ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸತತ 4 ಬಾರಿ ಬಾಗಲಕೋಟೆ ಸಂಸದರಾಗಿರುವ ಬಿಜೆಪಿಯ ಪಿ.ಸಿ.ಗದ್ದಿಗೌಡರ ಸಾಧನೆ ಶೂನ್ಯ. ಅವರಿಗೆ ಮತ್ತೊಮ್ಮೆ ಸ್ಪರ್ಧೆ ಮಾಡುವ ನೈತಿಕತೆಯಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಟೀಕಿಸಿದರು.ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಪೂರದ ದಾನೇಶ್ವರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೇಕಾರ, ರೈತ, ಕೂಲಿ ಕಾರ್ಮಿಕರ ಧ್ವನಿಯಾಗಿ ಕೆಲಸ ನಿರ್ವಹಿಸಿದ್ದೇ ಕಾಂಗ್ರೆಸ್. ಇಂದಿಗೂ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಇದಕ್ಕೆ ಪೂರಕವಾಗಿ ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷೆಯ 25 ಗ್ಯಾರಂಟಿಗಳಿವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅವುಗಳನ್ನು ಜಾರಿಗೆ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಯುವ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನನಗೆ ಜಿಲ್ಲೆಯಾದ್ಯಂತ ಅಭೂತಪೂರ್ವ ಸ್ವಾಗತ ದೊರಕಿದೆ. ಇದೀಗ ತೇರದಾಳ ಕ್ಷೇತ್ರದಲ್ಲಿ ದೊರೆತ ಬೆಂಬಲ ಅವಿಸ್ಮರಣೀಯ. ಇದು ನನ್ನ ಗೆಲುವಿಗೆ ನಾಂದಿಯಾಗುವುದು ನಿಸ್ಸಂಶಯ ಎಂದರು.ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ನನಗೆ ರಾಜಕೀಯ ನೆಲೆ ನೀಡಿದ ಕ್ಷೇತ್ರ ತೇರದಾಳ. ಇಲ್ಲಿನ ನೇಕಾರರು ಪ್ರಬುದ್ಧ ಹಾಗೂ ಪ್ರಾಮಾಣಿಕರು. ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ದೊರೆಯುವಲ್ಲಿ ಕ್ಷೇತ್ರದ ಸಿಂಹಪಾಲಾಗಲಿದೆ. ಶೇ.೧ ಮತ್ತು ಶೇ.೩ ಬಡ್ಡಿ ಸಹಾಯಧನ ಹಾಗೂ ಸಾಲಮನ್ನಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅವಧಿಯಲ್ಲಿಯೇ ನಡೆದಿದ್ದು. ಮತ್ತೇ ಅವರ ಅನಿವಾರ್ಯತೆಯಿದೆ. ಶೀಘ್ರವೇ ಸಾಲದ ಬಡ್ಡಿ ಸಹಾಯ ಧನ ದೊರಕಲಿದೆ ಎಂದು ತಿಳಿಸಿದರು.
ಸಚಿವ ಆರ್. ಬಿ. ತಿಮ್ಮಾಪೂರ, ಶಾಸಕರಾದ ಎಸ್.ಆರ್. ಪಾಟೀಲ, ಸುನೀಲಗೌಡ ಪಾಟೀಲ, ಜೆ.ಟಿ. ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿದರು.ಸಿದ್ದು ಕೊಣ್ಣೂರ, ರಕ್ಷಿತಾ ಈಟಿ, ಎಂ.ಬಿ. ಸೌದಾಗರ, ಭೀಮಶಿ ಮಗದುಮ್, ರಾಜು ಭದ್ರನ್ನವರ, ಮಲ್ಲಪ್ಪ ಸಿಂಗಾಡಿ, ಡಾ.ಎ.ಆರ್. ಬೆಳಗಲಿ, ರಂಗನಗೌಡ ಪಾಟೀಲ, ಬಸವರಾಜ ಕೊಕಟನೂರ, ಭರಮು ಉಳ್ಳಾಗಡ್ಡಿ, ಸಂಗಪ್ಪ ಕುಂದಗೋಳ, ಪರಪ್ಪ ಉರಭಿನವರ, ಸದಾಶಿವ ಗೋಂದಕರ, ಚಂದ್ರು ಹರಿಜನ, ನೀಲಕಂಠ ಮುತ್ತೂರ, ಹಾರೂನ ಬೇವೂರ, ನಶೀಮ ಮೊಕಾಶಿ ಸೇರಿದಂತೆ ಅನೇಕರಿದ್ದರು.
--ಕೋಟ್..
ಕೆಎಚ್ಡಿಸಿ ನಿಗಮ ಅಧ್ಯಕ್ಷರಾಗಿದ್ದ ಸಿದ್ದು ಸವದಿ ಆಡಳಿತ ವ್ಯವಸ್ಥಾಪಕರೊಂದಿಗೆ ₹೧೯೬ ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಗರಣದ ಈಗಾಗಲೇ ವಿಚಾರಣೆ ಹಂತದಲ್ಲಿದ್ದು, ಒಬ್ಬೊಬ್ಬರದ್ದೇ ಮುಖವಾಡ ಜನರೆದುರು ಕಳಚಲಿದೆ. ಶಾಸಕ ಸಿದ್ದು ಸವದಿಗೆ ಗೆಲ್ಲಲು ನೇಕಾರರ ಮತಗಳು ಬೇಕು. ಆದರೆ, ನೇಕಾರರ ಯಾವ ಕೆಲಸವನ್ನೂ ಮಾಡದಿರುವುದು ವಿಪರ್ಯಾಸ. ನೇಕಾರರನ್ನು ಕಡೆಗಣಿಸುತ್ತಿರುವ ಸವದಿ ಕ್ರಮ ಖಂಡನೀಯ.- ಶಿವಾನಂದ ಪಾಟೀಲ, ಸಚಿವ