ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಗರಹಳ್ಳಿ, ವಿನೋಬನಗರ, ಚಿಕ್ಕಜಂತಕಲ್ ಗ್ರಾಮಗಳ ಮಾದಿಗ ಹಾಗೂ ಚಲುವಾದಿ ಸಮಾಜಗಳಿಗೆ ರುದ್ರಭೂಮಿಗೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಗರಹಳ್ಳಿ, ವಿನೋಬನಗರ, ಚಿಕ್ಕಜಂತಕಲ್ ಗ್ರಾಮಗಳ ಮಾದಿಗ ಹಾಗೂ ಚಲುವಾದಿ ಸಮಾಜಗಳಿಗೆ ರುದ್ರಭೂಮಿಗೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಮಾದಿಗ ಮತ್ತು ಚಲುವಾದಿ ಸಮಾಜದವರಿಗೆ ಅಧಿಕೃತವಾಗಿ ರುದ್ರಭೂಮಿ ಇಲ್ಲದ ಕಾರಣ ತುಂಗಭದ್ರಾ ನದಿ ಪಕ್ಕದ ಉಳಿದ ಜಾಗದಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ನದಿ ತುಂಬಿದ ಸಮಯದಲ್ಲಿ ಶವಸಂಸ್ಕಾರ ಮಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರವಾಹದ ಸಮಯದಲ್ಲಿ 2-3 ದಿನ ಶವ ಮನೆಯಲ್ಲಿಯೇ ಇಟ್ಟುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಮೇಲಿನ ಗ್ರಾಮಗಳಲ್ಲಿನ ಮಾದಿಗ ಹಾಗೂ ಚಲುವಾದಿ ಸಮಾಜಕ್ಕೆ ಶವಸಂಸ್ಕಾರ ಮಾಡಲು ರುದ್ರಭೂಮಿ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.ಕೂಡಲೇ ತಾಲೂಕಾಡಳಿತ ಈ ಗ್ರಾಮಗಳ ಮಾದಿಗ/ಚಲುವಾದಿ ಸಮಾಜಕ್ಕೆ ರುದ್ರಭೂಮಿಗೆ ಜಾಗ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಭಟ್ಟರಹಂಚಿನಾಳ ಸೀಮಾ ಸ.ನಂ: 68 ವಿಸ್ತೀರ್ಣ 1 ಎಕರೆ ಭೂಮಿ ಗಾಳೆಮ್ಮಗುಡಿ ಕ್ಯಾಂಪಿನ ಮಾದಿಗ ಸಮಾಜದ ರುದ್ರಭೂಮಿಯನ್ನು ಸರ್ವೇ ಮಾಡಿ ಸುತ್ತಲೂ ಫಿನ್ಸ್ ಅಳವಡಿಸಿ ಹದ್ದುಬಸ್ತ್ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಈ ವೇಳೆ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ರಮೇಶ ಅಂಗಡಿ, ಸುಮಿತ್ರಕುಮಾರ, ಯಂಕೋಬ ಮೈಲಾಪುರ, ಹನುಮೇಶ ಸುಳೇಕಲ್, ನೀಲಪ್ಪ ಡಣಾಪುರ, ಮರಿಸ್ವಾಮಿ ಹೊಸಕೇರಿಡಗ್ಗಿ, ನಾಗರಾಜ ಕಾಮದೊಡ್ಡಿ ವಿನೋಬನಗರ, ದೇವದಾಸ ಚಿತ್ತಲಕುಂಟ, ಮಂಜುನಾಥ ಬಡಿಗೇರ, ಅಶೋಕ ವೆಂಕಟಗಿರಿ, ಮರಿಸ್ವಾಮಿ ಸಣಾಪುರ, ಮಹಾದೇವ ಕಾಟಾಪುರ, ಯಮನೂರ ಈಳಿಗನೂರು, ವೀರೇಶ ದೇವರಮನಿ, ನಾಗರಾಜ ಗೋಡಿನಾಳ, ಶಿವಲಿಂಗ ಭಂಡಾರಿ, ಸಂತೋಷ ನಾಗೇನಹಳ್ಳಿ ಸೇರಿದಂತೆ ಗ್ರಾಮಗಳ ಹಿರಿಯರು, ಮುಖಂಡರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.