ಜೀತ ಮುಕ್ತ ಸಮಾಜ ಸೃಷ್ಟಿಸಲು ಕಾರ್ಯಪ್ರವೃತ್ತರಾಗಿ: ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ

KannadaprabhaNewsNetwork | Published : Feb 23, 2025 12:35 AM

ಸಾರಾಂಶ

ಜಿಲ್ಲಾಡಳಿತ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೂಡಿ ಜೀತ ಪದ್ಧತಿ ನಿರ್ಮೂಲನಾ ದಿನದ ಅಂಗವಾಗಿ ಜೀತ ಪದ್ಧತಿ ನಿಷೇಧ ಕಾರ್ಯಾಗಾರ ನಡೆಯಿತು.

ಧಾರವಾಡ: ಜೀತ ಪದ್ಧತಿ ಒಂದು ಶಾಪ. ಇದರ ವಿಮೋಚನೆಗೆ ಸರ್ಕಾರ ಹಲವಾರು ಕಾನೂನುಗಳನ್ನು ರೂಪಿಸಿದೆ. ಪ್ರತಿ ಹಂತದಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ಕಾನೂನಾತ್ಮಕವಾಗಿ ನಿಭಾಯಿಸುವ ಮೂಲಕ ಜೀತ ಮುಕ್ತ ಸಮಾಜವನ್ನು ಸೃಷ್ಟಿಸಲು ಕಾರ್ಯಪ್ರವೃತ್ತರಾಗಲು ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಗೂಡಿ ಜೀತ ಪದ್ಧತಿ ನಿರ್ಮೂಲನಾ ದಿನದ ಅಂಗವಾಗಿ ಆಯೋಜಿಸಿದ್ದ ಜೀತ ಪದ್ಧತಿ ನಿಷೇಧ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜೀತ ಪದ್ಧತಿ ಕೇವಲ ದೇಶಕ್ಕೆ ತಟ್ಟಿದ ಶಾಪವಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಜೀತ ಪದ್ಧತಿ ಅಸ್ತಿತ್ವದಲ್ಲಿದೆ. ಇದನ್ನು ಕಿತ್ತು ಹಾಕಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾನೂನುಗಳನ್ನು ರಚಿಸಿ, ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಜೀತ ಪದ್ಧತಿ ಆಚರಣೆ ಅಪರಾಧವಾಗಿದೆ ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ನಿಯಮಗಳು 1976ರ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಜೀತ ವ್ಯವಸ್ಥೆಯ ಬದಲಾದ ವಾಸ್ತವ ಚಿತ್ರಣ ಕುರಿತು ವಿವರಿಸಿದರು.

ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸದೇ ತಾವೇ ನಿರ್ವಹಿಸಬೇಕು. ಪ್ರತಿ ನೌಕರ ಜೀತಪದ್ಧತಿಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜಿಲ್ಲೆಯಲ್ಲಿ ಜೀತ ಪದ್ಧತಿ ಕಂಡು ಬಂದರೆ, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಎಂದರು.

ಕಾರ್ಯಾಗಾರದಲ್ಲಿ ಜೀತ ವಿಮುಕ್ತತತೆಯ ಪ್ರತಿಜ್ಞೆಯನ್ನು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಬೋಧಿಸಿದರು. ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಸ್ವಾಗತಿಸಿದರು. ಕಾರ್ಮಿಕ ಅಧಿಕಾರಿ ಅಕ್ಬರ ಮುಲ್ಲಾ ವಂದಿಸಿದರು. ರಾಜಶೇಖರಗೌಡ ಕಂಠೆಪ್ಪಗೌಡರ ನಿರ್ವಹಿಸಿದರು.

Share this article