ಸಲಹೆ ಕೊಟ್ಟರೆ ದುರಹಂಕಾರದ ಮಾತು : ಎಚ್.ಡಿ ಕುಮಾರಸ್ವಾಮಿ

KannadaprabhaNewsNetwork |  
Published : Dec 26, 2025, 01:45 AM IST
HD Kumaraswamy

ಸಾರಾಂಶ

ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಲಹೆ ಕೊಟ್ಟರೆ, ರಾಜ್ಯ ಸರ್ಕಾರದವರು ದುರಂಹಕಾರದ ಮಾತುಗಳನ್ನು ಆಡುತ್ತಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು :  ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಲಹೆ ಕೊಟ್ಟರೆ, ರಾಜ್ಯ ಸರ್ಕಾರದವರು ದುರಂಹಕಾರದ ಮಾತುಗಳನ್ನು ಆಡುತ್ತಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಗುರುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸುಶಾಸನ ದಿನಾಚರಣೆ ಮತ್ತು ಅಟಲ್ ಪುರಸ್ಕಾರ-2025 ಕಾರ್ಯಕ್ರಮ’ದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬೆಂಗಳೂರು ನಗರ ಸೇರಿ ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಲಹೆ ಕೊಟ್ಟರೆ, ರಾಜ್ಯ ಸರ್ಕಾರದವರು ದುರಂಹಕಾರದ ಮಾತು ಆಡುತ್ತಾರೆ. ಪ್ರಧಾನಿ ಬಗ್ಗೆ ಮತ್ತು ಗೃಹ ಸಚಿವರ ಬಗ್ಗೆ ಬಳಸುವ ಪದಗಳನ್ನು ಗಮನಿಸಿದರೆ ಇವರು ಸಂಸ್ಕೃತಿ ಹೊಂದಿರುವ ವ್ಯಕ್ತಿಗಳಾ ಎಂಬ ಅನುಮಾನ ಮೂಡುತ್ತದೆ ಎಂದು ಕಿಡಿಕಾರಿದರು.

ನಾವು ಸಣ್ಣವರಾಗುತ್ತೇವೆ:

ವಾಜಪೇಯಿ ಅವರ ಸ್ಮರಣಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಬಗ್ಗೆ ಮಾತನಾಡಿದರೆ ನಾವು ಸಣ್ಣವರಾಗುತ್ತೇವೆ. ಆದರೆ ಸುಶಾಸನ ಆಡಳಿತ ನೀಡಿದ ದೇಶದ ಮೊದಲ ರಾಜ್ಯ ಕರ್ನಾಟಕ. ಆದರೆ ಇವತ್ತು ರಾಜ್ಯದಲ್ಲಿ ಹುಡುಗಾಟಿಕೆಯ ರಾಜಕಾರಣ ನಡೆಯುತ್ತಿದೆ. ರೈತರು ಬದುಕು, ಶಿಕ್ಷಣಕ್ಷೇತ್ರ, ಆರೋಗ್ಯಕ್ಷೇತ್ರ ಅದೋಗತಿಗೆ ಹೋಗಿದೆ. ಯಾವ ಇಲಾಖೆಯಲ್ಲಿ ಇವತ್ತು ಉತ್ತಮ ಆಡಳಿತ ನಡೆಯುತ್ತಿದೆ ನೀವೆ ಹೇಳಿ? ನಾಡಿನ ಜನತೆ ಬುದ್ಧಿವಂತರಾಗಬೇಕು ಎಂದರು.

ವಾಜಪೇಯಿ ಅವರು ಈ ದೇಶ ಕಂಡಂಥ ಮಹಾನ್‌ ನಾಯಕ. ಅವರು ಸಣ್ಣ ಕುಟುಂಬದಲ್ಲಿ ಜನಿಸಿದ್ದರು. ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾಗ ಯಶಸ್ಸು ಕಾಣಲಿಲ್ಲ. ಆದರೆ ಅವರು ನಿರಾಸೆಗೂ ಒಳಗಾಗಲಿಲ್ಲ. ಅವರ ಹೋರಾಟ ಸುದೀರ್ಘವಾಗಿತ್ತು. ದಾಖಲೆಯಲ್ಲಿ ಉಳಿಯುವಂಥ ಹೋರಾಟ ಅವರದಾಗಿತ್ತು. ಅಂತಹ ನಾಯಕರನ್ನು ಇಂದು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ನಾವು ಆರ್ಥಿಕವಾಗಿ, ತಾಂತ್ರಿಕವಾಗಿ ಬೆಳೆಯುತ್ತಿದ್ದೇವೆ. ಆದರೆ ಮಾನವೀಯತೆ, ಮನುಷತ್ವ ಸಂಪೂರ್ಣವಾಗಿ ನಾಶವಾಗುತ್ತಿದೆ. ನಮ್ಮ ಸಂಸ್ಥಾರ, ನಮ್ಮ ಕುಟುಂಬಗಳ ಬಾಂದವ್ಯಗಳು ಮುಂದುವರಿಯಬೇಕು. ಹೀಗಾಗಿ ನಮ್ಮ ಹಿಂದಿನ ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಮುಂದಿನ ಪೀಳಿಗೆಗೆ ವರ್ಗಾಹಿಸುವ ಕೆಲಸವಾಗಬೇಕು. ನಮ್ಮ ಸಂಸ್ಕಾರ ಮುಂದುವರೆಸಲು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ಉನ್ನತ ಶಿಕ್ಷಣ ಡೋಲಾಯಮಾನ:

