ಕನ್ನಡಪ್ರಭ ವಾರ್ತೆ ಕುಣಿಗಲ್ನಮ್ಮ ಬದುಕನ್ನು ರೂಪಿಸುವ ತಂದೆ ತಾಯಿಯೇ ನಮಗೆಲ್ಲ ಕಣ್ಣಿಗೆ ಕಾಣುವ ದೇವರು ಎಂದು ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಮಠಗಳು ಸಮಾಜಕ್ಕಾಗಿ ಎಲ್ಲವನ್ನು ನೀಡುತ್ತಿವೆ. ಶಿಕ್ಷಣ ಅನ್ನದಾನ ಧಾರ್ಮಿಕ ಕ್ಷೇತ್ರಗಳಲ್ಲಿ ಸಮರ್ಪಣೆ ಮಾಡಿಕೊಳ್ಳುತ್ತಿದ್ದು ಪ್ರತಿಯೊಬ್ಬರೂ ಕೂಡ ಮಠದ ಸಂಪರ್ಕದಿಂದ ಸಂಸ್ಕಾರವನ್ನು ಪಡೆಯಬಹುದಾಗಿದೆ ಆದ್ದರಿಂದ ಇಂದಿನ ಕಾಲದ ಹಿರಿಯರು ಮನೆಮಠ ಎಚ್ಚರ ಎಂಬ ಮಾತುಗಳನ್ನು ಹೇಳುತ್ತಿದ್ದರು. ಅದನ್ನು ಅರಿತು ಬದುಕಿದಾಗ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ, ಮಠ ಕೇವಲ ಸ್ವಾರ್ಥಕ್ಕಾಗಿ ತನ್ನ ದುಡಿಮೆಯನ್ನು ಎಂದಿಗೂ ಕೂಡ ಮಾಡುವುದಿಲ್ಲ ಸಮಾಜಕ್ಕಾಗಿ ಮಾಡುತ್ತದೆ ಎಂಬುದಕ್ಕೆ ಬೆಟ್ಟಹಳ್ಳಿ ಮಠದ ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ನೀರಾವರಿ ವಿಚಾರದಲ್ಲೂ ಕೂಡ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಅದೇ ರೀತಿ ಶಿಕ್ಷಣ ಅನ್ನದಾನ ಸೇರಿದಂತೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದೆ ಅಂತಹ ಮಠಗಳಿಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್ ಎಂ ಸುರೇಶ್ ಅವರಿಗೆ ಉರಿಲಿಂಗ ಶ್ರೀ ಪ್ರಶಸ್ತಿ ಹಾಗೂ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಡಿ ಪಿ ದಾನಪ್ಪ ಅವರಿಗೆ ನೀಲಕಂಠ ಶ್ರೀ ಪ್ರಶಸ್ತಿ, ಗಂಗಾ ಶಾನಯ್ಯ ಕೋಗಟ್ಟ ರಾಜಣ್ಣ, ರಂಗಸ್ವಾಮಿ, ಕುಮಾರ್, ಮತ್ತು ಪುನಗನಹಳ್ಳಿ ಬಸವರಾಜು ಅವರಿಗೆ ಗುರು ರಕ್ಷೆ ನೀಡಲಾಯಿತು. ಈ ಸಂದರ್ಭದಲ್ಲಿ ಚಕ್ರಬಾವಿ ಮಠದ ಸಿದ್ದಲಿಂಗ ಸ್ವಾಮೀಜಿ, ಹಿತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಸೇರಿದಂತೆ ಹಲವರು ಮಠದ ಹಿತೈಷಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಹಾಗೂ ಭಕ್ತರು ಇದ್ದರು.