ಬ್ಯಾಡಗಿ: ಎಚ್ಐವಿ ಮಾಹಿತಿ ಗೌಪ್ಯವಾಗಿಡುವಲ್ಲಿ ಆರೋಗ್ಯ ಇಲಾಖೆ ಕ್ಯೂಆರ್ ಕೋಡ್ ಅಳವಡಿಸಿದ್ದು, ಇನ್ಮುಂದೆ ಸೋಂಕಿತರು ಹಾಗೂ ಸೋಂಕಿತರಲ್ಲದವರೂ ತಮ್ಮ ಎಚ್ಐವಿ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಡಿ.ಎನ್.ಚಂದ್ರಶೇಖರ ಹೇಳಿದರು.
ಎಚ್ಐವಿಗೆ ಸಂಪೂರ್ಣ ಚಿಕಿತ್ಸೆ ಇದೆ. ಬಹುತೇಕ ಸೋಂಕಿತರು ಮರಳಿ ಬದುಕು ಕಟ್ಟಿಕೊಂಡಂತಹ ಉದಾಹರಣೆಗಳಿವೆ. ಹೀಗಿರುವಾಗ ಅದರ ಬಗ್ಗೆ ಭಯ ಪಡದೇ ಕ್ಯೂಆರ್ ಕೋಡ್ ಬಳಸಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿದಲ್ಲಿ ಆರೋಗ್ಯ ಇಲಾಖೆ ಮುಂದಿನ ಮಾರ್ಗಗಳನ್ನು ತಿಳಿಸಿಕೊಡಲಿದೆ ಎಂದರು.
ಸಮಾಜ ಕಾರ್ಯ ಸಮಗ್ರ ನಿರ್ವಹಣಾ ಸಂಸ್ಥೆಯ ನಿರ್ದೆಶಕಿ ರೂಪಾ ತೆರೆಸಿಟಾ ಮಾತನಾಡಿ, ಅಸುರಕ್ಷಿತ ಲೈಂಗಿಕ ಕ್ರಿಯೆ ಇದಕ್ಕೆ ಮೂಲ ಕಾರಣ. ಹರೆಯದ ಯುವತಿಯರಲ್ಲಿ ಇದು ಹೆಚ್ಚಾಗಿ ಕಾಣುತ್ತಿದೆ. ಆರೋಗ್ಯ ಇಲಾಖೆಯಿಂದ ಮಾತ್ರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಇದರಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ. ಏಡ್ಸ್ ಮುಕ್ತ ಸಮಾಜವನ್ನು ಎಲ್ಲರೂ ಸೇರಿ ನಿರ್ಮಿಸೋಣ. ಅದರಲ್ಲೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಪ್ರಸಕ್ತ ಸನ್ನಿವೇಶದಲ್ಲಿ ಶೋಷಿತರಿಗೆ. ತಿರಷ್ಕೃತರಿಗೆ ಆಶ್ರಯ ನೀಡಬೇಕಾಗಿದೆ. ತಿಳಿದೋ, ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಶಿಕ್ಷೆ ನೀಡುವುದಕ್ಕಿಂತ ಅವರನ್ನು ಅಪ್ಪಿಕೊಳ್ಳುವಂತಹ ಕೆಲಸವಾಗಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಜೀವಿನ ಸಂಸ್ಥೆಯ ಗುರು ಸವಣೂರು, ಸಮಾಜ ಕಾರ್ಯ ಸಮಗ್ರ ನಿರ್ವಹಣಾ ಸಂಸ್ಥೆಯ ಸಂಯೋಜಕ ಈರಣ್ಣ ಬಣಕಾರ ಸೇರಿದಂತೆ ಗ್ರಾಮದ ಮಹಿಳೆಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.