-ತಡಿಬಿಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾವರಣದಲ್ಲಿ ಸಂಪೂರ್ಣತಾ ಅಭಿಯಾನ ಮೇಳ ಉದ್ಘಾಟಿಸಿದ ಸಚಿವ ವಿ. ಸೋಮಣ್ಣ
--------ಕನ್ನಡಪ್ರಭ ವಾರ್ತೆ ವಡಗೇರಾ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ಆಯ್ಕೆಯಾಗಿರುವ ಯಾದಗಿರಿ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿ ಬರುವಂತೆ ನೋಡಿಕೊಳ್ಳಬೇಕೆಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾವರಣದಲ್ಲಿ ನಡೆದ ಸಂಪೂರ್ಣತಾ ಅಭಿಯಾನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ 112 ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಆಯ್ಕೆ ಮಾಡಿದ್ದು, ಅದರಲ್ಲಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆ ಕೂಡ ಇವೆ. ಈ ಹಿನ್ನಲೆಯಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಕುಡಿವ ನೀರು, ಕೃಷಿ ಇಲಾಖೆ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿ ತರಲು ಪ್ರಯತ್ನಿಸಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡುವಂತೆ ತಿಳಿಸಿದರು.ಜಿಲ್ಲೆಯಲ್ಲಿ 7 ಸಾವಿರ ಶಿಕ್ಷಕರ ಪೈಕಿ ಕೇವಲ 3 ಸಾವಿರ ಶಿಕ್ಷಕರ ಗುರಿ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ವಿನಂತಿಸುವುದಾಗಿ ತಿಳಿಸಿದ ಅವರು ತಕ್ಷಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಮ್ಮ ಇಲಾಖೆ ಆಯುಕ್ತರಿಗೆ ಖುದ್ದಾಗಿ ಭೇಟಿ ನೀಡಿ, ಶಿಕ್ಷಕರ ಕೊರತೆ ನೀಗಿಸಲು ನನ್ನೊಂದಿಗೆ ಸಮನ್ವಯತೆ ಸಾಧಿಸಬೇಕು. ಅದರಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ಅವಶ್ಯಕತೆ ತೀರ ಇರುವುದರಿಂದ ನೇಮಕಾತಿ ನಡೆಯುವ ಅಗತ್ಯವಿದೆ ಎಂದು ಹೇಳಿದರು.
ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವಂತಹ ಕೂಲಿಕಾರರ ಮಕ್ಕಳಿಗೆ ನೋಡಿಕೊಳ್ಳಲು ಕೂಸಿನ ಮನೆ ಸೌಲಭ್ಯ ಇದ್ದು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಈ ಮಕ್ಕಳ ಆರೈಕೆ ನೋಡಿಕೊಳ್ಳುತ್ತಿರುವುದರಿಂದ ಅವರಿಗೆ ಕನಿಷ್ಠ ಸಂಬಳ ನಿಗದಿಪಡಿಸುವ ಅವಶ್ಯಕತೆ ಇದ್ದು, ಈ ಕುರಿತಂತೆ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಹೇಳಿದರು.ರೈತರ ಸಮಗ್ರ ಅಭಿವೃದ್ಧಿಗೆ ನೆರವಾಗುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಇಲಾಖೆಗೆ ಅವಶ್ಯಕ ಅನುದಾನ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿ ರೈತರ ಜೀವನ ಸುಧಾರಣೆಯಾಗಬೇಕು. ರೈತಾಪಿ ಜನರ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು. ಪ್ರತಿ ರೈತರಿಗಾಗಿ ಇರುವಂತಹ ಮಣ್ಣಿನ ಸತ್ವ ಪರೀಕ್ಷೆ, ಯೋಜನೆಗಳ ಲಾಭ ದೊರಕಿಸುವಂತೆ ಅವರು ಸಲಹೆ ನೀಡಿದರು.
