ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗ್ಯಾರಂಟಿ ಅನುಷ್ಠಾನ ಸಮಿತಿಯಡಿ ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆಗಳು ಹೆಚ್ಚು ಜನಪ್ರಿಯವಾಗಿದ್ದು, ಗೃಹಲಕ್ಷ್ಮೀ ಯೋಜನೆಯಲ್ಲಿ ತಾಲೂಕು ಶೇ.೯೯ರಷ್ಟು ಗುರಿ ಸಾಧಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ, ಹಿರಿಯ ವಕೀಲರಾದ ಎಲ್. ಪಿ. ಪ್ರಕಾಶ್ ಗೌಡ ಹೇಳಿದರು.ರಾಜ್ಯ ಗ್ಯಾರಂಟಿ ಸಮಿತಿ ಅನುಷ್ಠಾನ ಸಮಿತಿ ಸುತ್ತೋಲೆ ಮೇರೆಗೆ ಪಟ್ಟಣದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರಿಗೆ ಶುಭಾಶಯ ಕೋರಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ೫ ಗ್ಯಾರಂಟಿ ಯೋಜನೆಗಳು ಹೆಚ್ಚು ಜನಪ್ರಿಯವಾಗಿದ್ದು, ಸೌಲಭ್ಯಗಳು ನಿಜವಾದ ಅರ್ಹರಿಗೆ ಸಿಗಬೇಕು ಎಂಬುದು ಸರ್ಕಾರದ ಆಶಯವಾಗಿದೆ, ತಾಲೂಕಿನಲ್ಲಿ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ೩೦೦ರಷ್ಟು ಮಂದಿಯನ್ನು ಯೋಜನೆಯಿಂದ ಕೈಬಿಟ್ಟು ಅರ್ಹರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.ಈ ಸಾಧನೆಗೆ ಮುಖ್ಯ ಕಾರಣ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಹೆಚ್ಚಿನದಾಗಿದೆ. ಶಕ್ತಿ ಯೋಜನೆಯನ್ನು ತಿಂಗಳೊಂದಕ್ಕೆ ತಾಲೂಕಿನ ೮ ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಳಸಿಕೊಳ್ಳುತ್ತಿದ್ದಾರೆ ಎಂದರು. ಹೆಣ್ಣಿಗೆ ಪೂಜ್ಯ ಸ್ಥಾನಮಾನ ನೀಡಿರುವ ದೇಶ ನಮ್ಮದು, ಹೆಣ್ಣು ಈಗ ಬರೀ ಕುಟುಂಬದ ಕಣ್ಣಲ್ಲ, ಸಮಾಜದ ಕಣ್ಣು, ದೇಶದ ಅಭಿವೃದ್ಧಿಗೆ ಗಂಡಿನಷ್ಟೇ ಸರಿಸಮಾನ ಕೊಡುಗೆ ಹೆಣ್ಣಿನಿಂದಲೂ ಇದೆ. ಪ್ರತಿ ಕ್ಷೇತ್ರದಲ್ಲಿಯೂ ಸಾಧಕಿಯಾಗಿ ತನ್ನ ಛಾಪು ಮೂಡಿಸಿದ್ದಾಳೆ. ಬ್ಯಾಹಕಾಶವನ್ನೂ ಬಿಡದೇ ಪ್ರತಿ ಕ್ಷೇತ್ರದಲ್ಲಿಯೂ ತನ್ನ ಇರುವಿಕೆಯನ್ನು ಸಾಬೀತುಪಡಿಸಿದ್ದಾಳೆ. ಇದರೊಂದಿಗೆ ಸರ್ಕಾರ ಗ್ರಾಮೀಣ ಭಾಗದಲ್ಲಿನ ಮಹಿಳೆಯರ ಸಬಲೀಕರಣಕ್ಕಾಗಿ ಹತ್ತಾರು ಕಾರ್ಯಕ್ರಮಗಳು ರೂಪಿಸಿದ್ದು, ಕಟ್ಟಕಡೆಯ ಮಹಿಳೆಗೂ ಸರ್ಕಾರದ ಸವಲತ್ತು ಸಿಗಬೇಕು ಎಂಬ ಉದ್ದೇಶ ಹೊಂದಿದೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ, ತಾಲೂಕು ಪಂಚಾಯಿತಿ ಇಒ ಜಿ. ಆರ್‌. ಹರೀಶ್ ಗೌಡ ಮಾತನಾಡಿ, ಸಾಕಷ್ಟು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಡಿ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಕುಟುಂಬಕ್ಕೆ, ಅಗತ್ಯ ಔಷಧಿಕೊಳ್ಳಲು ಮತ್ತೆ ಕೆಲವರು ದೇವಸ್ಥಾನಗಳ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಅಗತ್ಯವಿರುವ ಮಂದಿಯಷ್ಟೇ ಯೋಜನೆಯ ಲಾಭ ಪಡೆಯಬೇಕು, ಸಮಿತಿಯ ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಉಳ್ಳವರಿಗೆ ನೀಡುವುದು ಬೇಡ ಎಂದು ತೀರ್ಮಾನಿಸಿ ರಾಜ್ಯ ಮಟ್ಟಕ್ಕೆ ಕಳಿಸಿಕೊಡಲಾಗಿದೆ ಎಂದರು.ಮಹಿಳಾ ದಿನಾಚರಣೆ ಅಂಗವಾಗಿ ಕೆಲ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರಿಗೆ ಶುಭಾಶಯ ಕೋರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ವೇಳೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮಿಲ್ಟ್ರಿ ಮಂಜು, ಕಾಂತರಾಜುಪುರ ನಾಗೇಶ್, ಆನೇಕೆರೆ ರಂಗಸ್ವಾಮಿ, ಅರಳಾಪುರ ನಾಗೇಶ್, ಕೆಂಪೇಗೌಡ, ವೆಂಕಟೇಶ್ ಸೇರಿ ಸಿಡಿಪಿಒ ದಿನೇಶ್, ತಾಪಂ ಸಹಾಯಕ ನಿರ್ದೇಶಕ ಗಿರೀಶ್ ಇದ್ದರು.