- ಬಸ್ತಿಮಠದ ಸರ್ಕಾರಿ ಶಾಲೆಯಲ್ಲಿ ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ
ವಿಶೇಷ ಚೇತನ ಮಕ್ಕಳಿಗೆ ಅನುಕಂಪಕ್ಕಿಂತ ಹೆಚ್ಚು ಅವಕಾಶ ನೀಡಬೇಕು ಎಂದು ಉಪ ತಹಸೀಲ್ದಾರ್ ವೇಣುಗೋಪಾಲ್ ಸಲಹೆ ನೀಡಿದರು.
ಬಸ್ತಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ತಾಲೂಕು ಬಡ್ತಿ ಮುಖ್ಯೋ ಪಾಧ್ಯಾಯರ ಸಂಘದ ಅಧ್ಯಕ್ಷ ಎ.ಇ.ಅಶೋಕ್ ಮಾತನಾಡಿ, ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಸಾಮಾರ್ಥ್ಯ ಇರುತ್ತದೆ. ಆ ಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು. ಅವರ ಭಾವನೆ ಅರ್ಥ ಮಾಡಿಕೊಂಡು ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.
ನೋಡಲ್ ಅಧಿಕಾರಿ ತಿಮ್ಮೇಶ್ ಮಾತನಾಡಿ, ಇದೇ ತಿಂಗಳ 10 ರಂದು ತಾಲೂಕು ಮಟ್ಟದ ವಿಶೇಷ ಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ನಡೆಯಲಿದೆ. ಎಲ್ಲಾ ಮಕ್ಕಳು ಪೋಷಕರೊಂದಿಗೆ ಆಗಮಿಸುವಂತೆ ತಿಳಿಸಿದರು. ಸಿಆರ್.ಪಿ ದೇವರಾಜ್ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ವಿಶೇಷ ಶ್ರವಣ ಶಕ್ತಿ ಗುರುತಿಸುವ ಕೌಶಲ್ಯ, ಜ್ಞಾನ ಇರುತ್ತದೆ. ಹೇಳಿದ ಎಲ್ಲಾ ಕೆಲಸವನ್ನು ಅದ್ಭುತವಾಗಿ ಮಾಡುವ ಸಾಮಾರ್ಥ್ಯವಿರುತ್ತದೆ. ಅವರನ್ನು ಪ್ರೀತಿಯಿಂದ ಕಂಡು ಶಿಕ್ಷಣ ನೀಡಿದರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದರು.