ಬಿತ್ತನೆ ಬೀಜ ಖರೀದಿ ವೇಳೆ ರಸೀದಿ ಪಡೆಯಿರಿ: ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ

KannadaprabhaNewsNetwork | Published : May 27, 2025 1:48 AM
ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಇಲಾಖೆಯಿಂದ ನೀಡಲಾಗುವ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಪಡೆದುಕೊಂಡು ಬಿತ್ತನೆ ಮಾಡಬೇಕು.
Follow Us

ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಸೋಮವಾರ ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ರೈತರಿಗೆ ವಿತರಿಸಲಾಯಿತು.ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಇಲಾಖೆಯಿಂದ ನೀಡಲಾಗುವ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಪಡೆದುಕೊಂಡು ಬಿತ್ತನೆ ಮಾಡಬೇಕು. ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ತೊಗರಿ ಬೀಜಗಳನ್ನು ವಿತರಣೆ ಮಾಡಲಾಗುತ್ತಿದ್ದು, ರೈತರು ಖರೀದಿಸಿ ಕಡ್ಡಾಯವಾಗಿ ರಶೀದಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ರೈತ ಸಂಘದ ಅಧ್ಯಕ್ಷ ರಾಜು ತರ್ಲಘಟ್ಟ, ಮುಖಂಡರಾದ ಈರಣ್ಣ ಚಕ್ರಸಾಲಿ, ಪುಟ್ಟಪ್ಪ ಬೆಂಚಳ್ಳಿ, ಕೋಟೆಪ್ಪ ಅಳಲಗೇರಿ, ಮಂಜಪ್ಪ ಸೋಟಾರಿ, ಮಹೇಶ ಹೊಗೆಸೊಪ್ಪಿನವರ, ಗುಡ್ಡನಗೌಡ್ರ ಕರೆಗೌಡ್ರ, ಪುಟ್ಟಪ್ಪ ಓಂಕಾಣ್ಣನವರ, ಬಸಣ್ಣ ನೆಗಳೂರ, ಎಂ.ಎಂ. ಮದರಂಗಿ, ಶಿವನಗೌಡ ಗೌಡರ, ಹನುಮಂತಪ್ಪ ತಳವಾರ, ಪ್ರಕಾಶ್ ಸಂಕಪ್ಪನವರ, ಫಕ್ಕೀರಪ್ಪ ಕಬ್ಬೂರ, ರಮೇಶ್ ಮಣ್ಣಮ್ಮನವರ, ಹರಿವೆಯಪ್ಪ ಬೆನಕನಹಳ್ಳಿ ಸೇರಿದಂತೆ ಇತರರು ಇದ್ದರು.ವರದಕ್ಷಿಣೆ ಕಿರುಕುಳ: ದೂರು ದಾಖಲು

ಹಾವೇರಿ: ಜಾತಿ ನಿಂದನೆ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಹತ್ತು ಜನರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಳೇನೂರ ಗ್ರಾಮದ ಮೃತ್ಯುಂಜಯ ನೆಲ್ಲೂರ, ಮಾಲತೇಶಪ್ಪ ನೆಲ್ಲೂರ, ಹೂವಮ್ಮ ನೆಲ್ಲೂರ, ಗಿರಿಸಿನಕೊಪ್ಪ ಗ್ರಾಮದ ಮಂಗಳಾ ಬೇವಿನಮರದ, ಕೂಡಲ ಗ್ರಾಮದ ಚೆನ್ನಮ್ಮ, ತಲಗಡ್ಡಿಯ ವೀರಭದ್ರಪ್ಪ ಕಿರವಾಡೇರ, ದಿಡಗೂರಿನ ರಾಜು, ಮಲ್ಲೇಶಪ್ಪ ನೆಲ್ಲೂರ, ಬಸಮ್ಮ ದಿಡಗೂರ, ಗೌರಮ್ಮ ಮತ್ತಿಹಳ್ಳಿ ಎಂಬವರ ವಿರುದ್ಧ ಚೇತನಾ ಮೃತ್ಯುಂಜಯ ನೆಲ್ಲೂರ ದೂರು ದಾಖಲಿಸಿದ್ದಾರೆ.ಆರೋಪಿತೆ ಗೌರಮ್ಮ ಮತ್ತಿಹಳ್ಳಿ ಕುಳೇನೂರ ಗ್ರಾಮದ ಮೃತ್ಯುಂಜಯ ಹೆಸ್ಕಾಂನಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾನೆಂದು ನಂಬಿಸಿ, ವರೋಪಚಾರ ಎಂದು ಬಂಗಾರ ಹಾಗೂ ನಗದು ಹಣವನ್ನು ನೀಡಿ ಮದುವೆ ಮಾಡಿಸಿದ್ದಾರೆ. ಬಳಿಕ ಬಾಳ್ವೆ ಮಾಡಲು ಹೋದಾಗ ಮೃತ್ಯುಂಜಯ ಸರ್ಕಾರಿ ಕೆಲಸದಲ್ಲಿ ಇಲ್ಲ ಎಂಬುದಾಗಿ ಗೊತ್ತಾದ ಬಳಿಕ ಆರೋಪಿತರು ವರದಕ್ಷಿಣೆ ಅಂತಾ ಇನ್ನೂ ₹2 ಲಕ್ಷ ತರುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಬಳಿಕ ಮದುವೆ ಮಾಡಿಸಿದ ಗೌರಮ್ಮಳು ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗುತ್ತಲ ತಾಂಡಾದ ಬಾಲಕಿ ಕಾಣೆ

ಹಾವೇರಿ: ಮದುವೆ ಮನೆಗೆ ಹೋಗಿ ಬರುವುದಾಗಿ ಹೇಳಿದ್ದ ಬಾಲಕಿಯೊಬ್ಬಳು ಕಾಣೆಯಾಗಿರುವ ಘಟನೆ ತಾಲೂಕಿನ ಗುತ್ತಲ ತಾಂಡಾದಲ್ಲಿ ನಡೆದಿದೆ.

ಗುತ್ತಲ ತಾಂಡಾ ನಿವಾಸಿ ಭೀಮಪ್ಪ ಲಮಾಣಿ ನೀಡಿದ ದೂರಿನಲ್ಲಿ ತನ್ನ ಮಗಳು ಮದುವೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದಾಳೆ. ಮಗಳ ಪತ್ತೆಗಾಗಿ ಎಲ್ಲಾ ಕಡೆ ಹುಡುಕಾಡಿದ್ದು, ಇಲ್ಲಿಯವರೆಗೂ ಸಿಕ್ಕಿಲ್ಲ. ಯಾರೋ ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರಬಹುದು ಎಂಬ ಅನುಮಾನವಿದ್ದು, ಪತ್ತೆ ಮಾಡಿಕೊಡುವಂತೆ ಪೊಲೀಸರ ಎಫ್‌ಐಆರ್‌ನಲ್ಲಿ ಮನವಿ ಮಾಡಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.