ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕುದೂರು ಕಾಲೇಜಿನ ಫಲಿತಾಂಶ ಕುಸಿತ: ಶಾಸಕ ಗರಂ

KannadaprabhaNewsNetwork | Published : Jun 16, 2025 12:48 AM

ಕಡಿಮೆ ಸಂಬಳ ಪಡೆದು ಖಾಸಗಿ ಶಾಲೆಗಳಲ್ಲಿ ಅಷ್ಟು ಉತ್ತಮ ಫಲಿತಾಂಶ ಬರಲು ಕಾರಣವೇನು? ಖಾಸಗಿ ಶಾಲೆಗಳ ಶಿಕ್ಷಕರ ಮೂರ್‍ನಾಲ್ಕು ಪಟು ಹೆಚ್ಚು ಸಂಬಳ ಪಡೆಯುವ ನೀವುಗಳು ಏಕೆ ಉತ್ತಮ ಫಲಿತಾಂಶ ಕೊಡಲು ಸಾಧ್ಯವಾಗತ್ತಿಲ್ಲ?

ಕನ್ನಡಪ್ರಭ ವಾರ್ತೆ ಕುದೂರು

ಇಲ್ಲಿನ ಕಾಲೇಜಿನಲ್ಲಿ ಪಿಯು ಫಲಿತಾಂಶ ಕುಸಿಯಲು ಕಾರಣವೇನು? ಇರುವ ಆರು ಜನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಕೇವಲ ಇಬ್ಬರು ಮಾತ್ರ ಪಾಸಾಗಿರುವುದು ನಿಜಕ್ಕೂ ನಾಚಿಕೆಯ ವಿಷಯ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪಿಯು ವಿಭಾಗದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆದು ಕಾಲೇಜು ಪ್ರಾಚಾರ್‍ಯರನ್ನು ಪ್ರಶ್ನಿಸಿದರು.ಕಡಿಮೆ ಸಂಬಳ ಪಡೆದು ಖಾಸಗಿ ಶಾಲೆಗಳಲ್ಲಿ ಅಷ್ಟು ಉತ್ತಮ ಫಲಿತಾಂಶ ಬರಲು ಕಾರಣವೇನು? ಖಾಸಗಿ ಶಾಲೆಗಳ ಶಿಕ್ಷಕರ ಮೂರ್‍ನಾಲ್ಕು ಪಟು ಹೆಚ್ಚು ಸಂಬಳ ಪಡೆಯುವ ನೀವುಗಳು ಏಕೆ ಉತ್ತಮ ಫಲಿತಾಂಶ ಕೊಡಲು ಸಾಧ್ಯವಾಗತ್ತಿಲ್ಲ? ಎಂದು ಪ್ರಾಚಾರ್‍ಯ ಮತ್ತು ಉಪನ್ಯಾಸಕರನ್ನು ಶಾಸಕರು ಪ್ರಶ್ನಿಸಿದರು.ಉಪನ್ಯಾಸಕರ ಕೆಲಸ ಕೇವಲ ಪಠ್ಯವನ್ನು ಬೋಧಿಸುವುದಷ್ಟೇ ಅಲ್ಲ, ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಇದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅವಶ್ಯಕವಾಗಿದೆ. ಮಕ್ಕಳಿಗೆ ಬೋಧನೆ ಮಾಡುವ ನಾವುಗಳು ಮೊದಲು ಶಿಸ್ತನ್ನು ಕಲಿಯಬೇಕು. ಮಕ್ಕಳ ಮುಂದೆ ನಾವುಗಳು ತಡವಾಗಿ ಕಾಲೇಜಿಗೆ ಬರಬಾರದು, ತರಗತಿಗಳಲ್ಲಿ ಮೊಬೈಲ್ ಬಳಸಬಾರದು ಎಂಬ ಪ್ರಾಥಮಿಕ ಎಚ್ಚರ ಉಪನ್ಯಾಸಕರು ಮತ್ತು ಪ್ರಾಚಾರ್‍ಯರಿಗೆ ಇರಬೇಕು ಎಂದು ಹೇಳಿದರು.ಉತ್ತಮ ಫಲಿತಾಂಶ ನಿಮ್ಮ ಜವಾಬ್ದಾರಿ:

ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ನಪಾಸು ಮಾಡುವಂತಿಲ್ಲ. ಹಾಗಾಗಿ ಅವರು ಪ್ರೌಢಶಾಲೆಗೆ ಬರುತ್ತಾರೆ. ಅದು ಯಾವ ಮಾಯೆಯಲ್ಲೋ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ ಕೆಲವರು ಕಾಲೇಜು ಸೇರುತ್ತಾರೆ. ಆಗ ಇವರುಗಳಿಗೆ ಅಕ್ಷರ ಕಲಿಸಿಕೊಂಡು ಕೂರಬೇಕಾ? ಅಥವಾ ನಿಗದಿತ ಸಮಯದಲ್ಲಿ ಪಠ್ಯ ಮುಗಿಸಬೇಕಾ? ಎಂಬುದೇ ಗೊತ್ತಾಗುವುದಿಲ್ಲ. ಇದರಿಂದಾಗಿ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬರಲು ಕಷ್ಟವಾಗುತ್ತಿದೆ ಎಂಬ ಸಮುಜಾಯಿಷಿಯನ್ನು ಉಪನ್ಯಾಸಕರು ಕೊಟ್ಟರು. ಇದರಿಂದ ಕೆರಳಿದ ಶಾಸಕರು ಇಂತಹ ಹಾರಿಕೆ ಉತ್ತರಗಳಿಂದ ಫಲಿತಾಂಶ ಸುಧಾರಿಸುವುದಿಲ್ಲ. ಇನ್ನು ಮುಂದಾದರು ಉತ್ತಮ ಫಲಿತಾಂಶದ ಕಡೆಗೆ ಕಾಲೇಜು ಮುಖ ಮಾಡುವಂತೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.65 ಲಕ್ಷದ ಪ್ರಾಥಮಿಕ ಶಾಲ ಕಟ್ಟಡ ಮಂಜೂರು:

ಸರ್ಕಾರಿ ಪ್ರಾಥಮಿಕ ಶಾಲೆಗೆ 65 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ಕಟ್ಟಲು ಮಂಜೂರಾಗಿದೆ. ಆ ಕಟ್ಟಡವನ್ನು ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿಯೇ ಕಟ್ಟಲಿ ಎಂದು ಶಾಸಕರು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪದ್ಮನಾಭ್ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯುವಾಗ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಜೆ ಕೊಡಬೇಕಾಗುತ್ತದೆ. ಈ ಪರೀಕ್ಷೆಗಳು ಇಪ್ಪತ್ತು ದಿನಗಳ ಕಾಲ ನಡೆಯುವುದರಿಂದ ಪರೀಕ್ಷಾ ಸಮಯದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಜೆ ಕೊಡಬೇಕಾಗುತ್ತದೆ. ಅದಕ್ಕಾಗಿ ಈಗಿರುವ ಪ್ರಾಥಮಿಕ ಶಾಲಾ ಆವರಣದಲ್ಲೇ ಮಂಜೂರಾಗಿರುವ ಕಟ್ಟಡವನ್ನು ಕಟ್ಟಿ. ಎಂದು ಹೇಳಿದರು.ಇದಕ್ಕೆ ಒಪ್ಪದ ಶಾಸಕರು ಅಂತಹ ಸಂದರ್ಭ ಬಂದಾಗ ಪರೀಕ್ಷಾ ಕೇಂದ್ರವನ್ನೇ ಬೇರೆಡೆಗೆ ಬದಲಿಸುವ ಕೆಲಸ ಮಾಡೋಣ ಬಿಡಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಇಸಿಒ ಗಂಗಾಧರ್, ಗ್ರಾಮಪಂಚಾಯ್ತಿ ಅಧ್ಯಕ್ಷ ರೇಖಾ ಸೋಮೇಶ್, ಪ್ರಾಚಾರ್‍ಯ ನಾರಾಯಣಸ್ವಾಮಿ, ಜಗದೀಶ್, ಹನುಮಂತರಾಯಪ್ಪ ಮತ್ತಿತರರು ಇದ್ದರು. ಪೊಟೋ ೧೫ಸಿಪಿಟಿ೨: ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗದಲ್ಲಿ ಕಾಲೇಜು ಅಭಿವೃದ್ದಿಯ ಕುರಿತು ನಡೆದ ಸಭೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು.