ಚೀನಾವು ಎಂಎಸ್ಎಂಇ ಸೆಕ್ಟರ್ನಲ್ಲಿ ಅತಿ ಹೆಚ್ಚು ಸಾಧನೆ ಮಾಡಿದೆ. 6.5 ಕೋಟಿ ಎಂಎಸ್ಎಂಇ ಹೊಂದಿದ್ದಾರೆ. ಹಾಗೆಯೇ ನಮ್ಮ ದೇಶದಲ್ಲೂ ಎಂಎಸ್ಎಂಇಗಳಿಗೆ ಹೆಚ್ಚು ಮಹತ್ವ ನೀಡಬೇಕಿದೆ. ಭಾರತದಲ್ಲಿ ಇಂದು 13 ಲಕ್ಷ ಎಂಎಸ್ಎಂಇಗಳು ನೋಂದಣಿಯಾಗಿವೆ. ಹಾವೇರಿ ಜಿಲ್ಲೆಯಿಂದ 8 ಸಾವಿರ ಎಂಎಸ್ಎಂಇಗಳು ನೋಂದಣಿಯಾಗಿವೆ.
ಹಾವೇರಿ: ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಕೃಷಿಯು ರೈತರ ಬೆನ್ನೆಲುಬಾಗಿದ್ದು, ಅತಿ ಹೆಚ್ಚು ಜನರು ಕೃಷಿಯನ್ನೇ ಅವಲಂಬಿಸಿದ್ದೇವೆ. ಕೃಷಿಯ ಜತೆಗೆ ಕೈಗಾರಿಕೆಗೂ ಮಹತ್ವ ನೀಡುವುದು ಇಂದಿನ ದಿನಮಾನದಲ್ಲಿ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ನಗರದಲ್ಲಿ ಶುಕ್ರವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ(ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂಎಸ್ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ಹಮ್ಮಿಕೊಂಡಿದ್ದ ಝೆಡ್ಇಡಿ, ಲೀನ್ ಯೋಜನೆ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಚೀನಾವು ಎಂಎಸ್ಎಂಇ ಸೆಕ್ಟರ್ನಲ್ಲಿ ಅತಿ ಹೆಚ್ಚು ಸಾಧನೆ ಮಾಡಿದೆ. 6.5 ಕೋಟಿ ಎಂಎಸ್ಎಂಇ ಹೊಂದಿದ್ದಾರೆ. ಹಾಗೆಯೇ ನಮ್ಮ ದೇಶದಲ್ಲೂ ಎಂಎಸ್ಎಂಇಗಳಿಗೆ ಹೆಚ್ಚು ಮಹತ್ವ ನೀಡಬೇಕಿದೆ. ಭಾರತದಲ್ಲಿ ಇಂದು 13 ಲಕ್ಷ ಎಂಎಸ್ಎಂಇಗಳು ನೋಂದಣಿಯಾಗಿವೆ. ಹಾವೇರಿ ಜಿಲ್ಲೆಯಿಂದ 8 ಸಾವಿರ ಎಂಎಸ್ಎಂಇಗಳು ನೋಂದಣಿಯಾಗಿವೆ. ದೇಶದಲ್ಲಿ 600ಕ್ಕಿಂತಲೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಾರೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಔಷದಿ ಉಪಕರಣಗಳವರೆಗೆ ವಸ್ತುಗಳು ಇಂದು ದೇಶಿಯವಾಗಿ ಉತ್ಪಾದನೆಯಾಗುತ್ತಿವೆ. ಇಂತಹ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕು. ಯಾವ ದೇಶಗಳಲ್ಲಿ ಮಾರಾಟಕ್ಕೆ ಅವಕಾಶಗಳಿವೆ, ರಿಯಾಯಿತಿಗಳು ಏನು, ಉತ್ಪನ್ನಗಳ ಕೋಡ್, ಗುಣಮಟ್ಟದ ಪ್ಯಾಕಿಂಗ್ ವಿಧಾನ, ಪರವಾನಗಿ ಇವೆಲ್ಲವುಗಳ ಅರಿವನ್ನು ಎಂಎಸ್ಎಂಇಗಳು ಉದ್ಯಮಿಗಳಿಗೆ ಮೂಡಿಸಲು ನೇರವಾಗಿವೆ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ ಮಾತನಾಡಿ, ಲೀನ್ ಯೋಜನೆಗಳು ಕೈಗಾರಿಕೋದ್ಯಮ ಹಾಗೂ ಇತರೆ ವ್ಯಾಪಾರಿಗಳಿಗೆ ಸಹಕಾರಿಯಾಗಿದೆ. ಜಿಲ್ಲೆಯ ಉದ್ಯಮಿಗಳು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಶೋಕ ಪ್ಯಾಟಿ ಮಾತನಾಡಿ, ಲೀನ್ ಯೋಜನೆಗಳು ಕೈಗಾರಿಕೆ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಲೀನ್ ಹೆಚ್ಚು ಅನುಕೂಲವಾಗಿದೆ ಎಂದರು.ಬಳಿಕ ಧಾರವಾಡ ವಿಟಿಪಿಸಿ ಉಪ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ ಮಾತನಾಡಿ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿದೆ. ಇದು ಕರ್ನಾಟಕದಲ್ಲಿ ರಫ್ತು ಉತ್ತೇಜನಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಇಡೀ ಭರದಲ್ಲಿಯೇ ಕರ್ನಾಟಕವು ಐಟಿ ಮತ್ತು ಸರ್ವಿಸ್ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕವು ಪ್ರತಿಶತ ಶೇ. 40ರಷ್ಟು ಐಟಿ ಮತ್ತು ಸರ್ವಿಸ್ಗಳನ್ನು ಹೊಂದಿದೆ. ಇನ್ನೂ ವಸ್ತುಗಳ ರಫ್ತುವಿನಲ್ಲಿ ಕರ್ನಾಟಕ ದೇಶದಲ್ಲಿಯೇ 4ನೇ ಸ್ಥಾನದಲ್ಲಿದೆ. ರಾಜ್ಯದ 31 ಜಿಲ್ಲೆಗಳಿಂದಲೂ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. 2024- 25ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯಿಂದ ₹570 ಕೋಟಿ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಜಿಲ್ಲೆಯಿಂದ ಮುಖ್ಯವಾಗಿ ಚಿಲ್ಲಿ ಪೌಡರ್, ತರಕಾರಿ ಮುಂತಾದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ರಣೀಯ ವ್ಯವಸ್ಥಾಪಕ ಪ್ರಭುದೇವ ಎಸ್.ಜಿ., ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್. ಭಾಸ್ಕರ್, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ, ಕಾಸಿಯ ಪ್ಯಾನೆಲ್ ಅಧ್ಯಕ್ಷ ಗಿರೀಶ್ ನಲವಡಿ, ಸಿ.ಎಚ್. ಅಂಗಡಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.