ರಾಮನಗರ: ಹೆಣ್ಣು ಶಕ್ತಿ ಮತ್ತು ಮಾತೃತ್ವದ ಸಂಕೇತ. ಸಮಾಜದ ಉನ್ನತಿಗೆ ಮಹಿಳಾ ಸಬಲೀಕರಣ ಅನಿವಾರ್ಯ, ಏಕೆಂದರೆ ಸಮಾನತೆ ಇರುವಲ್ಲಿ ಮಾತ್ರ ದೇಶ ಬಲಶಾಲಿ. ಮಹಿಳೆಯರನ್ನು ದೈವಿಕ ಮಾತೃರೂಪದಲ್ಲಿ ಗೌರವಿಸಬೇಕು ಮತ್ತು ಶಿಕ್ಷಣದ ಮೂಲಕ ಅವರನ್ನು ಸಶಕ್ತಗೊಳಿಸಬೇಕು ಎಂಬುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿದರು.
ಎಲ್ಲಿ ಮಹಿಳೆಯರನ್ನು ಪೂಜಿಸಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಮಹಿಳೆಯ ರಕ್ಷಣೆ, ಹಕ್ಕುಗಳು, ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ನೇಗಿಲಯೋಗಿ ಮಹಿಳಾ ಘಟಕ ಮುಂದಾಗಬೇಕು, ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.
ನೇಗಿಲಯೋಗಿ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ್ ಸಿ. ರಾಜು ಮಾತನಾಡಿ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಳೆದ ಐದು ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮಹಿಳಾ ಘಟಕವನ್ನು ಅಸ್ತಿತ್ವಕ್ಕೆ ತಂದಿದ್ದು, ನಮ್ಮ ಟ್ರಸ್ಟ್ ಜೊತೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿ, ಸೇವೆಯನ್ನು ಮಾಡಲು ಮುಂದಾಗಿರುವ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ, ಸನ್ಮಾನಿಸಿ ಗೌರವಿಸಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
9ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಪಟೇಲ್ ಆಂಗ್ಲಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಮನಗರ ತಾಲೂಕು ನೇಗಿಲಯೋಗಿ ಮಹಿಳಾ ಘಟಕದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.