ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಗರ್ಭ ವಿನ್ಯಾಸ ಕಾರ್ಯಕ್ರಮ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಗರ್ಭವಿನ್ಯಾಸ ಕಾರ್ಯಕ್ರಮ ಸಂಪನ್ನಗೊಂಡಿತು.
ಪುರಾತನ ಇತಿಹಾಸ ಪ್ರಸಿದ್ಧ ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಗರ್ಭವಿನ್ಯಾಸ, ಹೋಮ, ಹವನ ಮತ್ತು ಬಲಿ ಪೂಜೆ ವಿಧಿ ವಿಧಾನಗಳನ್ನು ಕಾಸರಗೋಡಿನ ನೀಲೇಶ್ವರ ಪದ್ಮನಾಭ ತಂತ್ರಿ ಮತ್ತು ತಂಡದವರಾದ ಮುರಾರಿ, ಮಧು, ಪ್ರಸನ್ನ, ಶರತ್, ಸುಪ್ರೀತ್ ಇವರು ನೆರವೇರಿಸಿದರು.
ದೇವಸ್ಥಾನವನ್ನು ಪುನರ್ ಪ್ರತಿಷ್ಠಾಪನೆ ಮಾಡುವ ಉದ್ದೇಶದಿಂದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿದೆ. ಈ ಅಭಿವೃದ್ಧಿ ಕೈಂಕರ್ಯದಲ್ಲಿ ಅವಂದೂರು ಗ್ರಾಮದ ಗ್ರಾಮಸ್ಥರು ಹಾಗೂ ಹೊರಗಿನ ದಾನಿಗಳು ತನು ಮನ ಧನ ಸಹಾಯ ನೀಡಿ ಕೈ ಜೋಡಿಸುತ್ತಿದ್ದಾರೆ.
ಕ್ಷೇತ್ರಕ್ಕೆ ಆಗಮಿಸಿದ ತಂತ್ರಿಗಳನ್ನು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಧಾರ್ಮಿಕ ಸಂಪ್ರದಾಯದಂತೆ ಗೌರವಯುತವಾಗಿ ಶಿವ ಸ್ವರೂಪ ಪೂರ್ಣಕುಂಭ ಕಲಶದ ಮೆರವಣಿಗೆಯೊಂದಿಗೆ ಮುತ್ತೈದೆಯರು ಬರಮಾಡಿಕೊಂಡರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕರಾದ ದಿನೇಶ್ ಭಟ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಕಡ್ಯದ ಸೋಮಣ್ಣ, ಉಪಾಧ್ಯಕ್ಷರು ಚೊಕ್ಕಾಡಿ ಅಪ್ಪಯ್ಯ, ಕಾರ್ಯದರ್ಶಿ ಪಟ್ಟಡ ಸುಗುಣ ಕುಮಾರ್, ಖಜಾಂಚಿ ಬೆಳ್ಯನ ಚಂದ್ರಪ್ರಕಾಶ್, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ದೇವಸ್ಥಾನ ಜೀರ್ಣೋದ್ಧಾರದ ಮೂಲ ಸಮಿತಿ, ಗ್ರಾಮದ ತಕ್ಕ ಮುಖ್ಯಸ್ಥರು, ಗ್ರಾಮದ ಕಾರ್ಯದರ್ಶಿ ಹಾಗೂ ಅವಂದೂರು ಗ್ರಾಮದ ಸದಸ್ಯರು ಭಾಗಿಯಾಗಿ ಶ್ರೀ ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.