ಗೋಕರ್ಣ-ಸುಬ್ರಹ್ಮಣ್ಯ ಬಸ್ ಬಗ್ಗೆ ಕುಮಟಾ ಘಟಕದ ವ್ಯವಸ್ಥಾಪಕರು ಹೊಸ ಬಸ್ ನಮ್ಮ ಘಟಕಕ್ಕೆ ನೀಡಿದಾಗ ನೋಡೋಣ, ಪ್ರಸ್ತುತ ಏನು ಮಾಡಲು ಬರುವುದಿಲ್ಲ, ಹಾಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಗೋಕರ್ಣ:
ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಬೆಳಗ್ಗೆ ಬಿಡುವ ಗೋಕರ್ಣ-ಸುಬ್ರಹ್ಮಣ್ಯ ಬಸ್ ಪ್ರತಿ ನಿತ್ಯ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿದ್ದು, ಇದರಿಂದ ನೇರ ಸಾಗುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.ಪ್ರವಾಸಿ ಸ್ಥಳವಾದ ಮುರ್ಡೇಶ್ವರ, ಉಡುಪಿ, ಸುಬ್ರಹ್ಮಣ್ಯಕ್ಕೆ ಪ್ರವಾಸಿಗರು ಈ ಸಾರಿಗೆಯನ್ನೆ ಅವಲಂಭಿಸಿದ್ದಾರೆ. ಲಗೇಜ್ ಸಮೇತ ಬಸ್ ಹತ್ತಿ ಕುಳಿತು ಪ್ರಯಾಣ ಮಾಡುವವರಿಗೆ ಮಧ್ಯೆ ನಿಲ್ಲುವ ಈ ಬಸ್ನಿಂದ ಮತ್ತೊಂದು ಬಸ್ ಹತ್ತುವಾಗ ತಮ್ಮ ಬಳಿ ಇರುವ ಸಾಮಾಗ್ರಿ ಸಾಗಿಸಲು ಪರದಾಡುತ್ತಿದ್ದಾರೆ. ಕೆಲವೊಮ್ಮೆ ಕುಮಟಾಕ್ಕೆ ತೆರಳಿದ ನಂತರ ಬೇರೆ ಬಸ್ಗೆ ಹತ್ತಿಸುತ್ತಿದ್ದು, ಜನರಿಗೆ ಈ ರೀತಿ ಹಿಂಸೆ ನೀಡುವುದನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ತಪ್ಪಿಸಬೇಕಿದೆ. ಇಷ್ಟೊಂದು ದೂರದ ಸಾರಿಗೆ ವ್ಯವಸ್ಥೆಗೆ ಹಳೆಯ ಬಸ್ ನೀಡುತ್ತಿದ್ದು, ಇದರ ಬದಲಿಗೆ ಹೊಸ ಬಸ್ ನೀಡಿ ಪ್ರಯಾಣಿಕರಿಗೆ ಅನೂಕೂಲ ಒದಗಿಸ ಬೇಕಾಗಿರುವುದು ತುರ್ತು ಅಗತ್ಯವಿದೆ.ಹೊರಜಿಲ್ಲೆಯ ಪವಿತ್ರ ಕ್ಷೇತ್ರ, ಪ್ರವಾಸಿ ತಾಣಗಳಿಗೆ ಇಲ್ಲಿಂದ ಕೇವಲ ಎರಡು ಸ್ಥಳಗಳಿಗೆ ಮಾತ್ರ ಸಾರಿಗೆ ವ್ಯವಸ್ಥೆಯಿದೆ. ಅದರಲ್ಲ ಒಂದೂ ಅಧೋಗತಿಯಾಗಿದೆ. ಈ ಬಗ್ಗೆ ಕುಮಟಾ ಘಟಕದ ವ್ಯವಸ್ಥಾಪಕರು ಗಮನಹರಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಆಗ್ರಹವಾಗಿದೆ. ಇನ್ನೂ ಕಾರ್ಯನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಬೆಳ್ಳಂಬೆಳಗ್ಗೆ ಪ್ರಯಾಣಿಕರಿಂದ ಬೈಗುಳ ಪಡೆಯುತ್ತಿದ್ದು, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿ ಪರಿತಪಿಸುತ್ತಿದ್ದಾರೆ.ಘಟಕ ವ್ಯವಸ್ಥಾಪಕರ ಉದ್ಧಟತನ:ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿರುವ ಗೋಕರ್ಣ-ಸುಬ್ರಹ್ಮಣ್ಯ ಬಸ್ ಬಗ್ಗೆ ಕುಮಟಾ ಘಟಕದ ವ್ಯವಸ್ಥಾಪಕರನ್ನು ಸಂಪರ್ಕಿಸಿದರೆ, ಹೊಸ ಬಸ್ ನಮ್ಮ ಘಟಕಕ್ಕೆ ನೀಡಿದಾಗ ನೋಡೋಣ, ಪ್ರಸ್ತುತ ಏನು ಮಾಡಲು ಬರುವುದಿಲ್ಲ, ಹಾಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಜವಾಬ್ದಾರಿ ಹೊತ್ತ ಅಧಿಕಾರಿಯೇ ಈ ರೀತಿ ಹೇಳಿಕೆ ನೀಡಿದ್ದು, ಜನಸಾಮಾನ್ಯರ ತೊಂದರೆ ಕೇಳುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.