- ಭಜನೆ ಹಾಡು, ತಮಟೆ ಮೇಳದೊಂದಿಗೆ ಮನೆ, ದೇವಸ್ಥಾನಗಳ ಪ್ರವೇಶಿಸಿದ ಗಣಪತಿ
ಕನ್ನಡಪ್ರಭ ವಾರ್ತೆ ನ್ಯಾಮತಿ
ವಿದ್ಯಾಧಿಪತಿ ಗಣೇಶನ ಆರಾಧಿಸುವ ದಿನವಾದ ಸೋಮವಾರ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ತಮ್ಮ ಮನೆಗಳು, ಗಲ್ಲಿ, ಬೀದಿ, ದೇವಸ್ಥಾನಗಳಲ್ಲಿ, ವಿವಿಧ ಸಂಘಗಳಲ್ಲಿ ಪ್ರತಿಷ್ಠಾಪನೆ ಮಾಡಲು ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಖರೀದಿಸಿದರು. ಗಣೇಶನಿಗೆ ಜೈಕಾರಗಳ ಮೊಳಗಿಸುತ್ತ ಪ್ರತಿಷ್ಠಾಪನೆ ಮಾಡಿ ಭಕ್ತಿಭಾವದಿಂದ ಪೂಜಿಸಿ ಸಂಭ್ರಮಿಸಿದರು.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ತಾವು ಖರೀದಿಸಿದ ಗಣಪತಿಗಳ ಮೂರ್ತಿಗಳನ್ನು ಪ್ರಮುಖ ಬೀದಿಯಲ್ಲಿ ಸಾಂಪ್ರದಾಯಕ ಭಜನೆ ಹಾಡುಗಳನ್ನು ಹಾಡುತ್ತ, ತಮಟೆ, ಗಂಟೆ ಬಾರಿಸುತ್ತ ಮೆರವಣಿಗೆಯಲ್ಲಿ ಮನೆ, ದೇವಸ್ಥಾನಗಳಿಗೆ ತಂದರು. ಗಣೇಶ ಪ್ರತಿಷ್ಠಾಪನೆಗಾಗಿ ಮಂಟಪ ನಿರ್ಮಾಣ ಮಾಡಿ, ಬಾಳೆಕಂದು, ಮಾವಿನ ತೋರಣ, ಹೂವಿನ ಅಲಂಕಾರ, ವಿವಿಧ ಬಣ್ಣದ ಕಾಗದಗಳ ಚಿತ್ತಾರಗಳೊಂದಿಗೆ ಶೃಂಗರಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸಿ ಸಿಹಿ ಹಂಚಿದರು.
ತಾಲೂಕಿನ ಬಸವನಹಳ್ಳಿ ಗ್ರಾಮದ ಹೊರವಲಯದ ಶ್ರೀ ಬೆಟ್ಟ ಮಲ್ಲೇಶ್ವರ ದೇವಸ್ಥಾನದಲ್ಲಿ ವರ್ಷ ವರ್ಷದಂತೆ ಗೌರಿ ಗಣೇಶನ ಪ್ರತಿಷ್ಠಾಪನೆ ಮಾಡಿ, ಶಿವನ ಮೂರ್ತಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿಯೊಂದಿಗೆ ವಿವಿಧ ಖಾದ್ಯಗಳನ್ನು ನೇವೈದ್ಯ ಮಾಡಿ ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗಿಸಿದ್ದಾರೆ.
- - -