ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ರಾಜ್ಯದಲ್ಲಿ ಫಸ್ಟ್‌ ಟೈಂ

KannadaprabhaNewsNetwork |  
Published : Sep 14, 2025, 01:04 AM ISTUpdated : Sep 14, 2025, 11:43 AM IST
Transgender Women

ಸಾರಾಂಶ

  ರಾಜ್ಯದಲ್ಲಿ ಜಾತಿ ಸಮೀಕ್ಷೆಗಳು ಭಾರೀ ಸದ್ದು ಮಾಡುತ್ತಿವೆ. ಇವುಗಳ ನಡುವೆ ಕರ್ನಾಟಕ ಸರ್ಕಾರ ರಾಜ್ಯ, ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಕೈ ಹಾಕಿದೆ. 

 ಆರ್‌.ತಾರಾನಾಥ್‌

 ಚಿಕ್ಕಮಗಳೂರು ರಾಜ್ಯದಲ್ಲಿ ಜಾತಿ ಸಮೀಕ್ಷೆಗಳು ಭಾರೀ ಸದ್ದು ಮಾಡುತ್ತಿವೆ. ಇವುಗಳ ನಡುವೆ ಕರ್ನಾಟಕ ಸರ್ಕಾರ ರಾಜ್ಯ, ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಕೈ ಹಾಕಿದೆ. 

ಇದೇ ಸೆಪ್ಟೆಂಬರ್‌ 15 (ಸೋಮವಾರ) ರಿಂದ 45 ದಿನಗಳ ಕಾಲ ಈ ಸಮೀಕ್ಷೆ ನಡೆಯಲಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ನಡೆಸಲಾಗುವುದು. ಇದು, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ಮಾಹಿತಿ ಸಂಗ್ರಹಿಸಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಸಮುದಾಯಕ್ಕೆ (ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ) ಪುನರ್ವಸತಿ ಕಲ್ಪಿಸಲು ಸಹಾಯವಾಗಲಿದೆ ಎಂಬುದು ಸರ್ಕಾರದ ಉದ್ದೇಶ. ಸಮೀಕ್ಷೆಗಾಗಿ ಕೆಎಆರ್‌ಎಂಎಎನ್ಐ ವೆಬ್‌ ಅಪ್ಲಿಕೇಷನ್‌ ಮೊಬೈಲ್‌ ಆ್ಯಫ್‌ ಸಿದ್ಧಪಡಿಸಲಾಗಿದೆ. ಇದರ ಜತೆಗೆ ಸಮೀಕ್ಷೆಗಾಗಿ ಸಹಾಯವಾಣಿ ಪ್ರಾರಂಭಿಸಲಾಗಿದೆ.ಈ ಸಹಾಯವಾಣಿ ಸಂಖ್ಯೆ 1800 599 2025. 

ಮನೆ ಮನೆ ಸಮೀಕ್ಷೆ ಅಲ್ಲ:

ಜಾತಿ ಸಮೀಕ್ಷೆ ರೀತಿಯಲ್ಲಿ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವುದಿಲ್ಲ. ಅದರ ಬದಲು ರಾಜ್ಯದ ಎಲ್ಲಾ ಸರ್ಕಾರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈ ಸಮೀಕ್ಷೆ ನಡೆಸಲಾಗುವುದು. ಈ ಕೆಲಸಕ್ಕೆ ಬೇರೆಯ ವರನ್ನು ನೇಮಕ ಮಾಡುವ ಬದಲು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರ ಮೂಲಕವೇ ಸಮೀಕ್ಷೆ ನಡೆಸುತ್ತಿರು ವುದು ಇದರ ವಿಶೇಷ. ಈ ಸಂಬಂಧ ರಾಜ್ಯದಲ್ಲಿ ಹಲವು ಮಂದಿಗೆ ತರಬೇತಿ ಸಹ ನೀಡಲಾಗಿದೆ.

ಸಮೀಕ್ಷೆ ಕಾರ್ಯನಿರ್ವಹಣೆಗಾಗಿ ಜಿಲ್ಲಾಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಂಡ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳನ್ನು ಒಳಗೊಂಡಂತೆ ಸಮಿತಿ ರಚಿಸಲಾಗಿದೆ. 

ಸವಾಲಿನ ಕೆಲಸ:

ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಸಿ, ನಿಖರವಾದ ಮಾಹಿತಿ ಸಂಗ್ರಹಿಸುವುದು ಕಷ್ಟಕರ ಕೆಲಸ. ಹಾಗಾಗಿ ದೇಶದ ಯಾವುದೇ ರಾಜ್ಯದಲ್ಲಿ ಈ ರೀತಿ ಪ್ರಯತ್ನ ನಡೆದಿಲ್ಲ. ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಮೈಸೂರು ಹಾಗೂ ವಿಜಯ ನಗರ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ, ನಂತರದಲ್ಲಿ ರಾಜ್ಯದಲ್ಲಿ ವಿಸ್ತರಣೆ ಮಾಡಿದೆ.

