಗಳ ಮೇಲೆ ನಿಗಾ ಇಟ್ಟಾಗ ಸಂದೇಹ ಬಂದು ಸುದೀರ್ಘ ವಿಚಾರಣೆ ನಡೆದಾಗ ಹತ್ಯೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.

5-6 ವರ್ಷಗಳಿಂದ ಮಧುಶ್ರೀಯನ್ನು ಪ್ರೀತಿಸುತ್ತಿದ್ದೆ, ಅವಳು ಪದೇ ಪದೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ಅದಕ್ಕಾಗಿ ಡಿ. 16ರ ರಾತ್ರಿ ಗದಗ ನಗರದ ಅವಳ ಚಿಕ್ಕಪ್ಪನ ಮನೆಯ ಹತ್ತಿರದಿಂದ ತನ್ನ ಮೋಟಾರ ಸೈಕಲ್‌ನಲ್ಲಿ ನಾರಾಯಣಪುರದಲ್ಲಿರುವ ತನ್ನ ಜಮೀನಿಗೆ ಕರೆದುಕೊಂಡು ಹೋಗಿದ್ದು. ಡಿ. 17ರಂದು ಮದುವೆಯ ವಿಷಯವಾಗಿ ಮತ್ತೆ ಜಗಳವಾಗಿದ್ದು, ಆಗ ಅವಳ ಕೊರಳಲ್ಲಿದ್ದ ವೇಲ್‌ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹಾಗೂ ಬಳಿಕ ಸಾಕ್ಷಿ ನಾಶಕ್ಕಾಗಿ ಮೃತ ದೇಹವನ್ನು ತನ್ನ ಹೊಲದ ಬದುವಿನ ಬಳಿಯ ಹಳ್ಳದ ದಂಡೆಯಲ್ಲಿ ಹೂತು ಹಾಕಿದ್ದಾಗಿ ವಿವರಿಸಿದ್ದಾನೆ. ಬಳಿಕ ಆತ ಅವಳ ಮೂಳೆಗಳನ್ನು ಸಹ ಚದುರಿಸಿದ್ದಾನೆ ಎಂದು ಎಸ್ಪಿ ವಿವರಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್‌ ಟಾವರ್ ಲೊಕೇಶನ್ ಹಾಗೂ ಸತೀಶನ ಚಲನವಲನದ ಆಧಾರದ ಮೇಲೆ ಈ ಪ್ರಕರಣ ಪತ್ತೆ ಹಚ್ಚಿದ್ದಾಗಿ ಎಸ್ಪಿ ತಿಳಿಸಿದ್ದಾರೆ. ಆತನನ್ನು ಬಂಧಿಸಿರುವ ಬಡಾವಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಪ್ರಕರಣ ಭೇದಿಸುವಲ್ಲಿ ಪಿಎಸ್‌ಐ ಮಾರುತಿ ಜೋಗದಂಡಕರ, ಬಿ.ಟಿ. ರಿತ್ತಿ, ಎನ್.ಡಿ. ಹುಬ್ಬಳ್ಳಿ, ಸಂತೋಷ ದೋಣಿ, ನವೀನ್ ದೇವಪುರ, ಪರಶುರಾಮ ಎಚ್. ದೊಡಮನಿ, ಅಶೋಕ ಗದಗ, ನಾಗರಾಜ ಬರಡಿ, ಅಕ್ಷಯ ಬದಾಮಿ, ವಾಹನ ಚಾಲಕ ಖಯಾಂ ಲಕ್ಕುಂಡಿ ಮುಂತಾದವರು ಭಾಗವಹಿಸಿದ್ದರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ ಮುಂತಾದವರು ಹಾಜರಿದ್ದರು.

Read more Articles on