ಸಾಧನೆಗೆ ಗುರಿ ಸ್ಪಷ್ಟವಿರಬೇಕು: ಎಸ್ಪಿ ಎನ್.ವಿಷ್ಣುವರ್ಧನ

KannadaprabhaNewsNetwork |  
Published : Jan 30, 2025, 12:32 AM IST
2 | Kannada Prabha

ಸಾರಾಂಶ

ಹುದ್ದೆಗಿಂತಲೂ ಮಾನವೀಯ ಮೌಲ್ಯ ಮುಖ್ಯ. ಹೀಗಾಗಿ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ. ಜೊತೆಗೆ ಶಿಸ್ತು, ಹಿರಿಯರಿಗೆ ಗೌರವ, ಪ್ರೀತಿ ಇಟ್ಟುಕೊಳ್ಳಬೇಕು. ಆಗಲೇ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ನಿಮ್ಮ ಬೌದ್ಧಿಕ ಬುದ್ಧಿಶಕ್ತಿ ತುಂಬಾ ಬಲವಾಗಿದೆ. ಈ ನಿಟ್ಟಿನಲ್ಲಿ ನೀವು ಯಾವುದೇ ಹಾದಿಯನ್ನು ಸುಗಮವಾಗಿ ಸಾಧಿಸಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಧನೆಗೆ ದೊಡ್ಡ ಗುರಿ ಮುಖ್ಯ. ಆದ್ದರಿಂದಲೇ ಗುರಿ ಇಟ್ಟುಕೊಂಡು ನಿಮ್ಮ ದಾರಿ ಸ್ಪಷ್ಟಪಡಿಸಿಕೊಳ್ಳಿ. ಬಳಿಕ ಗುರಿಯಕಡೆ ನಿರಂತರ ಗಮನಹರಿಸಿ ಎಂದು ಎಸ್ಪಿ ಎನ್.ವಿಷ್ಣುವರ್ಧನ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬುಧವಾರ ಏರ್ಪಡಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಹುದ್ದೆಗಿಂತಲೂ ಮಾನವೀಯ ಮೌಲ್ಯ ಮುಖ್ಯ. ಹೀಗಾಗಿ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ. ಜೊತೆಗೆ ಶಿಸ್ತು, ಹಿರಿಯರಿಗೆ ಗೌರವ, ಪ್ರೀತಿ ಇಟ್ಟುಕೊಳ್ಳಬೇಕು. ಆಗಲೇ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದರು.

ನಿಮ್ಮ ಬೌದ್ಧಿಕ ಬುದ್ಧಿಶಕ್ತಿ ತುಂಬಾ ಬಲವಾಗಿದೆ. ಈ ನಿಟ್ಟಿನಲ್ಲಿ ನೀವು ಯಾವುದೇ ಹಾದಿಯನ್ನು ಸುಗಮವಾಗಿ ಸಾಧಿಸಬಹುದು. ಬ್ಯಾಂಕಿಂಗ್, ಯು.ಪಿ.ಎಸ್.ಸಿ, ಐ.ಎ.ಎಸ್, ಐ.ಎಫ್.ಎಸ್, ಕೆ.ಎ.ಎಸ್ಸೇರಿದಂತೆ ಎಲ್ಲಾ ಪರೀಕ್ಷೆ ತೆಗೆದುಕೊಳ್ಳಿ. ಪ್ರಯತ್ನಂ ಸರ್ವ ಸಾಧನಂ ಎನ್ನುವಂತೆ ಎಂದಾದರೂ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತದೆ ಎಂದರು.

ಶಾಲೆಯಿಂದಲೇ ನಾನು ಗುರಿ ನಿಗದಿಪಡಿಸಿಕೊಂಡಿದ್ದೆ. ಅಂದಿನಿಂದಲೇ ಸತತ ಪ್ರಯತ್ನಿಸಿದೆ. ನಮ್ಮ ತಂದೆ ಕೂಡ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಿದ್ದರು. ಅವರೇ ನನಗೆ ಮಾದರಿ. ನಾನು ನನ್ನ ಗುರಿಕಡೆ ಗಮನ ಹರಿಸಿದೆ. ಪೊಲೀಸ್ಇಲಾಖೆಗೆ ಸೇರಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.

ಹುದ್ದೆ ಸೇರಿದ ಮೇಲೆ ಪೋಷಕರನ್ನು ಮರೆಯಬಾರದು. ಸಾರ್ವಜನಿಕ ಸೇವೆಯೇ ನಮ್ಮ ಗುರಿ ಎನ್ನುವ ಅಂಶವನ್ನು ಮರೆಯಬಾರದು ಎಂದರು.

ಕುಲಪತಿ ಪ್ರೊ. ಶರಣಪ್ಪವಿ. ಹಲಸೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಕೆಲಸಗಳನ್ನು ಚುರುಕುಗೊಳಿಸಬೇಕು ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಸ್ಪಷ್ಟಪಡಿಸಿಕೊಂಡು ಆ ಹಾದಿಯತ್ತ ಗಮನಹರಿಸಬೇಕು. ನಿರಂತರ ಪರಿಶ್ರಮ ನಿಮ್ಮನ್ನು ಗೆಲುವಿನ ದಡ ಸೇರಿಸಲಿದೆ. ವಿದ್ಯಾರ್ಥಿಗಳಿಗೆ ಛಲ ಮತ್ತು ಗುರಿಯಿರಬೇಕು. ಆ ಗುರಿ ದೊಡ್ಡದಾಗಿರಲಿ ಎಂದರು.

ಅಧ್ಯಯನ ಕೇಂದ್ರದ ಡೀನ್ ಪ್ರೊ. ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ. ನಿರಂಜನ್ ರಾಜ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ಕೆ.ಜಿ. ಕೊಪ್ಪಲು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!