ಜೆಜೆಎಂ, ಎಲ್‌ ಆ್ಯಂಡ್‌ ಟಿ ಕಂಪನಿಗೆ ನೋಟಿಸ್‌ ನೀಡಿ

KannadaprabhaNewsNetwork |  
Published : Jun 14, 2024, 01:01 AM IST
ಹುಬ್ಬಳ್ಳಿ ಮಿನಿ ವಿಧಾನಸೌಧ ಸಭಾಭವನದಲ್ಲಿ ಗುರುವಾರ ಶಾಸಕ ಎಂ.ಆರ್‌. ಪಾಟೀಲ ಅಧ್ಯಕ್ಷತೆಯಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ಜರುಗಿತು. | Kannada Prabha

ಸಾರಾಂಶ

ಕುಂದಗೋಳ ತಾಲೂಕಿನಲ್ಲಿ ಜೆಜೆಎಂ ಹಾಗೂ ಎಲ್ ಆ್ಯಂಡ್ ಟಿ ಕಂಪನಿಯವರು ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರು ಬೇಸತ್ತು, ಇವರ ವಿರುದ್ಧ ಹಲವು ದೂರು ಸಲ್ಲಿಸುತ್ತಿದ್ದಾರೆ.

ಹುಬ್ಬಳ್ಳಿ:

ಪ್ರತಿಬಾರಿ ಸಭೆಗೆ ಗೈರಾಗುವ ಮೂಲಕ ನಿರ್ಲಕ್ಷ್ಯ ತೋರುತ್ತಿರುವ ಜೆಜೆಎಂ ಹಾಗೂ ಎಲ್‌ ಆ್ಯಂಡ್‌ ಟಿ ಕಂಪನಿಗೆ ನೋಟಿಸ್‌ ಜಾರಿಗೊಳಿಸಿ ಎಂದು ಶಾಸಕ ಎಂ.ಆರ್‌. ಪಾಟೀಲ ಖಡಕ್‌ ಸೂಚನೆ ನೀಡಿದರು.ಅವರು ನಗರದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಗುರುವಾರ ನಡೆದ ಕುಂದಗೋಳ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಂದಗೋಳ ತಾಲೂಕಿನಲ್ಲಿ ಜೆಜೆಎಂ ಹಾಗೂ ಎಲ್ ಆ್ಯಂಡ್ ಟಿ ಕಂಪನಿಯವರು ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರು ಬೇಸತ್ತು, ಇವರ ವಿರುದ್ಧ ಹಲವು ದೂರು ಸಲ್ಲಿಸುತ್ತಿದ್ದಾರೆ. ಎಲ್‌ ಆ್ಯಂಡ್ ಟಿ ಕಂಪನಿ ಗ್ರಾಮೀಣ ಭಾಗದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಹಾಗೆಯೇ ಬಿಟ್ಟಿದೆ. ಕಳೆದ 5-6 ಸಭೆಗೆ ಹಾಜರಾಗದೇ ನಿರ್ಲಕ್ಷ್ಯ ತೋರಿದ್ದಾರೆ. ಸಭೆಗೆ ಗೈರಾಗುವ ಮೂಲಕ ಅಗೌರವ ತೋರುವ ಅಧಿಕಾರಿಗಳು ಯಾರೇ ಇದ್ದರೂ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.

ಮುಂಜಾಗೃತಾ ಕ್ರಮಕ್ಕೆ ಸೂಚನೆ:

ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಮಲೇರಿಯಾ ಹಾಗೂ ಡೆಂಘೀ ಪ್ರಕರಣ ಕಂಡುಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಮಳೆ ನೀರು ಹಾಗೂ ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತಿಂಗಳಿಗೆ ಕನಿಷ್ಠ 2 ಬಾರಿಯಾದರೂ ಔಷಧಿ ಸಿಂಪರಣೆ ಮಾಡಿಸಬೇಕು ಎಂದು ಸೂಚಿಸಿದರು.

