ಹಳ್ಳಿಗಳಿಗೆ ಹೋಗಿ ಕಾನೂನು ಅರಿವು ಮೂಡಿಸಿ: ನ್ಯಾಯಮೂರ್ತಿ ಬಿ.ವೀರಪ್ಪ

KannadaprabhaNewsNetwork | Published : Oct 20, 2024 1:50 AM

ಸಾರಾಂಶ

ಕಾನೂನು ಬಲ್ಲವರಾದ ನೀವುಗಳು ಹಳ್ಳಿಗಳಿಗೆ ತೆರಳಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಿ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಕೀಲರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಕಾನೂನು ಬಲ್ಲವರಾದ ನೀವುಗಳು ಹಳ್ಳಿಗಳಿಗೆ ತೆರಳಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಿ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಕೀಲರಿಗೆ ಸಲಹೆ ನೀಡಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ವಕೀಲರ ಪಾತ್ರ ಕುರಿತು ಮಾತನಾಡಿದ ಅವರು, ಕಪ್ಪು ಕೋಟು ಹಾಕಿಕೊಂಡವರ ಮೇಲೆ ಸಮಾಜದಲ್ಲಿ ಭಯ ಮತ್ತು ಗೌರವ ಎರಡೂ ಇರುತ್ತದೆ. ಕೋಟು ಹಾಕಿಕೊಂಡ ಮೇಲೆ ನ್ಯಾಯಾಲಯದಲ್ಲಿ ವಾದ ಮಾಡಿದಂತೆಯೇ ಸಾರ್ವಜನಿಕ ಜೀವನಕ್ಕೂ ನಾವು ತೆರೆದುಕೊಳ್ಳಬೇಕು. ವಕೀಲರು ತಂಡವನ್ನು ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಪೀಠಕ್ಕೆ ಆಗಮಿಸುವುದು ತಡವಾದರೆ ನೀವು ಪ್ರಶ್ನೆ ಮಾಡುತ್ತೀರಿ. ಆದರೆ ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಗಂಟೆಗಟ್ಟಲೆ ಕೂತಿರುತ್ತೀರಿ. ಕೊನೆಗೆ ಇಂದು ಸಿಟಿಂಗ್ ಇಲ್ಲ ಎಂದರೆ ಎದ್ದು ಬರುತ್ತೀರಿ. ಅಲ್ಲಿಯೂ ಪ್ರಶ್ನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ಅಲ್ಲಿಯೂ ಸಹ ಪ್ರಕರಣಗಳ ಇತ್ಯರ್ಥ ವಿಳಂಬವಾಗುವುದಿಲ್ಲ ಎಂದರು.ಕಕ್ಷಿದಾರರು ನಿಮ್ಮನ್ನೇ ನಂಬಿ ಬಂದಿರುತ್ತಾರೆ. ಅವರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಕಕ್ಷಿದಾರರ ಹಿತ ಕಾಪಾಡುವತ್ತ ಗಮನ ಹರಿಸಬೇಕು. ಬರುವವರಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಅವರ ಮನಸ್ಥಿತಿ ನೋಡಿಕೊಂಡು ಕಾರ್ಯನಿರ್ವಹಿಸುವಂತೆ ವಕೀಲರಿಗೆ ಸಲಹೆ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ ಮಾತನಾಡಿ, ನ್ಯಾಯಾಲಯಕ್ಕೆ ಹೆಚ್ಚಿನ ಜಾಗದ ಅವಶ್ಯಕತೆ ಇದೆ. ಯಲ್ಲಾಪುರದ ಬಳಿ ಕೇಂದ್ರೀಯ ವಿದ್ಯಾಲಯದ ಸಮೀಪ 35 ಎಕರೆ ಜಾಗ ಇದೆ. ಇದರಲ್ಲಿ 25 ಎಕರೆ ಜಾಗವನ್ನು ನ್ಯಾಯಾಲಯಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಖಾಲಿಯಾಗುತ್ತಿರುವುದರಿಂದ ಆ ಜಾಗವನ್ನು ಸಹ ಬಿಟ್ಟು ಕೊಟ್ಟರೆ ನ್ಯಾಯಾಲಯ ಸಂಕೀರ್ಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು. ತುಮಕೂರು ಜಿಲ್ಲೆಗೆ ನೀವು ಪದೇ ಪದೆ ಭೇಟಿ ನೀಡಿದರೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಉಪಲೋಕಾಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಹಳ್ಳಿ ಹಳ್ಳಿಗೆ ತೆರಳಿ ಕಾನೂನು ಅರಿವು ಮೂಡಿಸುವಂತೆ ಉಪಲೋಕಾಯುಕ್ತರು ನೀಡಿರುವ ಸಲಹೆ ಬಗ್ಗೆ ವಕೀಲರ ಸಭೆ ಕರೆದು ಚರ್ಚಿಸಿ ಹೋಬಳಿ ಮಟ್ಟದಲ್ಲಿ ಹಳ್ಳಿಗಳಿಗೆ ಗುರುತಿಸಿ ಕಾನೂನು ಅರಿವು ಮೂಡಿಸಲು ಮುಂದಾಗುವುದಾಗಿ ಅವರು ಹೇಳಿದರು.ಫೋಕ್ಸೋ ಪ್ರಕರಣಗಳ ಬಗ್ಗೆಯೂ ಗ್ರಾಮೀಣ ಭಾಗದ ಮಹಿಳೆಯರು, ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಿ, ಕಾನೂನು ತಿಳುವಳಿಕೆ ನೀಡಲು ಸಹ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸಾ, ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ ಇತರರು ಉಪಸ್ಥಿತರಿದ್ದರು.

Share this article