ಕನ್ನಡಪ್ರಭವಾರ್ತೆ ಪಾಂಡವಪುರ

ತಾಲೂಕಿನ ಸುಂಕಾತೊಣ್ಣೂರು ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಉದ್ಯಮಿ ಎಸ್.ಡಿ.ಶಿವಕುಮಾರ್ 1 ಲಕ್ಷ ರು. ಮೌಲ್ಯದ ಎರಡು ಪ್ರೊಜೆಕ್ಟರ್ ಹಾಗೂ ಧ್ವನಿವರ್ಧಕಗಳನ್ನು ಉಚಿತವಾಗಿ ವಿತರಿಸಿದರು.

ಬಳಿಕ ಮಾತನಾಡಿದ ಅವರು, ನಾನು ಓದಿ ಬೆಳೆದ ನಮ್ಮೂರಿ ಸರ್ಕಾರಿ ಶಾಲೆಗಳಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗಲು ವೈಯುಕ್ತಿಕವಾಗಿ ಪ್ರೊಜೆಕ್ಟರ್ ಹಾಗೂ ಧ್ವನಿವರ್ಧಕಗಳನ್ನು ವಿತರಿಸಿದ್ದೇನೆ ಎಂದರು.

ಮುಂದಿನ ದಿನಗಳಲ್ಲಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ಸಹಕಾರ ನೀಡಲಾಗುವುದು. ಮಕ್ಕಳು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ ಒಡೆತನದ ಎಚ್‌ಪಿಸಿಎಲ್ ಹಾಗೂ ಎಲ್‌ಪಿಜಿ ಕಂಪನಿಗಳ ಅಧಿಕಾರಿಗಳೊಂದಿಗೆ ಸುಂಕಾತೊಣ್ಣೂರು ವ್ಯಾಪ್ತಿಯ ಹಳ್ಳಿಗಳಾದ ಹೆಗ್ಗಡಹಳ್ಳಿ, ಕಾಳೇನಹಳ್ಳಿ, ಈರೇಗೌಡನಕೊಪ್ಪಲು, ಮಾಡರಹಳ್ಳಿ ಹಾಗೂ ಅತ್ತಿಗನಹಳ್ಳಿ ಸರ್ಕಾರಿ ಶಾಲೆಗಳಿಗೆ ಭೇಟಿಕೊಟ್ಟು ಅಲ್ಲಿನ ಶಿಕ್ಷಕರೊಂದಿಗೆ ಚರ್ಚಿಸಿದ್ದೇವೆ ಎಂದರು.


ಶಾಲಾ ಶಿಕ್ಷಕರು ಅಗತ್ಯವಿರುವ ಕಂಪ್ಯೂಟರ್, ಪೀಠೋಪಕರಣಗಳು, ಶುದ್ಧ ಕುಡಿಯುವ ನೀರು ಯಂತ್ರಗಳು ಹಲವು ಮೂಲ ಸೌಕರ್ಯಗಳು ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮುಂದಿನ 3 ತಿಂಗಳ ಒಳಗಾಗಿ ಶಾಲೆಗಳಿಗೆ ಕೊಡುಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಗ್ಗಡಹಳ್ಳಿ ಎಚ್.ಜೆ.ರಾಮಕೃಷ್ಣ, ಎಚ್‌ಪಿಸಿಎಲ್ ಹಾಗೂ ಎಲ್‌ಪಿಜಿ ಕಂಪನಿ ಮ್ಯಾನೇಜರ್ ಅವಿನಾಶ್, ದೀಪಕ್‌ಕರಣ್, ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ, ಹೇಮಂತ್‌ಕುಮಾರ್, ಮಾಜಿ ಸದಸ್ಯ ನಾಗರಾಜು, ಪುಟ್ಟಸ್ವಾಮೀಗೌಡ, ಎಸ್‌ಡಿಎಂಸಿ ಅಧ್ಯಕ್ಷ ನಟರಾಜು ಸೇರಿದಂತೆ ಪಿಡಿಒ, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಸೇರಿದಂತೆ ಹಲವರು ಹಾಜರಿದ್ದರು.ಪಾರಿತೋಷಕ ಪಡೆದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು

ಪಾಂಡವಪುರ: ಮೈಸೂರಿನ ಶ್ರೇಷಾದ್ರಿಪುರಂ ಪದವಿ ಕಾಲೇಜು ಪ್ರತಿ ವರ್ಷದಂತೆ ಆಯೋಜಿಸಿದ್ದ ಶ್ರೇಷ್ಟಾ 2026 ರಾಜ್ಯ ಮಟ್ಟದ ಉತ್ಸವದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಅಗ್ನಿಪಥ್ ಪಥಸಂಚಲನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ನಗದು ಬಹುಮಾನ ಮತ್ತು ಪಾರಿತೋಷಕ ಹಾಗೂ ಗಾಯನ ತಂಡವು ಗುಂಪು ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ.ಪಿ.ಶಿವರಾಜು ಹಾಗೂ ಪ್ರಾಂಶುಪಾಲ ಡಾ.ನಿಶಾಂತ್ ಎ ನಾಯ್ಡು, ಎನ್‌ಎಸ್‌ಎಸ್ ಅಧಿಕಾರಿ ಬಿ.ಎಸ್.ಕುಮಾರ ಅಭಿನಂದಿಸಿದ್ದಾರೆ.