ಬಿಜಿಕೆರೆ ಬಸವರಾಜ
ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸಿಕೊಂಡು ವಿವಿಧ ರೀತಿಯ ಸಾವಯವ ದೀರ್ಘಾವದಿ ಬೆಳೆಗಳನ್ನು ಬೆಳೆದಿರುವ ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದ ಜಿ.ವಿ.ಗಂಗಣ್ಣ ಸಮಗ್ರ ಕೃಷಿ ಪದ್ಧತಿಯಿಂದ ವಾರ್ಷಿಕ 30 ಲಕ್ಷ ರು. ಆದಾಯಗಳಿಸುತ್ತಾ ಬರಗಾಲವನ್ನೇ ಗೆದ್ದಿದ್ದಾರೆ.
ಸದಾ ಬರದ ಬವಣೆಯಲ್ಲಿ ನಲುಗುತ್ತಿರುವ ತಾಲೂಕಿನಲ್ಲಿ ಸಮಗ್ರ ಕೃಷಿ ಪದ್ಧತಿ ಬರದಲ್ಲಿಯೂ ಕೈ ಹಿಡಿಯಲಿದೆ ಎನ್ನುವುದನ್ನು ಸಾಬೀತು ಪಡಿಸಿರುವ ರೈತ ಗಂಗಣ್ಣ ಐಟಿಐ ವಿದ್ಯಾಭ್ಯಾಸ ಮಾಡಿ ಬಳ್ಳಾರಿಯ ಜಿಎಸ್ಡಬ್ಲ್ಯೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕೃಷಿಯತ್ತ ಹೆಜ್ಜೆ ಇಟ್ಟು ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸಿಕೊಂಡು ಮಲೆ ನಾಡನ್ನು ನಾಚಿಸುವಂತೆ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.ಒಂದು ಭೂಮಿ, ಒಂದು ನೀರು ಹತ್ತು ಬೆಳೆ ಎನ್ನುವ ಸಂಕಲ್ಪ ಹೊಂದಿರುವ ರೈತ ಗಂಗಪ್ಪ 30 ಎಕರೆಯಲ್ಲಿ 2 ಬೋರ್ವೆಲ್ ಕೊರೆಸಿದ್ದಾರೆ. 2 ಬೋರ್ವೆಲ್ಗಳ ಪೈಕಿ 3 ಇಂಚು ನೀರು ಸಿಗುತ್ತಿದೆ. ಸಮಗ್ರ ಕೃಷಿಯಾಧಾರಿತವಾಗಿ ರಕ್ತ ಚಂದನ, ಶ್ರೀಗಂಧ, ಮಾವು, ಸಪೋಟ, ಸೀತಾಫಲ, ಹುಣಸೆ, ನೆಲ್ಲಿ, ತೆಂಗು, ಪೇರಲ, ನೇರಳೆ, ತೇಗ ಹಾಗೂ ಗೋಡಂಬಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆದಿದ್ದು, ಕಡಿಮೆ ನೀರಿನಲ್ಲಿಯೇ ಇಡೀ ಭೂಮಿಯನ್ನು ತಂಪಾಗಿಸಿಕೊಳ್ಳುವಂತ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ.
30 ಎಕರೆಯೂ ಸಂಪೂರ್ಣವಾಗಿ ಸಾವಯವ ಬೆಳೆಯಾಗಿದೆ. ಗಿಡಗಳಿಂದ ಬಿದ್ದ ಎಲೆಗಳನ್ನು ಅಲ್ಲಿಯೇ ಗೊಬ್ಬರವನ್ನಾಗಿಸಿಕೊಳ್ಳುತ್ತಿದ್ದಾರೆ. ಜೀವಾಮೃತ ಮತ್ತು ಗೋಕುಮಾಮೃತ ಎನ್ನುವ ಸಾವಯವ ದ್ರವವನ್ನು ಸ್ವತಃ ತಾವೇ ತಯಾರಿಸಿಕೊಳ್ಳುತ್ತಿದ್ದಾರೆ. 2 ಲೀಟರ್ ದೇಸಿ ಕೆಮಿಕಲ್ಗೆ 2 ಲೀಟರ್ ದೇಸಿ ಮಜ್ಜಿಗೆ, 2 ಕೆಜಿ ದೇಸಿ ಬೆಲ್ಲ ಮಿಶ್ರಣ ಮಾಡಿ 200 ಲೀಟರ್ ಬೆರೆಸಿ ಪ್ರತಿ ಆರು ತಿಂಗಳಿಗೊಮ್ಮೆ ನೀರಿನ ಜತೆಗೆ ಜೀವಾಮೃತ ನೀಡುತ್ತಿದ್ದಾರೆ.
ಸಂಪೂರ್ಣವಾಗಿ ಸಾವಯವ ಫಸಲಿನಿಂದಾಗಿ ಗಂಗಣ್ಣ ಬೆಳೆದ ಹಣ್ಣುಗಳಿಗೆ ಭಾರಿ ಬೇಡಿಕೆಯೂ ಇದೆ. ಹೊರ ರಾಜ್ಯದ ಮುಂಬೈ, ಚನ್ನೈ ಸೇರಿದಂತೆ ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಬಳ್ಳಾರಿ ಜಿಂದಾಲ್ ಕಂಪನಿಯವರು ತೋಟಕ್ಕೆ ಆಗಮಿಸಿ ಖರೀದಿಸಿ ಅವರೇ ಕಟಾವು ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ರೈತ ಗಂಗಣ್ಣ.