ಜಿಲ್ಲೆಯಾದ್ಯಂತ ಸಂಭ್ರಮದ ಗೌರಿ ಹಬ್ಬ ಆಚರಣೆ

KannadaprabhaNewsNetwork |  
Published : Aug 27, 2025, 01:00 AM IST
ಜಿಲ್ಲೆಯಾದ್ಯಂತ ಸಂಭ್ರಮದ ಗೌರಿ ಹಬ್ಬ ಆಚರಣೆ | Kannada Prabha

ಸಾರಾಂಶ

ದುಪ್ಪಟ್ಟು ಬೆಲೆ ಏರಿಕೆ ನಡುವೆಯೂ ಗೌರಿ ಹಬ್ಬವನ್ನು ಕಲ್ವತರುನಾಡಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರು

ದುಪ್ಪಟ್ಟು ಬೆಲೆ ಏರಿಕೆ ನಡುವೆಯೂ ಗೌರಿ ಹಬ್ಬವನ್ನು ಕಲ್ವತರುನಾಡಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮುಂಜಾನೆಯೇ ಮಹಿಳೆಯರು ತಮ್ಮ ತಮ್ಮ ಮನೆಗಳ ಬಾಗಿಲಲ್ಲಿ ಮೊರಗಳನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಗೌರಿ ಹಬ್ಬ ಆಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ನಂತರ ಮನೆಯಲ್ಲಿ ಗೌರಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.

ಮನೆಯಲ್ಲಿ ಪೂಜೆ, ವ್ರತ ಆಚರಣೆ ಬಳಿಕ ತಮ್ಮ ಬಡಾವಣೆಗಳ ವ್ಯಾಪ್ತಿಯಲ್ಲಿ ಗೌರಿ ಮೂರ್ತಿ ಪೂಜಿಸಿ ಬಾಗಿನ ಅರ್ಪಿಸಲು ಸಿದ್ದತೆ ಮಾಡಲಾಗಿದ್ದ ದೇವಾಲಯಗಳಿಗೆ ತೆರಳಿದ ಸುಮಂಗಲಿಯರು, ಮಕ್ಕಳು, ಯುವತಿಯರು ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಆಶೀರ್ವಾದ ಪಡೆದರು.

ನಗರದ ಬಿ.ಹೆಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮಿ ದೇವಾಲಯ, ಭದ್ರಮ್ಮ ವೃತ್ತದಲ್ಲಿರುವ ಸೋಮನಾಥೇಶ್ವರ ದೇವಾಲಯ, ಕುಣಿಗಲ್ ರಸ್ತೆಯ ಬನಶಂಕರಿಯಮ್ಮ, ರಾಮಕೃಷ್ಣನಗರದ ಸಾಯಿಬಾಬ ಮಂದಿರ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಈ ಎಲ್ಲ ದೇವಾಲಯಗಳಲ್ಲೂ ಮಹಿಳೆಯರು, ಮಕ್ಕಳು, ಯುವತಿಯರು ಗೌರಿಗೆ ಬಾಗಿನ ಅರ್ಪಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಮುಂಜಾನೆಯಿಂದಲೇ ನಗರದ ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ಸುಮಂಗಲಿಯರು ತವರಿನಿಂದ ಬಂದಂತಹ ಬಾಗಿನವನ್ನು ಗೌರಿ ಅರ್ಪಿಸಿದ್ದಲ್ಲದೆ, ಮಹಿಳೆಯರು ಪರಸ್ಪರ ಅರಿಶಿನ ಕುಂಕುಮ ನೀಡುವ ಮೂಲಕ ಹಬ್ಬದ ಸೊಬಗನ್ನು ಸಂಭ್ರಮಿಸಿದರು.

ಗೌರಿ ಮೂರ್ತಿ, ಮೊರ, ಹೂವು, ಹಣ್ಣು, ಮಾವಿನ ಎಲೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಎಷ್ಟೇ ದುಪ್ಪಟ್ಟಾದರೂ ಅದನ್ನು ಲೆಕ್ಕಿಸದೆ ಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದು ಜಿಲ್ಲೆಯಾದ್ಯಂತ ಕಂಡು ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