ಬೀಜ-ಗೊಬ್ಬರಕ್ಕೆ ಕೊರತೆ ಇಲ್ಲ:

ಕುಂದಗೋಳ ತಾಲೂಕಿನಾದ್ಯಂತ ಈಗಾಗಲೇ ಬಿತ್ತನೆ ಪ್ರಕ್ರಿಯೆ ಆರಂಭವಾಗಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಪ್ರಮಾಣದ ಬೀಜ-ಗೊಬ್ಬರಗಳ ದಾಸ್ತಾನು ಸಂಗ್ರಹವಿದೆ. ಬಿತ್ತನೆ ಪ್ರಕ್ರಿಯೆ ಮುಗಿಯುವ ವರೆಗೂ ಕೊರತೆ ಆಗದಂತೆ ಎಚ್ಚರವಹಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಮಳೆ ನಿರೀಕ್ಷೆಯಿಂದ ಬಿತ್ತನೆ ಮಾಡಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ಮತ್ತೊಮ್ಮೆ ಬೀಜಗೊಬ್ಬರ ವಿತರಿಸುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿವೆ. ಈ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯವಿರುವ ರೈತರಿಗೂ ಮತ್ತೊಮ್ಮೆ ಬೀಜಗೊಬ್ಬರ ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಹುಬ್ಬಳ್ಳಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಆರ್.ಎಸ್. ಉಪ್ಪಾರ ಮಾತನಾಡಿ, 2024-25ನೇ ಸಾಲಿನ ವಿವಿಧ ಯೋಜನೆಯ ಅಡಿ ಅರಣ್ಯೀಕರಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹಿರೇಹರಕುಣಿಯಿಂದ ಶಿಶುನಾಳ, ಯರಗುಪ್ಪಯಿಂದ ಶಿರಗುಪ್ಪ, ಕುಸುಗಲ್‌ನಿಂದ ಕಿರೇಸೂರ, ನೆಲವಡಿಯಿಂದ ಮಣಕವಾಡ ಸೇರಿದಂತೆ ಶಹರ ಪ್ರದೇಶದಲ್ಲಿಯೂ ವಿವಿಧ ಜಾತಿಯ ಸಾವಿರಾರು ಸಸಿ ನೆಡುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.

ಆಹಾರ ಇಲಾಖೆ, ಶಿಕ್ಷಣ, ಪಿಡಬ್ಲ್ಯೂಡಿ, ಅಕ್ಷರ ದಾಸೋಹ, ನೀರಾವರಿ ಹಾಗೂ ಹೆಸ್ಕಾಂನ ಪ್ರಗತಿ ಪರಿಶೀಲನೆಯನ್ನು ಶಾಸಕರು ನಡೆಸಿದರು. ಸಭೆಯಲ್ಲಿ ಹುಬ್ಬಳ್ಳಿ ತಾಪಂ ಇಒ ಡಾ. ರಾಮಚಂದ್ರ ಹೊಸಮನಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಸುರೇಶ ಗುರಣ್ಣವರ, ಬಿಇಓ ಉಮೇಶ ಬೊಮ್ಮಕ್ಕನವರ, ಎಸ್.ವಿ. ಬಂಗಾರಿಮಠ ಸೇರಿದಂತೆ ಹಲವರಿದ್ದರು.ಸಮಸ್ಯೆ ಪರಿಹರಿಸುವೆ

ರೈತರಿಗೆ ಉತ್ತಮ ಬಿತ್ತನೆ ಬೀಜ ದೊರೆಯದೆ ಬಿತ್ತಿದ ಬಳಿಕ ಹಾಳಾದಾಗ ಪುನಃ ಖರೀದಿಸಲು ಮುಂದಾಗುತ್ತಾರೆ. ಆದರೆ, ಎಫ್ಐಡಿ ಮೂಲಕ ಈ ಮೊದಲೇ ಬಿತ್ತನೆ ಬೀಜ ಖರೀದಿಸಿದ್ದರಿಂದ ಮರಳಿ ಬೀಜ ಖರೀದಿಸಲು ಬರುವುದಿಲ್ಲ. ಹೀಗಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಜತೆ ಮಾತನಾಡಿ ಈ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ ಎಂದು ಶಾಸಕ ಎಂ.ಆರ್‌. ಪಾಟೀಲ್‌ ಹೇಳಿದರು.

ಸರ್ಕಾರ ಎಫ್‌ಐಡಿ ಮೂಲಕ ರೈತರು ಬಿತ್ತನೆ ಬೀಜ ಖರೀದಿಸುವಂತೆ ಮಾಡಿರುವುದರಿಂದ ಎಲ್ಲ ರೈತರಿಗೂ ಅನುಕೂಲವಾಗಲಿ ಎಂಬ ಉದ್ದೇಶ ಹೊಂದಿದೆ. ಅಲ್ಲದೇ ಮಧ್ಯವರ್ತಿಗಳಿಂದ ರೈತರಿಗೆ ಮೋಸ ಆಗಬಾರದು. ಸರಿಯಾಗಿ ಬಿತ್ತನೆ ಆಗದಿರುವುದರ ಬಗ್ಗೆ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