ಮಾಗಳದಲ್ಲಿರುವ ರಾಜ್ಯ ಹೆದ್ದಾರಿ ದುಸ್ಥಿತಿ । ಅಭಿವೃದ್ಧಿ ಇಲ್ಲದೇ ಹಳ್ಳಿಗಾಡಿನ ರಸ್ತೆಯಂತಿರುವ ಮಾರ್ಗಚಂದ್ರು ಕೊಂಚಿಗೇರಿ
ತಾಲೂಕಿನ ಮಾಗಳ ಗ್ರಾಮದಲ್ಲಿ ಹಾಯ್ದು ಹೋಗಿರುವ ಮಾಗಳ-ಬೆಟ್ಟದ ಮಲ್ಲಪ್ಪ, ಹೂವಿನಹಡಗಲಿ-ಹೊಳಲು ರಾಜ್ಯ ಹೆದ್ದಾರಿಗಳು ಅಭಿವೃದ್ಧಿ ಇಲ್ಲದೇ ಹಳ್ಳಿಗಾಡಿನ ರಸ್ತೆಯಂತಿವೆ. ಪ್ರಯಾಣಿಕರು ನಿತ್ಯ ಸರ್ಕಸ್ ಮಾಡುತ್ತಾ ಪ್ರಯಾಣಿಸುವ ದುಸ್ಥಿತಿ ಇದೆ.
ಹೌದು, ಮಾಗಳದಲ್ಲಿ ಇರುವುದು ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ. ಆದರೆ ಅಭಿವೃದ್ಧಿ ಕಾಣದೇ ಎಲ್ಲಿ ನೋಡಿದರೂ ತಗ್ಗು ಗುಂಡಿಗಳು, ಮಳೆಗಾಲ ಇರುವ ಹಿನ್ನೆಲೆ ಕಿತ್ತು ಹೋಗಿರುವ ರಸ್ತೆ ಕೆಸರು ಗದ್ದೆಯಂತಿವೆ. ಬೈಕ್ ಸವಾರರು ಸೇರಿದಂತೆ ಇತರೆ ವಾಹನಗಳ ಸವಾರರು ಮತ್ತು ಪ್ರಯಾಣಿಕರು, ರಸ್ತೆಯಲ್ಲಿರುವ ಕೆಸರನ್ನು ಮೈಗೆ ಮೆತ್ತಿಕೊಂಡು ಹೋಗುವ ಸ್ಥಿತಿ ಇದೆ. ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳು ತಕ್ಕ ಮಟ್ಟಿಗಾದರೂ, ತಗ್ಗು ಗುಂಡಿಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಜನ ವಿಧಿ ಇಲ್ಲದೇ ಕೆಸರು ರಸ್ತೆಯಲ್ಲೇ ಹಿಡಿಶಾಪ ಹಾಕುತ್ತಾ ಓಡಾಡುತ್ತಿದ್ದಾರೆ.ಮಾಗಳ ಗ್ರಾಮದಲ್ಲಿ ತುಂಗಭದ್ರಾ ನದಿ ಹರಿಯುತ್ತಿರುವ ಹಿನ್ನೆಲೆ ಅತಿ ಹೆಚ್ಚು ನೀರಾವರಿ ಪ್ರದೇಶ ಹೊಂದಿದೆ. ಸರಿ ಸುಮಾರು 3ರಿಂದ 4 ಸಾವಿರ ಎಕರೆ ಭತ್ತದ ಗದ್ದೆ ಇದೆ. ಇದರಿಂದ ಈ ಗ್ರಾಮದಲ್ಲಿ ತಾಲೂಕಿನಲ್ಲೇ ಹೆಚ್ಚು ಟ್ಯಾಕ್ಟರ್ ಇವೆ. ಇದರಿಂದ ರಸ್ತೆ ಬಹಳಷ್ಟು ಕಿರಿದಾಗಿದೆ ವಾಹನ ಸಂಚಾರಕ್ಕೆ ನಿತ್ಯ ಅಡಚಣೆ ಉಂಟಾಗುತ್ತಿದೆ. ಈ ರಸ್ತೆಯನ್ನು ಅಗಲೀಕರಣ ಮಾಡಬೇಕೆಂಬ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.
ಈಚಿಗೆ ಮಾಗಳ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಕೃಷ್ಣನಾಯ್ಕ ಗ್ರಾಮದ ಸಮಸ್ಯೆ ಆಲಿಸಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳಿಗೆ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ, ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗಾಗಿ ₹1.30 ಕೋಟಿ ಅನುದಾನ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುವ ಲಕ್ಷಣವಿದೆ. ಆದರಿಂದ ತಕ್ಷಣದಲ್ಲೇ ರಸ್ತೆಗೆ ಕಲ್ಲು ಮಣ್ಣು ಹಾಕಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಗ್ರಾಮದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ರಸ್ತೆ ಮಾತ್ರ ಕಿರಿದಾಗಿದೆ. ಇದರಿಂದ ನಿತ್ಯ ಜನ ರೋಸಿ ಹೋಗಿದ್ದಾರೆ. ಈ ಕೂಡಲೇ ಲೋಕೋಪಯೋಗಿ ಇಲಾಖೆಯವರು ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.