ಕನ್ನಡಪ್ರಭ ವಾರ್ತೆ ಕೋಲಾರಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿರುವ ತಿಗಳ ಸಮಾಜಕ್ಕೆ ಮೂಲಭೂತ ಸೌಲಭ್ಯಗಳೊಂದಿಗೆ ರಾಜಕೀಯ ಸ್ಥಾನಮಾನ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಬೇಕಾಗಿದೆ, ಮೀಸಲಾತಿಯಲ್ಲಿ ಜನಸಂಖ್ಯಾ ಆಧಾರದಲ್ಲಿ ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಎಂಎಲ್ಸಿ ಪಿ.ಆರ್. ರಮೇಶ್ ಆಗ್ರಹಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮುದಾಯದಲ್ಲಿ ಪ್ರಮುಖವಾಗಿ ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ, ಆರ್ಥಿಕವಾಗಿ ಸಧೃಢವಾಗಬೇಕಾಗಿದೆ, ಸಾಮಾಜಿಕವಾಗಿ ಅಭಿವೃದ್ದಿ ಹೊಂದಲು ಸರ್ಕಾರವು ವಿಶೇಷವಾದ ಒತ್ತು ನೀಡಬೇಕಾಗಿದೆ, ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಸಮುದಾಯವನ್ನು ಕಡೆಗಣಿಸುತ್ತಾ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ವಹ್ನಿಕುಲ ಅಥವಾ ತಿಗಳ ಸಮುದಾಯದ ಸಂಘಟನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪುನರ್ ರಚಿಸಬೇಕಾಗಿದೆ, ಸಂಘಟನೆಗೆ ಹೊಸ ರೂಪ ನೀಡಿ ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ, ೨೦೧೮ ರಿಂದ ವಹ್ನಿಕುಲಸ್ಥರ ಮೂಲ ಸಂಪ್ರಾಯವಾದ ಕರಗಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ, ರಾಜ್ಯದಲ್ಲಿ ಕರಗ ಮಹೋತ್ಸವಗಳಿಗೆ ೩ ಕೋಟಿ ರು.ಗಳು ಮಂಜೂರಾಗಿದ್ದ ಇದರಲ್ಲಿ ಸಿಂಹಪಾಲು ಕೋಲಾರ ಜಿಲ್ಲೆಯದ್ದಾಗಿದೆ ಎಂದರು.ತಿಗಳ ಸಮನ್ವಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಲ್.ಎ.ಮುಂಜುನಾಥ್ ಮಾತನಾಡಿ, ದಿಲ್ಲೆಯಲ್ಲಿ ಜನಾಂಗ ರಾಜಕೀಯ ಆಶ್ರಯ ಸಿಗದೆ ವಂಚಿತವಾಗಿದೆ. ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳಿಗೆ ಒತ್ತಾಯಿಸುವ ಮೂಲಕ ಗಮನ ಸೆಳೆಯಬೇಕಾಗಿದೆ, ನಮ್ಮ ಜಿಲ್ಲೆಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ಸಂಘಟನೆಗಳನ್ನು ಹೊಂದಿದೆ ಎಂದರು. ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ
ಸಮಿತಿಯ ರಾಜ್ಯ ಗೌರವಾಧ್ಯಕ್ಷ ಪಲ್ಲವಿ ಮಣಿ ಮಾತನಾಡಿ, ಈಗ ನಮ್ಮ ಮುಂದಿನ ಗುರಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವುದು ಸವಾಲಾಗಿ ಪರಿಣಮಿಸಿದೆ. ನಂತರದಲ್ಲಿ ಸಹಕಾರ ಬ್ಯಾಂಕ್ಗಳನ್ನು ಸ್ಥಾಪಿಸಬೇಕಾಗಿದೆ. ಇದಕ್ಕೆ ಸಮುದಾಯದ ಸಹಕರಿಸಬೇಕು ಎಂದರು.ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಎಂ.ವೆಂಕಟೇಶ್, ಸಮಿಯ ಪ್ರಧಾನ ಕಾರ್ಯದರ್ಶಿ ಎನ್.ಫಲ್ಗುಣ, ಹಿರಿಯ ಉಪಾಧ್ಯಕ್ಷರಾದ ಹೋಳೂರಿನ ಹೆಚ್.ಆರ್.ನಾರಾಯಣಸ್ವಾಮಿ, ಎಂ.ಕೆ.ವೆಂಕಟೇಶ್, ಉಪಾಧ್ಯಕ್ಷರಾದ ಎಸ್.ಮಂಜುನಾಥ್ ಮತ್ತಿತರರು ಇದ್ದರು.