ವಿಶೇಷ ವರದಿ ಧಾರವಾಡ
ಮಹಾತ್ಮ ಗಾಂಧೀಜಿ ವಿಚಾರಧಾರೆಗಳನ್ನು ನಿರಂತರವಾಗಿ ಸಮಾಜಕ್ಕೆ ತಲುಪಿಸುವ ಹಾಗೂ ಗಾಂಧಿ ಪ್ರಣೀತ ಕಾರ್ಯಚಟುವಟಿಕೆಗಳಲ್ಲಿ ಈಗಿನ ಪೀಳಿಗೆ ಭಾಗವಹಿಸಲು ಅನುವಾಗುವಂತೆ ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಿಸಲು ನಿರ್ಧರಿಸಿ ರಾಜ್ಯ ಸರ್ಕಾರ ಕಂಡಿದ್ದ ಕನಸು ಧಾರವಾಡದಲ್ಲಿ ಇದೀಗ ನನಸಾಗುತ್ತಿದೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧಿ ಭವನ ನಿರ್ಮಿಸುವ ಮೂಲಕ ಜಿಲ್ಲೆಯ ಜನತೆಗೆ ಏ. 21ರಂದು ಲೋಕಾರ್ಪಣೆಗೆ ಸನ್ನದ್ಧವಾಗಿದೆ. ಸೋಮವಾರ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಹುದಿನಗಳ ಈ ಭವನವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮನಯ್ಯವರು 2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ ರು. 3 ಕೋಟಿಗಳ ವೆಚ್ಚದಲ್ಲಿ ಗಾಂಧಿಭವನ ನಿರ್ಮಿಸಲಾಗುವುದೆಂದು ಘೋಷಿಸಿದ್ದರು. ಸರ್ಕಾರದ ಸೂಚನೆಯಾನುಸಾರ ಇಲ್ಲಿಗೆ ಸಮೀಪದ ಹೊಸ ಬಸ್ ನಿಲ್ದಾಣದ ಗುಲಗಂಜಿಕೊಪ್ಪದ ಸರ್ವೇ ನಂಬರ್ 80 ರಲ್ಲಿನ 29 ಗುಂಟೆ ನಿವೇಶನವನ್ನು 2018ರಲ್ಲಿ ಮಂಜೂರು ಮಾಡಿ, ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಟರ್ ಡೆವಲಪ್ಮೆಂಟ್ ಕಾಮಗಾರಿ ವಹಿಸಿದ್ದು, ತಡವಾದರೂ ಇದೀಗ ಲೋಕಾರ್ಪಣೆಗೆ ಭವನ ಸಿದ್ಧವಾಗಿದೆ.
ಧಾರವಾಡಕ್ಕೆ ಮತ್ತೊಂದು ಭವನ: ದೇಶೀಯ ಶೈಲಿಯಲ್ಲಿ ಸ್ಥಳೀಯ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಗಾಂಧಿ ಕುಟೀರಗಳ ಮಾದರಿಯಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ. ಮುಖ್ಯವಾಗಿ ಎರಡು ವಿಭಾಗಗಳನ್ನು ಹೊಂದಲಾಗಿದ್ದು, ಮುಖ್ಯ ಕಟ್ಟಡದಲ್ಲಿ ವಿವಿಧೋದ್ದೇಶ ಸಭಾಂಗಣ, ಗ್ರಂಥಾಲಯ, ಮತ್ತೊಂದು ವಿಭಾಗದಲ್ಲಿ ಕಚೇರಿ, ತರಬೇತಿ ಕೇಂದ್ರವಿದೆ. ಜೊತೆಗೆ ಸಭಾಭವನ, ಸಿಬ್ಬಂದಿಗಳ ಕೊಠಡಿ, ಅಧಿಕಾರಿಗಳ ಕೊಠಡಿ, ಮ್ಯೂಜಿಯಂ, ಗ್ಯಾಲರಿ ಮುಂತಾದವುಗಳನ್ನು ಹೊಂದಲಾಗಿದೆ. ಈ ಮೂಲಕ ಇಲ್ಲಿ ಕಾರ್ಯಚಟುವಟಿಕೆಗಳನ್ನು, ತರಬೇತಿಗಳನ್ನು ವಿವಿಧ ವಿಭಾಗಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ.ಗಾಂಧಿ ಪ್ರತಿಮೆ ವಿಶೇಷ: ಗಾಂಧಿ ಭವನದ ನಿರ್ಮಾಣದ ಮೂಲ ಉದ್ದೇಶ ಗಾಂಧೀಜಿ ಜೀವನದ ದರ್ಶನ ಹಾಗೂ ಅವರ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವುದು. ಗಾಂಧೀಜಿಯವರ ತತ್ವ, ಆದರ್ಶ, ಜೀವನ ಕುರಿತ ಮಾಹಿತಿ ಒಳಗೊಂಡ ಗ್ರಂಥಾಲಯವನ್ನು ಈ ಭವನದಲ್ಲಿ ಅಳವಡಿಸಲಾಗುತ್ತಿದೆ. ಅಲ್ಲದೇ, ಆವರಣದಲ್ಲಿ ಗಾಂಧೀಜಿ ಪ್ರತಿಮೆ, ದಂಡಿ ಯಾತ್ರೆ ಮತ್ತು ಗಾಂಧೀಜಿಯವರು ಮಕ್ಕಳೊಂದಿಗೆ ಇರುವ ಪ್ರತಿಮೆಗಳನ್ನು ನಿರ್ಮಿಸಿರುವುದು ವಿಶೇಷ.
ಗಾಂಧೀಜಿಯವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸಲು ಅನುವಾಗುವಂತಹ ಕಾರ್ಯಚಟುವಟಿಕೆಗಳನ್ನು ರೂಪಿಸಲು ತೀರ್ಮಾನಿಸಲಾಗಿದೆ. ಈ ಭವನದಲ್ಲಿ ನಿಯಮಿತವಾಗಿ ತಮ್ಮ ನೇತೃತ್ವದ ಕಾರ್ಯ ಅನುಷ್ಠಾನ ಸಮಿತಿಯಿಂದ ಗಾಂಧಿ ಭವನ ನಿರ್ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.