ಹರಪನಹಳ್ಳಿ: ಮಹಾತ್ಮ ಗಾಂಧೀಜಿಯವರ ಆದರ್ಶ, ನಡೆ, ನುಡಿ ಎಂದೆಂದಿಗೂ ಪ್ರಸುತ್ತ ಹಾಗೂ ಮಾದರಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಗಾಂಧೀಜಿ ಅಹಿಂಸಾ ಪ್ರತಿಪಾದಕರು. ಆದರೆ ಇಂದು ಅವರ ಹುಟ್ಟಿನ ಊರು ಸೇರಿ ದೇಶಾದ್ಯಂತ ಹಿಂಸೆ ಹೆಚ್ಚಾಗಿದೆ. ಗಾಂಧಿ ಸ್ವದೇಶಿ ಬಟ್ಟೆಗೆ ಹೆಚ್ಚು ಒತ್ತು ಕೊಟ್ಟರು. ಆದರೆ ಖಾದಿ ಬಟ್ಟೆಯಲ್ಲಿರುವ ಪರಿಶುದ್ಧತೆ ಇಂದಿನ ರಾಜಕಾರಣಿಗಳಲ್ಲಿ ಇಲ್ಲ ಎಂದು ತಿಳಿಸಿದರು.
ಗಾಂಧೀಜಿ ಹೇಳಿರುವ ಮಾತುಗಳಲ್ಲಿ ಕೆಲವನ್ನಾದರೂ ಪಾಲಿಸಿದರೆ ಅವರ ಜನ್ಮದಿನಾಚರಣೆ ಮಾಡಿದುದಕ್ಕೂ ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಮಹಾತ್ಮ ಗಾಂಧೀಜಿ ಅಹಿಂಸಾ ಚಳವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ಜಗತ್ತಿಗೆ ಮಾದರಿಯಾಗಿದ್ದಾರೆ. ಅಹಿಂಸಾವಾದ ಸಬಲರ ಅಸ್ತ್ರ ಎಂದು ತೇರಿಸಿದ ಅವರ ಆದರ್ಶಗಳನ್ನು ಪಾಲಿಸೋಣ ಎಂದು ನುಡಿದರು.
ಸತ್ತೂರು ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ ಜೆ.ಬಿ. ಮಂಜುವಾಣಿ ಉಪನ್ಯಾಸ ನೀಡಿ, ಮಹಾತ್ಮ ಗಾಂಧೀಜಿ ಎಂದರೆ ಕೇವಲ ವ್ಯಕ್ತಿಯಲ್ಲ, ಜೀವನ ಮಾರ್ಗ, ಅಹಿಂಸೆ, ಶತ್ರುಗಳನ್ನೂ ಕೂಡ ಮಿತ್ರರನ್ನಾಗಿ ಕಾಣುವ ವ್ಯಕ್ತಿ ಹಾಗೂ ಸತ್ಯವನ್ನೇ ಮೈಗೂಡಿಸಿಕೊಂಡಿರುವ ಈ ಮೂರು ಅಂಶಗಳು ನಮಗೆ ತುಂಬ ಹಿಡಿದಿಡುತ್ತವೆ ಎಂದರು.ಈ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ಪುರಸಭಾ ವತಿಯಿಂದ ಶಾಸಕರು ವಿತರಿಸಿದರು. ಸಮಾರಂಭ ಜನರಿಲ್ಲದೆ ಸಪ್ಪೆಯಾಗಿತ್ತು. ಪುರಸಭಾ ಅಧ್ಯಕ್ಷೆ ಎಂ.ಫಾತಿಮಾಬೀ, ತಹಶೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಇಒ ವೈ.ಎಚ್. ಚಂದ್ರಶೇಖರ, ಪುರಸಭಾ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ,
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಉದಯಶಂಕರ, ಪುರಸಭಾ ಸದಸ್ಯರಾದ ಅಬ್ದುಲ್ ರಹಿಮಾನ್, ಎಂ.ವಿ. ಅಂಜಿನಪ್ಪ, ಲಾಟಿ ದಾದಾಪೀರ, ಭೀಮವ್ವ, ಗುಡಿ ನಾಗರಾಜ, ಹೇಮಣ್ಣ ಮೋರಗೇರಿ, ಅಲೀಂ, ಮಂಜುನಾಥ ಇಜಂತಕರ್, ಇಸ್ಮಾಯಿಲ್ ಎಲಿಗಾರ, ಆರೋಗ್ಯ ನಿರೀಕ್ಷಕ ಮಂಜುನಾಥ, ಅಂಬರೀಷ, ಮತ್ತೂರು ಬಸವರಾಜ , ಸಿಆರ್ಪಿ ಎಚ್.ಸಲೀಂ ಇದ್ದರು.