ಜಾತಿ ಸಮೀಕ್ಷೆಯಲ್ಲಿ ಎಲ್ಲಾ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಆದರೆ, ಲಿಂಗತ್ವ ಅಲ್ಪಸಂಖ್ಯಾತರು ಮುಕ್ತ ವಾಗಿ ಹೇಳಿಕೊಳ್ಳಲು ಅಂಜಿಕೊಳ್ಳುತ್ತಾರೆ. ಕಾರಣ, ಹಲವು ಮಂದಿ ತಮ್ಮ ತಂದೆ, ತಾಯಿ ಬಂಧುಗಳೊಂದಿಗೆ ಮನೆಯಲ್ಲಿ ಯೇ ವಾಸವಾಗಿದ್ದಾರೆ. ಅವರುಗಳು ಹೊರಗೆ ಬರಲು ಇಷ್ಟಪಡುವುದಿಲ್ಲ. ಈ ಸಾಲಿನಲ್ಲಿ ಸೇರಿದವರು ಹಲವು ಮಂದಿ ಇದ್ದಾರೆ ಎಂದು ಲಿಂಗತ್ವ ಅಲ್ಪಸಂಖ್ಯಾತರು ಹೇಳುತ್ತಿದ್ದಾರೆ.ಹಿಂದೇಟು:

ಆರೋಗ್ಯ ಸರಿ ಇಲ್ಲದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಹೋಗುವುದು ಸಹಜ. ಆದರೆ, ಅದೇಷ್ಟೋ ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಆಸ್ಪತ್ರೆಗಳಿಗೂ ಹೋಗುವುದಿಲ್ಲ. ಕಾರಣ, ಹೆಸರು ನೋಂದಣಿ ವೇಳೆಯಲ್ಲಿ ಆಧಾರ್‌ ಕಾರ್ಡ್‌ ಕೇಳು ತ್ತಾರೆ. ಕಾರ್ಡ್‌ ಕೊಟ್ಟರೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಆಧಾರ್‌ ಕಾರ್ಡ್ ಕೊಡಬೇಕಾಗಿರುವುದು ಕಡ್ಡಾಯ. ಆಧಾರ್‌ ಕಾರ್ಡ್‌ ಕೊಟ್ಟರೆ ತಮ್ಮ ವಾಸದ ವಿಳಾಸ ಊರಿನವರಿಗೆ ತಿಳಿಯದೆ. ಇಷ್ಟು ದಿನ ನಾಲ್ಕು ಗೋಡೆ ಮಧ್ಯೆ ಇದ್ದ ವಿಷಯ ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿಯಲಿದೆ.

ಸರ್ಕಾರ ಸಮೀಕ್ಷೆಗಾಗಿ ಬೆಳಿಗ್ಗೆ 9 ರಿಂದ 6 ಗಂಟೆವರೆಗೆ ಸಮಯ ನಿಗಧಿ ಮಾಡಿದೆ. ಈ ವೇಳೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರು ಸಮೀಕ್ಷೆ ನಡೆಸುವ ಸಮೀಕ್ಷರನ್ನು ಭೇಟಿ ಮಾಡಲು ಆಗುವುದಿಲ್ಲ. ಕಾರಣ, ಅವರು ಕೆಲಸದ ನಿಮಿತ್ತ ಬೇರೆ ಕಡೆಗಳಿಗೆ ಹೋಗಿರುತ್ತಾರೆ. ಕೆಲವರು ಮನೆಯಿಂದ ಹೊರಗೆ ಬರುವುದಿಲ್ಲ. ಹೆಚ್ಚಿನವರು ಸಂಜೆ 7 ಗಂಟೆ ನಂತರ ಬರುತ್ತಾರೆ. ಹಾಗಾಗಿ ನಿಗದಿತ ಸಮಯ ವಿಸ್ತರಿಸಬೇಕು. ಪೋಸ್ಟರ್‌ ಹಾಕುವುದರಿಂದ ಜನರು ಬರುವುದಿಲ್ಲ, ಗ್ರಾಮ ಸಭೆಗಳಲ್ಲಿ ಮಾಹಿತಿ ನೀಡಬೇಕು. ಸಮೀಕ್ಷೆಯಲ್ಲಿ ಪಡೆಯುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದರೆ ಮಾತ್ರ ಸಮೀಕ್ಷೆ ಯಶಸ್ವಿಯಾಗಬಹುದು. 

PREV
Read more Articles on

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!