ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಂದಾಜು 10 ಸಾವಿರಕ್ಕೂ ಅಧಿಕ ಸಸ್ಯಗಳು ಔಷಧ ಗುಣವುಳ್ಳದ್ದಾಗಿದ್ದು, ಇತ್ತೀಚಿನ ಸಂಶೋಧನೆ ಪ್ರಕಾರ ಭಾರತೀಯ ಔಷಧ ಸಸ್ಯಗಳು ಜಾಗತಿಕ ಮನ್ನಣೆ ಪಡೆದಿವೆ ಎಂದು ತೋವಿವಿ ಕುಲಪತಿ ಎನ್.ಕೆ.ಹೆಗಡೆ ಹೇಳಿದರು.ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿರುವ ರೈತ ವಿಕಾಸ ಭವನದಲ್ಲಿ ತೋವಿವಿ ವಿಸ್ತರಣಾ ನಿರ್ದೇಶನಾಲಯ, ಬಿವಿವ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದಲ್ಲಿ ಔಷಧ ಹಾಗೂ ಸುಗಂಧ ದ್ರವ್ಯ ಮೂಲಿಕೆಗಳ ದಿನನಿತ್ಯದಲ್ಲಿ ವೈಜ್ಞಾನಿಕ ಉಪಯೋಗ ಕುರಿತು ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಕಾಲದ ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದ ಗಿಡಮೂಲಿಕೆಗೆ ಹೆಚ್ಚಿನ ಮನ್ನಣೆ ಇತ್ತು. ಅಂದು ಹಿತ್ತಲಗಿಡ ಮದ್ದಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಪ್ರಚಲಿತದಲ್ಲಿತ್ತು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಪದ್ದತಿ ಚಿಕಿತ್ಸೆ ಉಪಯುಕ್ತವಾಗಿದ್ದರೂ ಇಂದಿನ ಜನರಿಗೆ ಬೇಗ ಗುಣಪಡಿಸುವ ಅಲೋಪತಿಯತ್ತ ವಾಲಿದ್ದಾರೆ ಎಂದರು.
ಈ ಔಷಧ ಸಸ್ಯಗಳು ದೇವರ ಪೂಜೆಗೆ ಯೋಗ್ಯವಾಗಿದ್ದು, ಅದರಲ್ಲಿ ತೆಂಗು, ತುಳಸಿ, ಫಲಪುಷ್ಪಗಳು ಪ್ರಚಲಿತದಲ್ಲಿವೆ. ಕೆಲವು ಔಷಧ ಸಸ್ಯಗಳನ್ನು ಮನೆಯ ಸುತ್ತಲು ನೆಟ್ಟರೆ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಬಹುದು ಎಂದರು.ಈ ಔಷಧ ಸಸ್ಯಗಳ ಮಹತ್ವ ತಿಳಿಸಿದ ಚರಕ, ಸುಶ್ರೂತ, ಧನ್ವಂತರಿ, ಪತಂಜಲಿ ಮುಂತಾದ ಋಷಿಗಳು ಇವುಗಳನ್ನು ಅಂದೇ ಪ್ರಚಲಿತಗೊಳಿಸಿದ್ದರು. ಇಂತಹ ಮಹತ್ವ ಪೂರ್ಣ ಔಷಧ ಸಸ್ಯಗಳ ಬಳಕೆ ಹಾಗೂ ಮಹತ್ವವನ್ನು ವಿದ್ಯಾರ್ಥಿಗಳು ಅರಿತು ಜನರಿಗೆ ಇದರ ಉಪಯುಕ್ತ ಮಾಹಿತಿ ನೀಡಬೇಕು. ತೋಟಗಾರಿಕೆ ವಿಶ್ವವಿದ್ಯಾಲಯ ಇಂತಹದೊಂದು ಯಶಸ್ವಿಕಾರ್ಯ ಮಾಡಿ ಹಣ್ಣು, ಹೂ ಮುಂತಾದ ಗಿಡಮರಗಳ ಜೊತೆಗೆ ಔಷಧ ಸಸ್ಯಗಳ ಹಾಗೂ ಉಪಯುಕ್ತ ಖನಿಜಾಂಶವುಳ್ಳ ತರಕಾರಿ, ಹಣ್ಣು ಕಾಯಿಗಳನ್ನು ಬೆಳೆಯುತ್ತಿದ್ದು, ಅದರ ಜೊತೆಗೆ ಔಷಧ ಸಸ್ಯಗಳ ಕುರಿತಾದ ಈ ತರಬೇತಿ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿವಿವಿ ಸಂಘದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ ಮಾತನಾಡಿ, ಕೆಲವು ದಿನಗಳ ಹಿಂದೆ ತೋಟಗಾರಿಕೆ ವಿವಿ ಸಿಬ್ಬಂದಿ ನಮ್ಮ ಆಯುರ್ವೇದ ಕಾಲೇಜಿಗೆ ಭೇಟಿ ನೀಡಲು ತಿಳಿಸಿದಾಗ ನಮ್ಮ ಕಾಲೇಜು ಆವರಣದಲ್ಲಿಯೇ 300ರಿಂದ 400 ವಿವಿಧ ಔಷಧ ಸಸ್ಯಗಳಿದ್ದು, ಅಂದು ಅವುಗಳನ್ನು ಪರಿಚಯಿಸಲಾಯಿತು. ಅದರಂತೆ ಇತ್ತೀಚೆಗೆ ಬಹು ಬೇಡಿಕೆಯುಳ್ಳ ಹರ್ಬಲ್ ಗಿಡಮೂಲಿಕೆಗಾಗಿ ಜಾಗ ಮೀಸಲಿಟ್ಟಿದ್ದೇವೆ ಎಂದು ವಿವರಿಸಿದರು.