ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಯಲಬುರ್ಗಾಪ್ರತಿಯೊಬ್ಬರು ಕಾನೂನಿನ ಜ್ಞಾನ ಪಡೆದುಕೊಂಡು ಸಮಾಜದ ನೆರೆಹೊರೆಯವರ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸಮಾಜದಲ್ಲಿ ಎಲ್ಲರೊಂದಿಗೂ ಸಹಬಾಳ್ವೆ ನಡೆಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.
ಪಟ್ಟಣದ ವಕೀಲರ ಸಂಘದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ, ರಾಷ್ಟ್ರೀಯ ಕಾನೂನು ದಿನಾಚರಣೆ ನಿಮಿತ್ತ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾನೂನಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನವು ಪ್ರತಿಯೊಬ್ಬರಿಗೊ ವಿಶೇಷವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡುವ ದಿನವಾಗಿದೆ ಎಂದರು.ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ, ಬಡವರು, ದಿನ ದಲಿತರು ಕಾನೂನು ತಿಳುವಳಿಕೆಯಿಂದ ವಂಚಿತರಾಗಬಾರೆಂಬ ಉದ್ದೇಶದಿಂದ ೧೯೮೭ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಸಮಿತಿ ಪ್ರಾರಂಭಿಸಿ ೧೯೯೫ರಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಪ್ರಾಧಿಕಾರದ ಮುಖಾಂತರ ಬಡವರು, ದುರ್ಬಲರಿಗೆ ಕಾನೂನು ಅರಿವು ಮತ್ತು ನೆರವು ನೀಡುವ ಕಾರ್ಯವನ್ನು ಪ್ರಾಧಿಕಾರ ಮಾಡುತ್ತಿದೆ. ಲೋಕ ಅದಾಲತ್ ಮುಖಾಂತರ ರಾಜಿ ಸಂಧಾನ ಮಾಡಿ ಶೀಘ್ರದಲ್ಲಿ ನ್ಯಾಯದಾನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ವಕೀಲರು, ಕಕ್ಷಿದಾರರು ಸಹಕರಿಸಿ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಹಿಂದುಳಿದ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳು ಮತ್ತು ವಿಕಲಚೇತನರಿಗೆ ಉಚಿತ ಕಾನೂನು ನೆರವನ್ನು ಪಡೆಯುವ ಹಕ್ಕುನ್ನು ನೀಡಲಾಗಿದ್ದು, ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದರು.ಸರ್ಕಾರಿ ಅಭಿಯೋಜಕ ರವಿ ಹುಣಿಸಿಮರದ ಹಾಗೂ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರಾದ ಬಿ.ಎಂ. ಶಿರೂರ, ಮಹಾಂತೇಶ ಬೂದಗುಂಪಿ ಮಾತನಾಡಿದರು.
ಅತಿಥಿಗಳಾಗಿ ವಕೀಲರಾದ ಎಚ್.ಎಚ್. ಹಿರೇಮನಿ, ಈರಣ್ಣ ಕೂಳೂರು, ಯು.ಎಸ್. ಮೆಣಸಗೇರಿ, ಶಶಿಧರ ಶ್ಯಾಗೋಟಿ, ಐ.ವಿ. ಪತ್ತಾರ, ಎಸ್.ಎ. ವಾದಿ, ಅಕ್ಕಮಹಾದೇವಿ ಪಾಟೀಲ, ವಿಜಯಲಕ್ಷ್ಮೀ ನವಲಗುಂದ, ಉಮಾ ಕಲ್ಲೂರ, ಸಾವಿತ್ರಿ ಗುರಿಕಾರ, ಎ.ಎಂ. ಪಾಟೀಲ, ಸಾವಿತ್ರಿ ಡೊಳ್ಳಿನ್, ಹಸನಸಾಬ ನದಾಫ್, ರಾಘವೇಂದ್ರ ಹೋಳಿಹಾಳ, ವಿನಾಯಕ ಮತ್ತಿತರರಿದ್ದರು.