ಸುರಿಯುತ್ತಿರುವ ಮಳೆಗೆ ಮಣ್ಣು ಕುಸಿದು ನಂದಿಮೊಟ್ಟೆ ಗ್ಲಾಸ್ ಬ್ರಿಡ್ಜ್ ಅಪಾಯದಲ್ಲಿದೆ. ಆಧಾರಸ್ತಂಭಗಳು ಜಾರಿಬೀಳುವ ಸ್ಥಿತಿಗೆ ತಲುಪಿದೆ.
ಮಡಿಕೇರಿ : ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಕುಸಿದು ಮಡಿಕೇರಿ ಸಮೀಪದ ನಂದಿಮೊಟ್ಟೆ ಗ್ಲಾಸ್ ಬ್ರಿಡ್ಜ್ ಅಪಾಯದಲ್ಲಿದೆ.
ಮಡಿಕೇರಿ ಅಬ್ಬಿಫಾಲ್ಸ್ ರಸ್ತೆಯ ಹೆಬ್ಬಟಗೇರಿ ಗ್ರಾಮದ ನಂದಿ ಮೊಟ್ಟೆಯಲ್ಲಿ ಆರಂಭಗೊಂಡಿದ್ದ ಜಿಲ್ಲೆಯ ಎರಡನೇ ಗ್ಲಾಸ್ ಬ್ರಿಡ್ಜ್ ಇದೀಗ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ. ಗ್ಲಾಸ್ ಬ್ರಿಡ್ಜ್ ನ ಕೆಳಭಾಗದಲ್ಲಿ ಭೂಕುಸಿತ ಉಂಟಾಗಿ ಬ್ರಿಡ್ಜಿಗೆ ಅಳವಡಿಸಿರುವ ಆಧಾರಸ್ತಂಭಗಳು ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಜಾರಿಬೀಳುವ ಅತಂತ್ರ ಸ್ಥಿತಿಗೆ ತಲುಪಿದೆ.
--------------
ಗುಡ್ಡೆಹೊಸೂರು: ಗದ್ದೆ ಜಲಾವೃತ
ಇಲ್ಲಿಗೆ ಸಮೀಪದ ಬಾಳುಗೋಡು ಗ್ರಾಮದ ಕೆದಂಬಾಡಿ ಪುರುಷೋತ್ತಮ್ ಅವರಿಗೆ ಸೇರಿದ ಗದ್ದೆಗಳಿಗೆ ಕಾವೇರಿ ನದಿ ನೀರು ಸಿದ್ದಾಪುರ ರಸ್ತೆಯ ಸೇತುವೆ ಒಳಭಾಗದಿಂದ ನುಗ್ಗಿದೆ. ಸುಮಾರು 2 ಎಕರೆ ಪ್ರದೇಶದ ನಾಟಿಕಾರ್ಯ ಆಗದ ಗದ್ದೆ ಜಲಾವೃತಗೊಂಡಿದೆ.
ಗದ್ದೆಯ ಸ್ವಲ್ಪ ಅಂತರದಲ್ಲಿ ಮೂರು ಏಕರೆ ಪ್ರದೇಶದಲ್ಲಿ ಶುಂಠಿ ವ್ಯವಸಾಯ ಮಾಡಿದ್ದು ಮಳೆ ಹೆಚ್ಚಾದಲ್ಲಿ ಗದ್ದೆಯಲ್ಲಿರುವ ಶುಂಠಿಬೆಳೆ ನೀರು ನಿಂತು ನಷ್ಟವಾಗಲಿದೆ. ಕಾವೇರಿ ನದಿಯ ನೀರಿನಲ್ಲಿ ದಿಢೀರನೆ ಭಾರಿ ನೀರು ಹೆಚ್ಚಾಗಿದೆ. ದುಬಾರೆಯಲ್ಲಿ ರ್ಯಾಪ್ಟಿಂಗ್ ಗಾಗಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಗದ್ದೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸ್ಥಳೀಯರು ಬಲೆಗಳನ್ನು ಬಳಸಿ ಮೀನು ಹಿಡಿಯುತ್ತಿರುವ ದೃಶ್ಯ ಕಂಡು ಬಂತು. ಬಾಳುಗೋಡು, ರಸಲ್ಪುರ, ಬೆಟ್ಟಗೇರಿ, ಗುಡ್ಡೆಹೊಸೂರು, ಮಾದಪಟ್ಟನ, ಹೊಸಪಟ್ಟಣ ಈ ಭಾಗಗಳಲ್ಲಿ ಕಾವೇರಿ ನದಿ ನೀರು ಕಾಫಿ, ತೋಟ, ಶುಂಠಿಗದ್ದೆ ಗಳಿಗೆ ನುಗ್ಗಿದ ವರದಿಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.