ನಿಶ್ಚಿತಾರ್ಥಕ್ಕೆ ಅಣಿಯಾಗುತ್ತಿದ್ದು ಮನೆಯಲ್ಲಿ ಸಾವಿನ ಕೇಕೆ

KannadaprabhaNewsNetwork |  
Published : Apr 20, 2024, 01:06 AM IST
ಕಕ | Kannada Prabha

ಸಾರಾಂಶ

ನಿಶ್ಚಿತಾರ್ಥದ ಖುಷಿಯಲ್ಲಿರಬೇಕಾಗಿದ್ದ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಾವು ಹಾಕಿದ ಕೇಕೆ ಮೈ ಜುಂ ಎನ್ನಿಸುವಂತಿತ್ತು

ವಿಶೇಷ ವರದಿ ಗದಗ

ಆ ಮನೆಯ ಮಗನಿಗೆ ಮದುವೆ ನಿಶ್ಚಯವಾಗಿತ್ತು. ಸದ್ಯದಲ್ಲಿ ಹುಬ್ಬಳ್ಳಿಯ ಪ್ರಸಿದ್ಧ ಹೋಟೆಲ್ ನಲ್ಲಿ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿಯ ಚರ್ಚೆಯೂ ನಡೆಯುತ್ತಿತ್ತು, ಇದಕ್ಕಾಗಿ ಕೊಪ್ಪಳದಿಂದ ಗದುಗಿಗೆ ಬಂದಿದ್ದರು, ಇನ್ನೇನು ನವ ಜೀವನಕ್ಕೆ ಅಡಿ ಇಡಲು ಸಿದ್ಧವಾಗಿದ್ದ ಯುವಕನ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ನಿಶ್ಚಿತಾರ್ಥದ ಖುಷಿಯಲ್ಲಿರಬೇಕಾಗಿದ್ದ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಾವು ಹಾಕಿದ ಕೇಕೆ ಮೈ ಜುಂ ಎನ್ನಿಸುವಂತಿತ್ತು. ಘಟನಾ ಸ್ಥಳಕ್ಕೆ ಬಂದವರನ್ನೆಲ್ಲ ದುಃಖದ ಮಡುವಿನಲ್ಲಿ ಮುಳಗುವಂತೆ ಮಾಡಿತು.

ಗದಗ ನಗರಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆ ಮಗ ಕಾರ್ತಿಕನಿಗೆ ಹುಬ್ಬಳ್ಳಿ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಇದಕ್ಕಾಗಿಯೇ ಏ.17 ರಂದು ಕೊಪ್ಪಳ ಹಾಗೂ ಬೇರೆ ಊರುಗಳಿಂದ ಗದಗಕ್ಕೆ ಸಂಬಂಧಿಕರು ಆಗಮಿಸಿದ್ದರು. ಹಲವಾರು ವಿಷಯಗಳನ್ನು ಚರ್ಚಿಸಿ ಅವರೆಲ್ಲ ತೆರಳಿದ್ದರು. ಇದೇ ವಿಷಯವಾಗಿ ಆ ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಸಾಕಷ್ಟು ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು, ರಾತ್ರಿ ಖುಷಿಯಿಂದ ಮಲಗಿದವರೆಲ್ಲ ಬೆಳಗ್ಗೆ ಉರಿಸಿರಲ್ಲದಂತಾಗಿದ್ದು ಮಾತ್ರ ಘನ ಘೋರವಾಗಿತ್ತು.

ಜೀವ ಉಳಿಯುತಿತ್ತಾ ?: ಸದ್ಯ ಕೊಲೆಯಾಗಿರುವ ಕೊಪ್ಪಳ ಮೂಲದವರು ಕೂಡಾ ಗುರುವಾರ ಸಂಜೆಯೇ ಕೊಪ್ಪಳಕ್ಕೆ ತೆರಳಬೇಕಾಗಿತ್ತು, ಆದರೆ ರೈಲು ಸರಿಯಾಗಿ ಸಮಯಕ್ಕೆ ಸಿಗದೇ ಇರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಹೋಗುವ ನಿರ್ಧಾರ ಮಾಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮನೆಯಲ್ಲಿ ಹಾಯಾಗಿ ಮಲಗಿದವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದು, ಅವರು ಗುರುವಾರವೇ ಊರಿಗೆ ತೆರಳಿದ್ದರೆ ಆ ಮೂರು ಜೀವಗಳು ಉಳಿಯುತ್ತಿದ್ದಾವಾ ಎನ್ನುವ ಚರ್ಚೆಗಳು ಘಟನೆ ಸ್ಥಳದ ಸುತ್ತಲಿಂದ ಕೇಳಿ ಬರುತ್ತಿವೆ.

