ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ತಿಂಗಳು ನಡೆದ ನಗರಸಭೆ ಸಾಮಾನ್ಯಸಭೆ ಊರ್ಜಿತವಲ್ಲ, ಸಭೆಯ ಎಲ್ಲಾ ವಿಷಯಗಳ ಅನುಮೋದನೆಗೆ ತಡೆಯಾಜ್ಞೆ ನೀಡಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ನಗರಸಭಾ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಒತ್ತಾಯಿಸಿ ಮನವಿ ಸಲ್ಲಿಸಿದರು.ಬಳಿಕ ಮಾತನಾಡಿದ ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ, ನಗರಸಭೆ ನಿರ್ಣಯ ಪಾಸ್ ಮಾಡುವ ಸಾಧ್ಯತೆ ಇದೆ. ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯುವ ಮೊದಲು ಸಭೆಯ ನಿರ್ಣಯಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ಮನವಿ ಮಾಡಲಾಗಿದೆ ಎಂದರು. ನಗರಸಭೆಯಲ್ಲಿ ಬಹುಮತ ಇಲ್ಲವೆಂದು ಈ ಮೊದಲೇ ಜಿಲ್ಲಾಧಿಕಾರಿಗೆ ತಿಳಿಸಲಾಗಿತ್ತು. ಜನರ ತೆರಿಗೆ ಹಣ ಲೂಟಿ ಹೊಡೆಯುವ ಅನುಮಾನವಿದೆ. ಹೀಗಾಗಿ ನ್ಯಾಯಬದ್ಧ ಯಾವುದೇ ಹೋರಾಟಕ್ಕೆ ಸದಸ್ಯರು ಸಿದ್ದರಾಗಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಸದಸ್ಯರಾದ ಟಿ.ರಾಜಶೇಖರ್, ಮಧುಕುಮಾರ್ ರಾಜ್ ಅರಸ್ ಹಾಗೂ ವಕೀಲರ ದಯಾನಂದ್ ಹಾಜರಿದ್ದರು.