ಇಂತಹ ಉಪಯುಕ್ತ ತರಬೇತಿಯಿಂದ ಹೆಚ್ಚಿನ ಜ್ಞಾನ ಒದಗಲಿದೆ. ಜತೆಗೆ ಪ್ರತಿಯೊಂದು ತರಬೇತಿಯಲ್ಲಿ ಔಷಧೀಯ ಗಿಡಗಳ ಮಹತ್ವ ತಿಳಿಸಲಾಗುತ್ತದೆ. ಆಯುರ್ವೇದದ ಮಹತ್ವ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಕೋರೋನಾದಿಂದ ಬಳಲುತ್ತಿದ್ದ ರೋಗಿ ಯಾವುದೇ ಅಲೋಪತಿ ಔಷಧ ಬಳಸದೇ ಅರಿಶಿಣ ಉಪಯೋಗಿಸಿಕೊಂಡು ರೋಗ ವಾಸಿ ಮಾಡಿಕೊಂಡ ಉದಾಹರಣೆ ಇವೆ. ಇಂತ ಶಕ್ತಿ ಇರುವ ಔಷಧಗಳನ್ನು ಜನರು ಬಳಸಿಕೊಂಡು ನಿರೋಗಿಗಳಾಗುವಂತೆ ವಿದ್ಯಾರ್ಥಿಗಳಾದ ತಾವು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ತೋವಿವಿ ವಿಸ್ತರಣಾ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಹೆಗಡೆ ಮಾತನಾಡಿ, ಭಾರತೀಯ ಔಷಧ ಸಸ್ಯ ಹಾಗೂ ಆಯುರ್ವೇದವನ್ನು ಜಾಗತಿಕರ ಮಾಡಲು ಆಗದೇ ಇರುವುದು ಕಳವಳಕಾರಿ ಸಂಗತಿಯಾಗಿದೆ. ಚೀನಾ ಉಪಯುಕ್ತ ಗಿಡಮೂಲಿಕೆಗಳಿಂದ ಔಷಧ ತಯಾರಿಸಿ ₹1.50 ಲಕ್ಷ ಕೋಟಿ ವಹಿವಾಟು ಮಾಡುತ್ತಿದೆ. ಆದರೆ ಭಾರತ 1999 ರಿಂದ 2000ರಲ್ಲಿ ನಿರ್ಣಯಿಸಿದಂತೆ 2010 ರೊಳಗಾಗಿ ₹10 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಿತ್ತು. ಇಲ್ಲಿಯವರೆಗೆ ಅದನ್ನು ತಲುಪಲು ಆಗಿಲ್ಲ ಎಂದು ಹೇಳಿದರು.ಇಂದು ಔಷಧ ಸಸ್ಯಗಳ ಬೆಲೆ ತಿಳಿಯದ ಕಾರಣ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ವಾಣಿಜ್ಯ ಬೆಳೆಗಳಿಗಿಂತಲೂ ಹೆಚ್ಚಿನ ಆದಾಯ ತರುವ ಸಪ್ಪೇದ ಮುಸ್ಲಿ, ಸರ್ಪಗಂಧ, ಪುನರ್ವನಮ ಎಂಬ ಔಷಧಗಳು 12 ರಿಂದ 15 ನೂರುವರೆಗೆ ಮಾರಾಟವಾಗುತ್ತಿದೆ. ಅಲೋಪತಿಯಲ್ಲಿ ಇದುವರೆಗೆ ಕಾಮಾಲೆ ರೋಗಕ್ಕೆ ಔಷಧ ಇರದೇ ಇಂದಿಗೂ ಲಿವ್-52 ಔಷಧವನ್ನೇ ಕೊಡುತ್ತಿದ್ದಾರೆ. ಎಲ್ಲ ರೋಗಕ್ಕೂ ಆಯುರ್ವೇದ ಔಷಧ ಸಸ್ಯಗಳಿಗೆ ಹೆಚ್ಚು ನೀರು, ಆರೈಕೆ, ಬಿಸಿಲು, ಮಳೆ ಇಲ್ಲದಿದ್ದರೂ ಬೆಳೆಯುತ್ತವೆ ಎಂದರು.
ತೋವಿವಿಯ ಪ್ರಾಧ್ಯಾಪಕ ಡಾ.ವಸಂತ ಗಾಣಿಗೇರ ಪ್ರಾರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋವಿವಿ ಪ್ರಾಧ್ಯಾಪಕ ಡಾ.ವಿಜಯಕುಮಾರ ನಾರಾಯಣಪುರ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಗುರುರಾಜ ಕುಲಕರ್ಣಿ, ಡಾ.ಜಗದೀಶಚಂದ್ರ ಹಿರೇಮಠ, ಡಾ.ವೈ.ಸಿ ವಿಶ್ವನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.