ಯಾವಾಗ ಚುನಾವಣೆ ಘೋಷಣೆಯಾದರು ಸರಿ ಸ್ಥಳೀಯ ಮಟ್ಟದ ಸಂಸ್ಥೆಗಳಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಸಿದ್ಧವಾಗಿರಿ ಎಂದು ಕರ್ನಾಟಕ ರಾಜ್ಯ ಯುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಯಾವಾಗ ಚುನಾವಣೆ ಘೋಷಣೆಯಾದರು ಸರಿ ಸ್ಥಳೀಯ ಮಟ್ಟದ ಸಂಸ್ಥೆಗಳಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಸಿದ್ಧವಾಗಿರಿ ಎಂದು ಕರ್ನಾಟಕ ರಾಜ್ಯ ಯುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಬಾವಿ ಮನೆ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷ ಸಂಘಟನೆ ವಿಚಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸುತ್ತಾಡಿ ಪಕ್ಷ ಸಂಘಟಿಸುತ್ತೇನೆ. ಪ್ರಥಮವಾಗಿ ತುಮಕೂರು ಜಿಲ್ಲೆಯಿಂದ ಜೆಡಿಎಸ್ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ. ಪಕ್ಷದಿಂದ ಯಾರೇ ಹೋಗಲಿ ಯಾರೇ ಉಳಿಯಲಿ ನೀವುಗಳು ಗಟ್ಟಿಯಾಗಿ ಪಕ್ಷದಲ್ಲೇ ಉಳಿಯಬೇಕು. ನಾನು ಎಂಎಲ್ಎ, ಎಂಪಿ ಆಗೋದು ಮುಖ್ಯವಲ್ಲ , ನಮ್ಮ ಪಕ್ಷದಲ್ಲಿ ದುಡಿಯುತ್ತಿರುವ ಕಾರ್ಯಕರ್ತರು ಬೆಳೆಯಬೇಕು. ನಿಮ್ಮೆಲ್ಲರಿಗೂ ಅಧಿಕಾರ ಸಿಕ್ಕಾಗ ನಾವು ಮತ್ತು ನಮ್ಮ ಪಕ್ಷ ಗೆದ್ದಂತೆ. ಎಲ್ಲಾ ಕಾರ್ಯಕರ್ತರು ಪಕ್ಷದ ಅಭಿವೃದ್ಧಿಗೋಸ್ಕರ ನಿಷ್ಠೆಯಿಂದ ದುಡಿಯಬೇಕು ಎಂದರು. ಶಾಸಕ ಬಿ.ಸಿ ಸುರೇಶ್ ಬಾಬು ಮಾತನಾಡಿ, ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರು ಸಹ ರಾಜ್ಯದಲ್ಲಿ ಮುಖ್ಯಮಂತ್ರಿಯಾದರೆ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲಾ ರೈತ ವರ್ಗದವರು ಜೆಡಿಎಸ್ ಗೆಲುವಿಗೆ ಶ್ರಮಿಸಬೇಕು.ಪಂಚತಂತ್ರ ಯೋಜನೆಯ ಅನುಷ್ಠಾನದಿಂದ ಅನೇಕ ಅನುಕೂಲಗಳಾಗಿದ್ದವು. ರೈತರ ಅಭಿವೃದ್ಧಿಗೆ ಈಗಿನ ಸರ್ಕಾರ ಕೆಲಸ ಮಾಡುತ್ತಿಲ್ಲ, ನಿರಂತರ ಬೆಲೆಗಳನ್ನ ಏರಿಕೆ ಮಾಡಿಕೊಂಡು ಬರುತ್ತಿರುವುದು ನಿಮ್ಮೆಲ್ಲರ ಗಮನದಲ್ಲಿದೆ ಎಂದರು.ಈ ವೇಳೆ ಜೆಡಿಎಸ್ ಮುಖಂಡ ಬಿಎಸ್ ನಾಗರಾಜು ಮಾತನಾಡಿದರು. ಕಳ್ಳಿಪಾಳ್ಯ ಲೋಕೇಶ್ ತಿಪ್ಪೇಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ ಆಂಜಿನಪ್ಪ, ಜೆಡಿಎಸ್ ಮುಖಂಡರಾದ ಎಚ್. ಡಿ .ಯಲ್ಲಪ್ಪ ಸುರೇಶ್ ಗೌಡ, ಜಿಎನ್ ಬೆಟ್ಟಸ್ವಾಮಿ, ಹೊನ್ನಗೆರೆ ಗೌಡ, ಕಳ್ಳಿಪಾಳ್ಯ ಲೋಕೇಶ್,ಸಿದ್ದಗಂಗಮ್ಮ, ಯೋಗಾನಂದ ಕುಮಾರ್ ,ಶಿವಲಿಂಗಯ್ಯ, ರಘು ಹಾಗೂ ಕಾರ್ಯಕರ್ತರು ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.