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಡೋಲಾಯಮಾನ ಸ್ಥಿತಿಯಲ್ಲಿದೆ. ರಾಜ್ಯದ ಮಕ್ಕಳ ಭವಿಷ್ಯ ಬರೆಯಬೇಕೆಂದರೆ ಎನ್ಇಪಿ ಜಾರಿಯಾಗಬೇಕು. ರಾಜಕೀಯ ಕಾರಣಕ್ಕೆ ಶಿಕ್ಷಣ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗಬಾರದು. ಶಿಕ್ಷಣ ರಾಜಕೀಯ ಮುಕ್ತವಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಬಿಳಿಯಾನೆ ಆಗಿರುವ ವಿ.ವಿಗಳಿಗೆ ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಆದರೆ, ಹೊಸದಾಗಿ ಬಂದಿರುವ ವಿವಿಗಳಿಗೆ ಯಾವುದೇ ಹಣ ಕೊಡುತ್ತಿಲ್ಲ. ಈ ಬಗ್ಗೆ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮೂವರಿಗೆ ಅಟಲ್ ಪುರಸ್ಕಾರ ಪ್ರದಾನ

ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್, ರಾಜೀವ್ ಗಾಂಧಿ ವಿಶ್ವವಿದ್ಯಾಲಯ (ಆರ್‌ಜೆಯುಎಚ್‌ಎಸ್) ಮಾಜಿ ಕುಲಪತಿ ಡಾ.ಎಸ್.ಚಂದ್ರಶೇಖರ್ ಶೆಟ್ಟಿ ಮತ್ತು ಬಿಎಎಸ್ಇ (ಬೇಸ್) ಮತ್ತು ಪ್ರಯೋಗ ಸಂಸ್ಥೆ ಸ್ಥಾಪಕರಾದ ಡಾ.ಎಚ್‌.ಎಸ್‌.ನಾಗರಾಜ ಅವರಿಗೆ 2025 ನೇ ಸಾಲಿನ ಅಟಲ್‌ ಪುರಸ್ಕಾರ ನೀಡಿ ಗೌರವಿಸಲಾಯಿತು.

ದೇಶದಲ್ಲಿ ಎನ್ಇಪಿ ಜಾರಿ ಮಾಡಿದ ಪ್ರಥಮ ರಾಜ್ಯ ಕರ್ನಾಟಕ. ನಾನು ಒಂದೂವರೆ ವರ್ಷ ತಜ್ಞರ ಸಮಿತಿ ಮಾಡಿ, ವಿಶ್ವವಿದ್ಯಾಲಯಗಳಿಗೆ ಭೇಟಿ ಚರ್ಚಿಸಿ ನಂತರ ಎನ್ಇಪಿ ಜಾರಿಗೆ ತರಲಾಯಿತು. ಆದರೆ ಕಾಂಗ್ರೆಸ್‌ ಸರ್ಕಾರ ಎನ್‌ಇಪಿ ಮುಂದುವರಿಯಲಿಲ್ಲ ಎಂಬುದು ಬೇಸರದ ಸಂಗತಿ.

-ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಉಪಮುಖ್ಯಮಂತ್ರಿ

ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್‌ ಆಗಿದ್ದು ಹೇಗೆ?

ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ನ ಲೂಟಿ ಸರ್ಕಾರ. ಒಬ್ಬ ಆರ್ಥಿಕ ಸಚಿವರಿಗೆ ಗೃಹಲಕ್ಷ್ಮೀ ಯೋಜನೆಯ ₹5 ಸಾವಿರ ಕೋಟಿ ಬಗ್ಗೆ ಮಾಹಿತಿಯೇ ಇಲ್ಲವೆಂದರೆ ಹೇಗೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಕ್ರಿಯಾಸಮಾಧಿಗೆ ಗೌರವ ಸಮರ್ಪಿಸಿ, ದುಃಖತಪ್ತ ಶಾಮನೂರು ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ, ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ಖಜಾನೆಯನ್ನೇ ಕಾಂಗ್ರೆಸ್‌ನವರು ಲೂಟಿ ಮಾಡುತ್ತಿದ್ದಾರೆ. ಇನ್ನು, ಎಸ್‌ಸಿಪಿ-ಟಿಎಸ್‌ಪಿ ಅನುದಾನವೆಲ್ಲಾ ಈ ಸಿದ್ದರಾಮಯ್ಯಗೆ ಏನು ಮಹಾ ಎಂದು ಪ್ರಶ್ನಿಸಿದರು.

ಪ್ರಸ್ತುತ ಬಾರ್ ಲೈಸೆನ್ಸ್ ಪಡೆಯಲು ₹1.75 ಕೋಟಿಯನ್ನು ಕಾಂಗ್ರೆಸ್ ಸರ್ಕಾರಕ್ಕೆ ನೀಡಬೇಕಿದೆ. ಇದೇ ಕಾಂಗ್ರೆಸ್ ಪಕ್ಷದ ಹೊಸ ವರ್ಷದ ಕೊಡುಗೆ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು.ಕಾಂಗ್ರೆಸ್ ಪಕ್ಷದ ಚಟುವಟಿಕೆಗಳ ಬಗ್ಗೆ ನಾನಾಗಲಿ, ರಾಜ್ಯದ ಜನತೆಯಾಗಲಿ ಯಾವುದೇ ‍‍ಆಸಕ್ತಿ ಹೊಂದಿಲ್ಲ. ಪ್ರಪಂಚದಲ್ಲೇ ಸಿದ್ದರಾಮಯ್ಯನಂತಹ ಆರ್ಥಿಕ ತಜ್ಞನನ್ನು ನಾವು ನೋಡಿಯೇ ಇಲ್ಲ. ಅಮೆರಿಕದಂತಹ ದೇಶವೇ ಇಂದು ಆರ್ಥಿಕ ಸಂಕಷ್ಟದಲ್ಲಿದೆ. ಜಗತ್ತಿನ ದೊಡ್ಡಣ್ಣ ಅಂತಲೇ ಕರೆಯಲ್ಪಡುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಲ್ಲಿ ಹೋಗಿ ಆರ್ಥಿಕ ತಜ್ಞರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಸಲಹೆ ನೀಡಲಿ ಎಂದು ವ್ಯಂಗ್ಯವಾಡಿದರು.

ಶಾಮನೂರು ಕ್ರಿಯಾಸಮಾಧಿಗೆ ಎಚ್‌ಡಿಕೆ ಪುಷ್ಪನಮನ:

ನಗರದ ಶ್ರೀ ಕಲ್ಲೇಶ್ವರ ಮಿಲ್ ಆವರಣದಲ್ಲಿ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಸಮಾಧಿಗೆ ಕುಮಾರಸ್ವಾಮಿ ಅವರು ಜೆಡಿಎಸ್ ಮುಖಂಡರ ಸಮೇತ ತೆರಳಿ ಪುಷ್ಪನಮನ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು.

ನಂತರ ಶಾಮನೂರು ನಿವಾಸ ಶಿವ ಪಾರ್ವತಿಗೆ ಬಂದು, ಶಾಮನೂರು ಪುತ್ರರಾದ ಎಸ್‌.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್‌, ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಮನೂರು ಪುತ್ರಿಯರು ಹಾಗೂ ಮಕ್ಕಳು, ಮೊಮ್ಮಕ್ಕಳು, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಇದೇ ವೇಳೆ ತಮ್ಮ ಹಾಗೂ ಶಾಮನೂರು ಕುಟುಂಬದ ಬಾಂಧವ್ಯವನ್ನು ಉಭಯ ಮುಖಂಡರು ಮೆಲುಕು ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಲಿಂಗಾಯತ, ಗಾಣಿಗಕ್ಕೆ ಕಾನೂನಲ್ಲಿ ಪ್ರತ್ಯೇಕ ಗುರುತಿಲ್ಲ: ಕೋರ್ಟ್‌
ಸರ್ಕಾರಿ ಶಾಲೆಗೆ ಉದ್ಯಮಿಯಿಂದ ಪ್ರೊಜೆಕ್ಟರ್, ಧ್ವನಿವರ್ಧಕ ವಿತರಣೆ