ಎಚ್.ಡಿ.ರಂಗಸ್ವಾಮಿ
ರೈತರನ್ನು 3ನೇ ದರ್ಜೆಯ ಜನರೆಂದು ಪರಿಗಣಿಸಲಾಗುತ್ತಿರುವುದು ನೋವಿನ ಸಂಗತಿ, ಸರ್ಕಾರಗಳು ರೈತರ ಪರವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ರೈತರ ಬದುಕನ್ನು ಹಸನುಗೊಳಿಸದಿದ್ದಲ್ಲಿ ಮಹಾತ್ಮಾ ಗಾಂಧೀಜಿಯವರ ಆಶಯದ ಸಂದೇಶದ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಬುಧವಾರ ನಡೆದ ಕೃಷಿ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ದೇಶ ತಾಂತ್ರಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಿದ್ದು, ವಿಶ್ವದ ಇತರೆ ರಾಷ್ಟ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ. ಆದರೆ ಸಮಾಜದಲ್ಲಿ ಜನರ ನಡುವೆ ಬಾಂಧವ್ಯದ ಕೊರತೆ ಕಾಡುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಆಡಳಿತ ವ್ಯವಸ್ಥೆಯಲ್ಲಿನ ರೈತರ ಕಾರ್ಯಕ್ರಮಗಳ ಜಾರಿ ವೈಫಲ್ಯದಿಂದ ಚಾಮರಾಜನಗರದ ಮೂಲಕ ಶುರುವಾದ ಮೈಕ್ರೋ ಪೈನಾನ್ಸ್ ಕಿರುಕುಳ ಪ್ರಕರಣಗಳು ರಾಜ್ಯದ ವಿವಿಧೆಡೆ ದಿನನಿತ್ಯ ಕಂಡುಬರುತ್ತಿದ್ದು, ಸಾಮಾನ್ಯ ಜನರು ನೋವಿನಲ್ಲಿದ್ದಾರೆ ಎಂದರು.
ಆನ್ಲೈನ್ ವ್ಯಾಮೋಹದಿಂದಾಗಿ ಜನರು ಲಕ್ಷಾಂತರ ರು. ಸಾಲ ಮಾಡಿ ಸಂಕಷ್ಟದಲ್ಲಿದ್ದಾರೆ. ಸಾಲ ವಸೂಲಾತಿಗಾಗಿ ಕಟುವಾಗಿ ನಡೆದುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕದಿದ್ದಲ್ಲಿ ದೇಶ ಎಷ್ಟೇ ಬೆಳವಣಿಗೆ ಕಂಡರೂ ಸಹ ಜನರ ಸ್ಥಿತಿ ಸುಧಾರಣೆಯಾಗುವುದಿಲ್ಲ. ದೇಶದಲ್ಲಿ ಹಣದ ಕೊರತೆ ಇಲ್ಲ, ಆದರೆ ಹಣದ ಬಳಕೆಯಲ್ಲಾಗುತ್ತಿರುವ ವೈಫಲ್ಯಗಳಿಂದ ಇಂತಹ ಸಮಸ್ಯೆ ಉದ್ಭವಿಸಿವೆ, ರಾಜಕಾರಣಿಗಳು ಜನಪ್ರತಿನಿಧಿಗಳು ಕಾರ್ಯಕ್ರಮ ಜಾರಿಯಲ್ಲಿ ಎಲ್ಲಿ ಎಡಹುತ್ತಿದ್ದೇವೆ ಎಂಬುದನ್ನು ಚಿಂತಿಸಿ, ಸರ್ಕಾರದ ಕಾರ್ಯಕ್ರಮಗಳನ್ನು ರೈತರಿಗೆ ಮುಟ್ಟಿಸುವಂತಹ ಕೆಲಸ ಮಾಡಿದಲ್ಲಿ ದೇಶ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಲಿದೆ ಎಂದರು.
ಇನ್ನು ಮಂಡ್ಯದಿಂದ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ಬಳಿಕ ಕ್ಷೇತ್ರ ವ್ಯಾಪ್ತಿಯ ಮಳವಳ್ಳಿಯಲ್ಲಿ ಈ ವರ್ಷ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವವನ್ನು ಆಚರಿಸಲು ಅವಕಾಶ ಕಲ್ಪಿಸುವಂತೆ ಸ್ವಾಮೀಜಿಯವರಿಗೆ ಮನವಿ ಮಾಡಿಕೊಂಡಿದ್ದೇನೆ, ಸ್ವಾಮೀಜಿಯವರು ಸಹಾ ಒಪ್ಪಿಗೆ ಸೂಚಿಸಿದ್ದಾರೆ, ಆದ್ದರಿಂದ ಈ ವರ್ಷ ಮಳವಳ್ಳಿಯಲ್ಲಿಯೇ ಸ್ವಾಮೀಜಿ ಜಯಂತಿ ಆಚರಿಸುವುದಾಗಿ ಘೋಷಿಸಿದರಲ್ಲದೆ, ಸುತ್ತೂರು ಮಠದೊಂದಿಗೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ನನ್ನ ತಂದೆ ದೇವೇಗೌಡರು ಸುತ್ತೂರು ಮಠದ ಜೊತೆಗೆ ಅತ್ಯಂತ ನಿಷ್ಠೆಯಿಂದ ನಡೆದುಕೊಳ್ಳುವಂತೆ ಕುಟುಂಬದ ಎಲ್ಲ ಸದಸ್ಯರಿಗೂ ಹಲವಾರು ಬಾರಿ ತಿಳಿ ಹೇಳಿದ್ದಾರೆ. ನಾವು ಬದುಕಿರುವವರೆಗೂ ಸುತ್ತೂರು ಮಠದ ಜೊತೆಗೆ ನಿಷ್ಠೆಯಾಗಿ ಮುಂದುವರಿಯುತ್ತೇವೆ. ಶ್ರೀಮಠದ ಜನಕಲ್ಯಾಣ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಎಂದರು.
ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಧೀರಜ್ಮುನಿರಾಜು, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಡಾ.ಕೆ. ಅನ್ನದಾನಿ, ಅಶ್ವಿನ್ ಕುಮಾರ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಸಾಮರಸ್ಯ, ವಕೀಲ ಬೊಮ್ಮಾಯಿ ನಂಜುಂಡಸ್ವಾಮಿ ಭಾಗವಹಿಸಿದ್ದರು.