ಮಗನ ನಿಶ್ಚಿತಾರ್ಥದ ಕನಸು ಕಂಡಿದ್ದ ತಾಯಿ ಸುನಂದಾ ಬಾಕಳೆ ಬೆಳಗಾಗುವುದರಲ್ಲಿ ಮಗನೂ ಇಲ್ಲ, ಅವನೊಟ್ಟಿಗೆ ಸಂಬಂಧಿಕರೂ ಇಲ್ಲ, ಎಲ್ಲರೂ ದುಷ್ಟರ ಕೈಗೆ ಸಿಕ್ಕು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಸಹಿಸಲಾಗದೇ ಅತ್ತು, ಅತ್ತು ಕಣ್ಣೀರೇ ಬತ್ತಿ ಹೋಗಿದ್ದವು, ಯಾರೇ ಎಷ್ಟೇ ಸಂತೈಸಿದರೂ ಹೆತ್ತ ತಾಯಿಯ ಆ ನೋವು, ವಯಸ್ಸಿಗೆ ಬಂದ ಮಗನನ್ನು ಹೀಗೆ ಕಳೆದುಕೊಂಡಿದ್ದನ್ನು ಸ್ಮರಿಸಿಕೊಂಡು ಅಳುತ್ತಿದ್ದ ದೃಶ್ಯ ಅಲ್ಲಿದ್ದವರ ಕರುಳನ್ನು ಹಿಂಡುವಂತಾಯಿತು.

ಕೊಲೆ ಮಾಡಿದ್ದು ಯಾರು, ಕೊಲೆಗೆ ಕಾರಣವೇನು ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ ಇಷ್ಟೊಂದು ನಿರ್ದಯವಾಗಿ ಒಂದೇ ಕುಟುಂಬದ ನಾಲ್ಕು ಜನರನ್ನು ಕೊಚ್ಚಿ ಹಾಕಿದ್ದು ಮಾತ್ರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಅಮೂಲ್ಯ ಜೀವಗಳನ್ನು ಹತ್ಯೆ ಮಾಡಿರುವುದು ಬೇಸರದ ಸಂಗತಿಯಾಗಿದೆ. ತನಿಖೆಯಿಂದ ಅಪರಾಧಿಗಳು ಪತ್ತೆಯಾಗಬಹುದು, ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆಯೂ ಆಗಬಹುದು ಆದರೆ ಕಳೆದು ಹೋಗಿರುವ ಜೀವಗಳು ಮಾತ್ರ ಮರಳಿ ಬರುವುದಿಲ್ಲ, ಇದನ್ನು ಸ್ಮರಿಸಿಕೊಂಡು ಅಲ್ಲಿದ್ದ ಎಲ್ಲರೂ ಕಣ್ಣೀರು ಹರಿಸುತ್ತಿದ್ದ ದೃಶ್ಯ ಮಾತ್ರ ಎಂತಹ ಕಠೋರ ಮನಸ್ಸಗಳನ್ನು ಮೆತ್ತಗೆ ಮಾಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲ್ಸೇತುವೆಗಳ ಕೆಳಭಾಗದ ಸ್ಥಳಗಳ ಸುಂದರೀಕರಣಕ್ಕೆ ಯೋಜನೆ
ಕ್ಯಾಬಿನೆಟ್‌ ಸಬ್‌ ಕಮಿಟಿ ವರದಿ ಬಳಿಕ ನೈಸ್‌ ಕಂಪನಿ ವಿರುದ್ಧ ಕ್ರಮ: ಸತೀಶ್‌