ಭಾವೈಕ್ಯತೆ, ಸಾಮರಸ್ಯ ಸಾರುವ ಗಣೇಶೋತ್ಸವ

KannadaprabhaNewsNetwork | Published : Sep 13, 2024 1:37 AM

ಸಾರಾಂಶ

ಹೊಸಕೋಟೆ: ಗ್ರಾಮಗಳಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯ ಸಾರಲು ಗಣೇಶೋತ್ಸವ ಪೂರಕವಾಗಿದೆ ಎಂದು ರಕ್ಷ ರಾಜ ಗೆಳೆಯರ ಬಳಗದ ಮುಖ್ಯಸ್ಥ ಗಿರೀಶ್ ತಿಳಿಸಿದರು.

ಹೊಸಕೋಟೆ: ಗ್ರಾಮಗಳಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯ ಸಾರಲು ಗಣೇಶೋತ್ಸವ ಪೂರಕವಾಗಿದೆ ಎಂದು ರಕ್ಷ ರಾಜ ಗೆಳೆಯರ ಬಳಗದ ಮುಖ್ಯಸ್ಥ ಗಿರೀಶ್ ತಿಳಿಸಿದರು.

ನಗರದ ಗಣಗಲು ರಸ್ತೆಯ ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗದಿಂದ ನಡೆದ ಪ್ರಥಮ ವರ್ಷದ ಗಣೇಶೋತ್ಸವದಲ್ಲಿ ಮಾತನಾಡಿದ ಅವರು, ಕೇವಲ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದ್ದ ಗಣಪತಿ ಹಬ್ಬವನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಮಾಡಿ ಸರ್ವ ಧರ್ಮದವರು ಆಚರಣೆ ಮಾಡುವಂತೆ ಮಾಡಿದ ಕೀರ್ತಿ ಬಾಲಗಂಗಾಧರ್ ನಾಥ್ ತಿಲಕರಿಗೆ ಸಲ್ಲುತ್ತದೆ. ಇದರಿಂದ ಗ್ರಾಮಗಳಲ್ಲಿ ಸಾಮರಸ್ಯದ ವಾತಾವರಣ ಉಂಟಾಗುವುದಲ್ಲದೆ ಯುವ ಸಮುದಾಯದಲ್ಲಿ ಭಾವೈಕ್ಯತೆ ಬೆಳೆಯುತ್ತದೆ. ಗಣೇಶೋತ್ಸವದ ಮೂಲಕ ವಾರ್ಡಿನ ನಾಗರಿಕರು ಒಂದೆಡೆ ಸೇರಲು ಸಾಧ್ಯವಾಗಿದೆ ಎಂದರು.

ವಿವೇಕಾನಂದ ಶಾಲಾ ಶಿಕ್ಷಕಿ ಪುಷ್ಪಾ ಮಾತನಾಡಿ, ಬಡಾವಣೆಯ ಯುವಕರ ಒತ್ತಾಯದ ಮೇರೆಗೆ ಪ್ರಥಮ ವರ್ಷದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಗುತ್ತಿದೆ. ಗಣಪತಿ ಮೆರವಣಿಗೆ ಜೊತೆಗೆ ವಾರ್ಡಿನ ಮಹಿಳೆಯರು, ಮಕ್ಕಳಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಹುಮಾನ ವಿತರಿಸಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗಣೇಶೋತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸುವ ದೃಡ ಸಂಕಲ್ಪ ಹೊಂದಿದ್ದೇವೆ ಎಂದರು.

ಕೆಂಪು ವಸ್ತ್ರ ತೊಟ್ಟ ವಾರ್ಡಿನ ನಾಗರಿಕರು, ಮಕ್ಕಳು ತಮಟೆ ವಾದ್ಯಕ್ಕೆ ಹೆಜ್ಜೆ ಹಾಕುತ್ತ ಕುಣಿದು ಕುಪ್ಪಳಿಸಿದರು.

ರಕ್ಷರಾಜ ಗೆಳೆಯರ ಬಳಗದ ಮುಖಂಡರಾದ ನಾರಾಯಣಸ್ವಾಮಿ, ಮನುಕುಮಾರ್, ರವಿಕುಮಾರ್, ಗಿರೀಶ್, ಕೃಷ್ಣಮೂರ್ತಿ, ಶಕ್ತಿಪ್ರಸಾದ್ ಸೇರಿದಂತೆ ವಾರ್ಡಿನ ನಾಗರಿಕರು ಹಾಜರಿದ್ದರು.

ಫೋಟೋ: 12 ಹೆಚ್‌ಎಸ್‌ಕೆ 1

ಹೊಸಕೋಟೆಯ ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗದ ಪ್ರಥಮ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಾರ್ಡಿನ ನಾಗರಿಕರು ಮೆರವಣಿಗೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Share this article