ಭಾರತದ ಉತ್ತಮ ಭವಿಷ್ಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮೇಲ್ವಿಚಾರಕರು, ಆಹಾರ ಇಲಾಖೆಯ ಅಧಿಕಾರಿಗಳು ಪೌಷ್ಟಿಕಾಂಶವುಳ್ಳ ಆಹಾರವನ್ನು ಪ್ರಾಮಾಣಿಕವಾಗಿ ತಲುಪಿಸುವಂತೆ ಸೂಚಿಸಿದ ಅವರು ಕುಡಿವ ನೀರು, ರಸ್ತೆ, ಬೀದಿ ದೀಪ, ಮೂಲಸೌಕರ್ಯಗಳ ಸವಲತ್ತುಗಳನ್ನು ಆದ್ಯತೆ ಮೇಲೆ ತಲುಪಿಸುವಂತೆ ಸೂಚನೆ ನೀಡಿದರು.ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಪಾಲನೆ ಸೇರಿದಂತೆ ವಿವಿಧ ಯೋಜನೆಗಳ ಅಡಿ ನೀಡಲಾಗುವ ಪ್ರೋತ್ಸಾಹ ಧನ ಸೌಲಭ್ಯವನ್ನು ಆದ್ಯತೆ ಮೇಲೆ ತಲುಪಿಸಬೇಕು. ಬಡ ಜನರು ಈ ಎಲ್ಲ ಇಲಾಖೆಗಳ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದರಿಂದ ಸಕಾಲಕ್ಕೆ ಅವರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳ ನಿರೀಕ್ಷೆಯಂತೆ ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಯಾದಗಿರಿ ಜಿಲ್ಲೆಯನ್ನು ಮಹತ್ವಕಾಂಕ್ಷಿ ಜಿಲ್ಲೆಯಾಗಿ ಆಯ್ಕೆ ಮಾಡಿರುವುದರಿಂದ ಸದ್ಯ ಅಭಿವೃದ್ಧಿ ಸೂಚ್ಯಂಕದಲ್ಲಿ 77 ನೇ ಸ್ಥಾನದಲ್ಲಿರುವುದರಿಂದ ಮುಂಚೂಣಿಗೆ ತರಲು ಪ್ರಯತ್ನಿಸಬೇಕು ಎಂದರು.ಗರ್ಭಿಣಿ ಮಹಿಳೆಯರ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನರ ಜೀವನದಲ್ಲಿ ಯಾವ ರೀತಿ ಬದಲಾವಣೆ ತರಬೇಕು ಎಂಬುದು ಅಧಿಕಾರಿಗಳು ನಿರ್ಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪ್ರತಿ ಶಾಲೆಗೆ ವಿದ್ಯುತ್ ಸೌಲಭ್ಯ ಇರುವಂತೆ ಹಾಗೂ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು.
ಸಚಿವರು ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ , ಮಣ್ಣು ಆರೋಗ್ಯ ಪರೀಕ್ಷೆ ಚೀಟಿ ವಿತರಿಸಿದರು. ಗರ್ಭಿಣಿ ಬಾಣಂತಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಟ್ಟರು.ಜಿಲ್ಲಾಧಿಕಾರಿ ಡಾ. ಸುಶೀಲಾ ಮಾತನಾಡಿ, 2018 ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರದ 112 ಜಿಲ್ಲೆಗಳನ್ನು ಸೂಚ್ಯಂಕ ಆಧಾರದಲ್ಲಿ ಮಹತ್ವಕಾಂಕ್ಷಿ ಜಿಲ್ಲೆಯಾಗಿ ಆಯ್ಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ವಡಿಗೇರಾ ಮಹತ್ವಾಕಾಂಕ್ಷಿ ಬ್ಲಾಕ್ ಎಂದು ಘೋಷಣೆ ಮಾಡಿದ್ದು, ಶೇ. 100 ರಷ್ಟು ಪ್ರಗತಿ ಸಾಧಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.--------
....ಬಾಕ್ಸ್.....ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವರ ಭೇಟಿ :
ಸಚಿವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ನಾಲ್ಕು ಎಕರೆ ಪ್ರದೇಶದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಸಂಬಂಧಿಸಿದ ಅಧಿಕಾರಿಗಳು ಅವಶ್ಯಕ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡುತ್ತಿರುವುದರಿಂದ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕಾಂಕ್ರೀಟ್ ಸಸಿಗಳನ್ನು ಬೆಳೆಸಲು ಗಮನ ನೀಡಬೇಕು. ಹೊಸ ಕಟ್ಟಡ ನಿರ್ಮಾಣ ಆದ ನಂತರ ಹಳೆಯ ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಂತರ ಶಸ್ತ್ರ ಚಿಕಿತ್ಸೆ ವಿಭಾಗ ಮತ್ತು ರೋಗಿಗಳ ಆರೋಗ್ಯ ವಿಚಾರಣೆ ಮಾಡಿದರು. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ತಡಿಬಿಡಿ ಗ್ರಾ.ಪಂ ಅಧ್ಯಕ್ಷ ಉಮಾರೆಡ್ಡಿ, ಡಿಡಿಪಿಐ ಮಂಜುನಾಥ, ಡಿಎಚ್ಒ ಡಾ. ಎಂ.ಎಸ್. ಪಾಟೀಲ್ ಇದ್ದರು.--------
ಫೋಟೋ...4ವೈಡಿಆರ್9: ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾವರಣದಲ್ಲಿ ನಡೆದ ಸಂಪೂರ್ಣತಾ ಅಭಿಯಾನ ಮೇಳವನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು.
----4ವೈಡಿಆರ್10: ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾವರಣದಲ್ಲಿ ನಡೆದ ಸಂಪೂರ್ಣತಾ ಅಭಿಯಾನ ಮೇಳದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ , ಮಣ್ಣು ಆರೋಗ್ಯ ಪರೀಕ್ಷೆ ಚೀಟಿ ವಿತರಿಸಿದರು.
----4ವೈಡಿಆರ್11: ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪರಿಶೀಲಿಸಿದರು.