ಕನಕಪುರ: ಗ್ರಾಮೀಣರು ಬ್ಯಾಂಕ್ಗಳಲ್ಲಿ ಖಾತೆ ತೆರೆಯುವ ಮೂಲಕ ಆ ಬ್ಯಾಂಕ್ಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಬೆಂಗಳೂರು ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾ ಪ್ರಬಂಧಕ ಸಿ.ಎಚ್.ವೆಂಕಟ್ ಸುಧೀರ್ ಕರೆ ನೀಡಿದರು.
ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಬ್ಬಾಳು ಶಾಖೆ ಹಮ್ಮಿಕೊಂಡಿದ್ದ ಆರ್ಥಿಕ ಸೇರ್ಪಡೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಬ್ಯಾಂಕ್ಗಳು ಸದಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತವೆ. ಬ್ಯಾಂಕ್ಗಳಲ್ಲಿ ದೊರೆಯುವ ಸವಲತ್ತುಗಳು ಅರ್ಹ ಫಲಾನುಭವಿಗಳು ಪಡೆದುಕೊಂಡಾಗ ಮಾತ್ರ ಬ್ಯಾಂಕಿಂಗ್ ಕ್ಷೇತ್ರದ ಆಶೋತ್ತರಗಳು ಈಡೇರುತ್ತವೆ ಎಂದರು.
ಮೈಸೂರಿನ ಪ್ರಾದೇಶಿಕ ಮುಖ್ಯಸ್ಥ ರಾಜ್ ಕುಮಾರ್ ಮಾತನಾಡಿ, ಇತ್ತೀಚೆಗೆ ಡಿಜಿಟಲ್ ವಂಚನೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಯಾರೇ ಅಪರಿಚಿತರು ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ಹಾಗೂ ಒಟಿಪಿ ಕೇಳಿದರೆ ನೀಡಬಾರದು ಎಂದು ಸಲಹೆ ನೀಡಿದರು.ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಫಲಾನುಭವಿಗಳಾದ ಯಶೋದಾ ಅವರು ತಮ್ಮ ಪತಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯನ್ನು ಮಾಡಿಸಿದ್ದು, ಅವರು 55 ವರ್ಷಕ್ಕೂ ಮೊದಲೇ ತೀರಿಕೊಂಡಿದ್ದರು, ಆದ್ದರಿಂದ ಈ ಯೋಜನೆಯ 2 ಲಕ್ಷ ವಿಮೆಯ ಹಣ ಪಡೆದುಕೊಂಡಿದ್ದೇವೆ. ಇದರಿಂದ ಆರ್ಥಿಕವಾಗಿ ಸಹಾಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆರ್ಥಿಕ ಸಾಕ್ಷರತಾ ಅಭಿಯಾನ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಪಿಡಿಒ ಲೋಕೇಶ್, ಲೀಡ್ ಬ್ಯಾಂಕ್ನ ಜಿಲ್ಲಾ ವ್ಯವಸ್ಥಾಪಕ ಮೋಹನ್ ಕುಮಾರ್, ಶಾಖಾ ವ್ಯವಸ್ಥಾಪಕ ಅನಿಲ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಮ್ಮ, ಎಫ್ಎಲ್ಸಿಗಳಾದ ಸುಮಲತಾ.ಕೆ, ರೂಪಲಕ್ಷ್ಮೀ, ಕಬ್ಬಾಳು ಗ್ರಾಪಂ ಸಂಜೀವಿನಿ ಎನ್.ಆರ್ಎಲ್ಎಂ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.31ಕೆಆರ್ ಎಂಎನ್ 2.ಜೆಪಿಜಿ
ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಬ್ಬಾಳು ಶಾಖೆ ಹಮ್ಮಿಕೊಂಡಿದ್ದ ಅರ್ಥಿಕ ಸೇರ್ಪಡೆ ಅಭಿಯಾನ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.