‘ಲಿಂಗಾಯತ’ ಮತ್ತು ‘ಗಾಣಿಗ’ ಜಾತಿಗೆ ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಿಲ್ಲ. ಗಾಣಿಗ ಜಾತಿಯು ವಿಶಾಲವಾದ ಲಿಂಗಾಯತ ಗುಂಪಿನೊಳಗಿನ ಒಂದು ವಿಶಿಷ್ಟ ಜಾತಿ ಎಂದು ಹೈಕೋರ್ಟ್ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಲಿಂಗಾಯತ’ ಮತ್ತು ‘ಗಾಣಿಗ’ ಜಾತಿಗೆ ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಿಲ್ಲ. ಗಾಣಿಗ ಜಾತಿಯು ವಿಶಾಲವಾದ ಲಿಂಗಾಯತ ಗುಂಪಿನೊಳಗಿನ ಒಂದು ವಿಶಿಷ್ಟ ಜಾತಿ ಎಂದು ಹೈಕೋರ್ಟ್ ಆದೇಶಿಸಿದೆ.ಮೈಸೂರು ವೃತ್ತದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಟಿ.ನರಸೀಪುರ ತಾಲೂಕಿನ ಅಳಗುಡು ಗ್ರಾಮದ ಟಿ.ಎನ್.ಜಗದೀಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ಮಾಡಿದೆ.
‘ಲಿಂಗಾಯತ’ (ಧಾರ್ಮಿಕ ಸಮುದಾಯ) ಮತ್ತು ‘ಗಾಣಿಗ‘(ಎಣ್ಣೆ ತೆಗೆಯುವವರು) ಪರಸ್ಪರ ಪ್ರತ್ಯೇಕ ಗುರುತುಗಳು. ಗಾಣಿಗ ವಿಶಾಲ ಲಿಂಗಾಯತ/ವೀರಶೈವ ಗುಂಪಿನೊಳಗೆ ಅಸ್ತಿತ್ವದಲ್ಲಿರಬಹುದಾದ ಒಂದು ವಿಶಿಷ್ಟವಾದ ವೃತ್ತಿಪರ ಜಾತಿ. ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಧಾರ್ಮಿಕ ಸಂಬಂಧದಿಂದ ಲಿಂಗಾಯತ ಮತ್ತು ಜಾತಿ ವರ್ಗೀಕರಣದಿಂದ ಗಾಣಿಗ ಆಗಿರಬಹುದು ಎಂದು ಪೀಠ ಹೇಳಿದೆ.ಪ್ರಕರಣದ ವಿವರ:
ಅರ್ಜಿದಾರ ಟಿ.ಎನ್. ಜಗದೀಶ್ ಇತರೆ ಹಿಂದುಳಿದ ವರ್ಗಗಳ 2ಎ ವ್ಯಾಪ್ತಿಗೆ ಒಳಪಡುವ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1998ರಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಟಿ.ಎನ್. ಜಗದೀಶ್ ಮತ್ತು ರಾಜಕುಮಾರ್ ವೈ. ಬೀಳಗಿ ಇಬ್ಬರೂ 2009ರಲ್ಲಿ ಕರೆಯಲಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ (ಪಿಎಸ್ಐ) ಅರ್ಜಿ ಸಲ್ಲಿಸಿದ್ದರು. 2010-11ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಈ ವೇಳೆ ರಾಜಕುಮಾರ್ ವೈ.ಬೀಳಗಿ ಇತರೆ ಹಿಂದುಳಿದ ವರ್ಗಗಳ 2ಎ ಅಡಿಯಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು.ಅದನ್ನು ಪ್ರಶ್ನಿಸಿರುವ ಜಗದೀಶ್, ಲಿಂಗಾಯತ ಸಮುದಾಯಕ್ಕೆ ಸೇರಿದ ರಾಜಕುಮಾರ್ ವೈ.ಬೀಳಗಿ ಅವರು ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿ ನೀಡಲಾಗುವ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಲಿಂಗಾಯತ-ಗಾಣಿಗ ಎಂಬ ಸುಳ್ಳು ಪ್ರಮಾಣಪತ್ರ ನೀಡಿ ಹುದ್ದೆ ಪಡೆದುಕೊಂಡಿದ್ದಾರೆ. ಅವರಿಗೆ ಹಿಂದುಳಿದ ವರ್ಗ 2ಎ ಅಡಿ ಜಾತಿ ಪ್ರಮಾಣ ಪತ್ರ ನೀಡಿರುವುದು ಸರಿಯಲ್ಲ. ಅದರ ಆಧಾರದ ಮೇಲೆ ಅವರು ಹಿಂದುಳಿದ ವರ್ಗ 2ಎ ಅಡಿ ಪಿಎಸ್ಐ ಹುದ್ದೆ ಪಡೆದಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದ್ದರು.
ಈ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ರಾಜ್ ಕುಮಾರ್ ಬೀಳಗಿ ಅವರು ಹಿಂದುಳಿದ ವರ್ಗ 2-ಎ ಅಡಿ ಜಾತಿ ಪ್ರಮಾಣಪತ್ರ ಪಡೆದಿರುವುದು ಸರಿಯಿದೆ ಎಂದು ನುಡಿದಿದೆ. ಜೊತೆಗೆ, ಅದರ ಆಧಾರದ ಮೇಲೆ ಪಿಎಸ್ಐ ಆಗಿ ಸಾರ್ವಜನಿಕ ಉದ್ಯೋಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅವರ ನೇಮಕಾತಿ ಸಿಂಧುತ್ವ ಎತ್ತಿಹಿಡಿದಿದೆ.