ಗಜೇಂದ್ರಗಡ ತಹಸೀಲ್ದಾರಗೆ ನಿಂದನೆ ಆರೋಪ

KannadaprabhaNewsNetwork |  
Published : Nov 06, 2024, 12:43 AM IST
ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ನಡೆಯನ್ನ ಖಂಡಿಸಿ ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನಿವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸಾರ್ವಜನಿಕವಾಗಿ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿದ್ದಾರೆ

ಗದಗ: ನ.4ರ ಸೋಮವಾರ ಗಜೇಂದ್ರಗಡದಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಆಗಮಿಸಿದ ತಹಸೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಅವರನ್ನು ಮಾಜಿ ಶಾಸಕ ಕಳಕಪ್ಪ ಬಂಡಿ ಸಾರ್ವಜನಿಕವಾಗಿ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಡಿ.ಟಿ. ವಾಲ್ಮೀಕಿ ಮಾತನಾಡಿ, ವಕ್ಫ್ ನಡೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಭಾಗವಾಗಿ ಗಜೇಂದ್ರಗಡದಲ್ಲೂ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ನಂತರ ಮನವಿ ಸ್ವೀಕರಿಸಲು ಆಗಮಿಸಿದ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಅವರನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಕಳಕಪ್ಪ ಬಂಡಿ ಸಾರ್ವಜನಿಕವಾಗಿ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ಕಂದಾಯ ಇಲಾಖೆಯ ಅಧಿಕಾರಿ, ನೌಕರರಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಕಂದಾಯ ಇಲಾಖೆ ನೌಕರರು ನಿತ್ಯ ಸಾರ್ವಜನಿಕರ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಾರೆ. ಒಂದು ಜವಾಬ್ದಾರಿಯುತ ವ್ಯಕ್ತಿ ಈ ರೀತಿ ನಡೆದುಕೊಂಡಿದ್ದು ದುರ್ದೈವದ ಸಂಗತಿ. ಈ ಘಟನೆಯಿಂದ ಕಂದಾಯ ಇಲಾಖೆ ನೌಕರರಿಗೆ ಒಂದು ರೀತಿಯ ಭಯ ಶುರುವಾಗಿದೆ. ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿ, ನೌಕರರಿಗೆ ತೊಂದರೆ ನೀಡಿ, ನಿಷ್ಪಕ್ಷಪಾತವಾಗಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ಮತ್ತು ನೈತಿಕವಾಗಿ ಕುಗ್ಗಿಸುವ ರೀತಿಯಲ್ಲಿ ನಡೆದುಕೊಂಡಿದ್ದು ಖೇದಕರ. ಪ್ರತಿದಿನ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಇಲಾಖೆಯ ಅಧಿಕಾರಿ ಹಾಗೂ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಜತೆಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ವಿರುದ್ಧ ಸಕಾರದ ನಿಯಮದನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗದಗ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಎಸ್.ಎಂ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಫ್.ಎಸ್. ಗೌಡರ, ಬಿ.ಎಸ್. ಕನ್ನೂರ, ಎಂ.ಎ. ನದಾಫ, ಖಜಾಂಚಿ ಕೆ.ಎಚ್. ಓಲೇಕಾರ, ಸಲಹಾ ಸಮಿತಿ ಅಧ್ಯಕ್ಷ ಎನ್.ಐ. ದೊಡ್ಡಮನಿ, ಎಸ್.ಎಸ್. ಕಡಗದ, ಬಿ.ವಿ. ಕಾಸಾರ, ಎಂ.ವಿ. ಪೊಲೀಸಪಾಟೀಲ, ಎಸ್.ಸಿ. ಹೊಸಕೋಟಿ, ಜಿ.ಬಿ. ಆನಂದಪ್ಪನವರ, ಜಿ.ಪಿ. ಪಾಟೀಲ, ಜೆ.ಎಚ್. ಭಜಂತ್ರಿ, ಆರ್.ವೈ. ವಿಕ್ರಂ, ವಿವೇಕ ಎಸ್.ಡಿಸ್ಲೆ, ಎಸ್.ಎ. ಪಾಟೀಲ, ಅರುಣಗೌಡ ಬಿ. ಮಂಟೂರ ಸೇರಿ ಅನೇಕರು ಇದ್ದರು.

ಶಾಸಕ-ಸಚಿವರಾಗಿದ್ದಂತವರು, ಸಾರ್ವಜನಿಕ ಜೀವನದಲ್ಲಿದ್ದವರು ಅಧಿಕಾರಿಗಳ ಜತೆ ಅದರಲ್ಲೂ ತಾಲೂಕು ದಂಡಾಧಿಕಾರಿಗಳ ಜತೆಗೆ ನಡೆದುಕೊಂಡ ರೀತಿ ಖಂಡನೀಯ. ಇಂತಹ ಘಟನೆ ಯಾವುದೇ ಅಧಿಕಾರಿ ಅಥವಾ ನೌಕರರ ಮೇಲೆ ಮರುಕಳಿಸದಂತೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ ಎಂದು ಕರ್ನಾಟಕ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ವಾಲ್ಮೀಕಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!