ಕನ್ನಡಪ್ರಭವಾರ್ತೆ ಚಳ್ಳಕೆರೆ: ನಗರ ಸೇರಿದಂತೆ ತಾಲೂಕಿನಾದ್ಯಂತ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ಸಿದ್ದತೆಗಳು ಭರದಿಂದ ಸಾಗಿವೆ. ಪ್ರಸ್ತುತ ವರ್ಷವೂ ಸಹ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಂದ ವಿವಿಧ ಆಕೃತಿಯ, ಬಣ್ಣ, ಬಣ್ಣದ ಗಣೇಶನ ಮೂರ್ತಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ರಾರಾಜಿಸುತ್ತಿದ್ದು, ಭಕ್ತರು ಗಣೇಶನ ಮೂರ್ತಿಯನ್ನು ಖರೀದಿಸಲು ಸಿದ್ಧತೆ ನಡೆಸಿದ್ದಾರೆ.
ನಗರದ ವಿವಿಧ ಸಂಘ ಸಂಸ್ಥೆಯವರು ಸಹ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಗಣೇಶನ ಪೇಂಡಾಲ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಸುತ್ತಲೂ ವಿವಿಧ ಆಟಿಕೆ, ರಾಟೆ ಮುಂತಾದ ಮನೋರಂಜನಾ ನೀಡುವ ಸಾಮಾಗ್ರಿಗಳು ಸಿದ್ಧಗೊಳ್ಳುತ್ತಿವೆ.
ನಗರದ ಎಲ್ಲಾ ರಸ್ತೆಗಳಲ್ಲೂ ಸುಮಾರು 60ಕ್ಕೂ ಹೆಚ್ಚು ಗಣೇಶ ವಿಗ್ರಹದ ಮಾರಾಟಗಾರರು ಮಾರಾಟ ಮಾಡುತ್ತಿದ್ದು ಜನರು ಉತ್ಸಾಹದಿಂದ ಮೂರ್ತಿಯನ್ನು ವೀಕ್ಷಿಸಿಸುತ್ತಿದ್ದಾರೆ. ಆದರೆ, ಈ ಬಾರಿ ಗಣೇಶ ದರ ಭಕ್ತರನ್ನು ದಂಗುಬಡಿಸುತ್ತಿದೆ. ಚಿಕ್ಕ, ಚಿಕ್ಕ ಮೂರ್ತಿಗಳಿಗೆ ₹400-500, ದೊಡ್ಡ ಗಣೇಶನಿಗೆ ₹3000-5000 ದರವನ್ನು ನಿಗದಿಪಡಿಸಿದ್ದಾರೆ. ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಭಕ್ತರಿಗೆ ಗಣೇಶಮೂರ್ತಿಯ ದರ ಹೆಚ್ಚು ನೋವು ಪಡುವಂತೆ ಮಾಡಿದೆ.