ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಮಾಜದಲ್ಲಿ ಎಲ್ಲಾ ಮಕ್ಕಳಿಗೂ ತಂದೆಯಿಂದ ಗೌರವ ದೊರೆತರೆ, ನನಗೆ ನನ್ನ ಮಗ ಡಾ.ಕೆ.ಸುಧಾಕರ್ ರಿಂದ ಗೌರವ ಮತ್ತು ಅಧಿಕಾರ ಸಿಕ್ಕಿದೆ. ಇಂತಹ ಮಗನಿಗೆ ಜನ್ಮ ನೀಡಿದ ನನ್ನ ಬದುಕು ಸಾರ್ಥಕವಾಗಿದೆ ಎಂದು ಡಾ.ಕೆ.ಸುಧಾಕರ್ ತಂದೆ ಹಾಗೂ ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ತಿಳಿಸಿದರು.ನಗರದ ಬಿಬಿ ರಸ್ತೆಯ ಜೆಡಿಎಸ್ ಕಚೇರಿ ಮುಂಭಾಗ ಗುರುವಾರ ಜೆಡಿಎಸ್ ನಿಂದ ನಡೆದ ಮೈತ್ರಿ ಅಭ್ಯರ್ಥಿ ಮಾಜಿ ಸಚಿವ ಡಾ,ಕೆ.ಸುಧಾಕರ್ ಪರ ವಿಜಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆ ಕೃಷಿಕ, ನಾನು ಶಾಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ್ದು, ಕೆಲ ಕಾರಣಗಳಿಂದ ರಾಜಕೀಯಕ್ಕೆ ಬರಬೇಕಾಯಿತು.
ಆದರೆ ನನ್ನ ಮಗ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿ, ನಂತರ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ಪ್ರಾರಂಭಿಸಿ, ಅದರಿಂದ ಸಮಾಜದ ಬಡವರ, ದೀನ, ದಲಿತರ ಸೇವೆ ಪ್ರಾರಂಭಿಸಿದ. ಇದನ್ನು ಗಮನಿಸಿದ ರಾಜ್ಯದ ಹಿರಿಯ ರಾಜಕಾರಣಿಗಳು ಸಮಾಜ ಸೇವೆ ಮಾಡಲು ನಿನಗೆ ರಾಜಕೀಯದ ಬಲವೂ ಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿಸಿಕೊಂಡು, ಇವರ ಪ್ರತಿಭೆ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಕಂಡು ಶ್ರೀಲಂಕಾ ದೇಶದ ರಾಯಭಾರಿಯನ್ನಾಗಿಸಿದರು. ತದನಂತರ ಚಿಕ್ಕಬಳ್ಳಾಪುರದಿಂದ ಶಾಸಕರಾಗಿ ಕಾರ್ಯ ನಿರ್ವಹಿಸಿ, ನಂತರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದರು.ಸುಧಾಕರ್ ಶಾಸಕರಾದ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರು. ಬಯಲು ಸೀಮೆಯ ಬರಡು ಜಿಲ್ಲೆಯಾದ ಚಿಕ್ಕಬಳ್ಳಾಪುರಕ್ಕೆ ಯಾವುದೇ ನದಿಳಿಲ್ಲದ್ದನ್ನು ಗಮನಿಸಿ, ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಿಂದಲೇ ಚಾಲನೆ ನೀಡಿದರು.ಈ ಯೋಜನೆ ತಡವಾಗುತ್ತದೆ ಎಂದು ಅರಿತ ಡಾ,ಕೆ,ಸುಧಾಕರ್, ಬೆಂಗಳೂರಿನ ಹೆಬ್ಬಾಳ -ನಾಗವಾರ(ಎಚ್.ಎನ್.ವ್ಯಾಲಿ ) ಕೆರೆ ನೀರನ್ನು ಎರಡು ಬಾರಿ ಸಂಸ್ಕರಿಸಿ, ಚಿಕ್ಕಬಳ್ಳಾಪುರ ತಾಲೂಕಿನ ಕೆರೆಗಳಿಗೆ ಹರಿಸಿದರು ಎಂದು ಹೇಳಿದರು.
ಸಚಿವರಾದ ನಂತರ ಜಿಲ್ಲೆಯಾದ್ಯಂತ ಎಲ್ಲಾ ಕೆರೆಗಳಿಗೂ ಎಚ್.ಎನ್.ವ್ಯಾಲಿ ನೀರನ್ನು ಮೂರು ಬಾರಿ ಸಂಸ್ಕರಿಸಿ, ಹರಿಸಲು ಕಳೆದ ಬಿಜೆಪಿ ಸರ್ಕಾರದಲ್ಲಿ ಬಜೆಟ್ ನಲ್ಲೂ ಹಣ ಮೀಸಲಿರಿಸಿದ್ದರು. ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಕನಕಪುರಕ್ಕೆ ಹೋಗಿದ್ದನ್ನು ವಿರೋಧಿಸಿ, ಶಾಸಕ ಸ್ಥಾನ ಪಣಕ್ಕಿಟ್ಟು, ಮೆಡಿಕಲ್ ಕಾಲೇಜು ತಂದು ತರಗತಿಗಳನ್ನು ಪ್ರಾರಂಭಿಸಿದರು. ಲೋಕಸಭಾ ಕ್ಷೇತ್ರದ ಸಂಪೂರ್ಣ ಅರಿವಿನೊಂದಿಗೆ ಅಕ್ಕ ಪಕ್ಕದ ಜಿಲ್ಲೆಗಳ ಅರಿವು ಇದ್ದು, ಈ ಭಾಗದಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಮತ್ತು ಕೃಷಿ ನೀರಾವರಿ ಯೋಜನೆಗೂ ಅವರ ಬಳಿ ನೀಲ ನಕ್ಷೆಯಿದೆ. ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಈ ಭಾಗಕ್ಕೆ ಕೈಗಾರಿಕೆಗಳನ್ನು ತರಲು ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.ನಾನು ರಾಜಕೀಯದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಮತ್ತು ಅಧ್ಯಕ್ಷನಾಗಲು ಕಾರಣವೇ ನನ್ನ ಮಗ ಡಾ.ಕೆ.ಸುಧಾಕರ್. ಇಂತಹ ಮಗ ಎಲ್ಲರ ಮನೆಯಲ್ಲೂ ಇರಬೇಕು ಎಂದು ನಾನು ಬಯಸುತ್ತೇನೆ. ಹಾಗೆಯೇ ಪ್ರಧಾನಿ ಮೋದಿಯವರು ಸಹ ಡಾ.ಕೆ.ಸುಧಾಕರ್ ಗೆ ಪತ್ರ ಬರೆದು ಅದರಲ್ಲಿ ಅವರ ಸೇವೆಯನ್ನು ಕೊಂಡಾಡಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿದಲ್ಲಿ ಅಪಾರ ಆಡಳಿತದ ಅನುಭವವಿರುವ ನನ್ನ ಮಗ ಉತ್ತಮವಾಗಿ ಕೊಟ್ಟ ಜವಾಬ್ದಾರಿ ನಿಭಾಯಿಸಿ ದೇಶದ ಎಲ್ಲಾ ವರ್ಗಗಳ ಜನತೆಗೂ ನ್ಯಾಯ ನೀಡುತ್ತಾರೆ ಎಂಬ ಭರವಸೆ ತಮಗಿದೆ ಎಂದು ಹೇಳಿದರು.