ಜಾತಿಯ ಬಗ್ಗೆ ಪ್ರೀತಿ ಇರಲಿ, ಜಾತಿವಾದಿಯಾಗುವುದು ಬೇಡ

KannadaprabhaNewsNetwork | Published : May 12, 2025 1:18 AM
ಶಾಸಕರಾಗುವುದೇ ಎಲ್ಲರಿಗೂ ಸೇವೆ ಸಲ್ಲಿಸಲು. ರಾಜಕಾರಣ ಬಹಳ ಕಷ್ಟವಿದೆ. ನಾನು ಸುಖದಲ್ಲಿ ಇದ್ದೆ ಎಂದು ಭಾವಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಾತಿಯ ಬಗ್ಗೆ ಪ್ರೀತಿ ಇರಲಿ, ಆದರೆ ಜಾತಿವಾದಿ ಆಗುವುದು ಬೇಡ. ಧರ್ಮದ ಬಗ್ಗೆ ಗೌರವ ಇರಬೇಕು ಹೊರತು ಧರ್ಮಾಂಧರಾಗುವುದು ಬೇಡ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ವಿಜಯನಗರದಲ್ಲಿರುವ ಆಶಾ ಪ್ರಕಾಶ ಶೆಟ್ಟಿ ಬಂಟರ ಭವನದಲ್ಲಿ ಭಾನುವಾರ ನಡೆದ ಬಂಟರ ಸಂಘದ ಸ್ವರ್ಣ ಮಹೋತ್ಸವ ಹಾಗೂ ವಿನಯ ಮತ್ತು ಕೆ. ಸುಬ್ರಹ್ಮಣ್ಯ ರೈ ಬಯಲು ರಂಗ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರ ಮತ್ತು ಕೋಮುವಾದಕ್ಕೆ ನನ್ನ ವಿರೋಧವಿದೆ. ಸಾಮರಸ್ಯದಿಂದ ಬದುಕುವುದು ನನಗೆ ಇಷ್ಟದ ಕೆಲಸ. ನನ್ನ ಸಾಮಾಜಿಕ ಬದುಕಿನಲ್ಲಿ ಎಲ್ಲಾ ಜಾತಿ, ಧರ್ಮ, ಭಾಷೆ ಜನತೆಗೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಗುಲಗಂಜಿಯಷ್ಟು ತಾರತಮ್ಯ ಮಾಡಿಲ್ಲ ಎಂದು ಅವರು ಹೇಳಿದರು.

ಶಾಸಕರಾಗುವುದೇ ಎಲ್ಲರಿಗೂ ಸೇವೆ ಸಲ್ಲಿಸಲು. ರಾಜಕಾರಣ ಬಹಳ ಕಷ್ಟವಿದೆ. ನಾನು ಸುಖದಲ್ಲಿ ಇದ್ದೆ ಎಂದು ಭಾವಿಸಿದ್ದಾರೆ. ಆದರೆ, ನಾನು ಎಂದಿಗೂ ಪರಿಸ್ಥಿತಿಗೆ ರಾಜೀ ಮಾಡಿಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ತೃಪ್ತಿ ಇದೆ. ನನ್ನ ಸಮಾಜಕ್ಕೆ ಅಗೌರವ ತರುವ ಯಾವುದೇ ಕೆಲಸವನ್ನು ಮಾಡಿಲ್ಲ. ನಾನು ಈಗಲೂ ಸಕ್ರಿಯ ರಾಜಕಾರಣಿ ಎಂದರು.

ಮೈಸೂರಿನ ಕಡಿಮೆ ಸಂಖ್ಯೆ ಇರುವ ಬಂಟರು ದೊಡ್ಡ ಸಾಧನೆ ಮಾಡಿದ್ದಾರೆ. ಪಾರಂಪರಿಕ ಮೌಲ್ಯ ಕಾಣುವ ಮಾದರಿಯಲ್ಲಿ ಬೃಹತ್ ಭವನ ನಿರ್ಮಿಸಿರುವುದು ಅಪೂರ್ವ ಸಾಧನೆ. ದೇಶದಲ್ಲಿ ಬೇರೆ ರಾಜ್ಯದಲ್ಲಿ ಬಂಟರ ಸಂಘವಿದೆ. ಆದರೆ, ನನ್ನ ಊರನ್ನು ಬಿಟ್ಟರೇ ಯಾವ ಜಿಲ್ಲೆಯಲ್ಲಿ ನಿಕಟ ಸಂಬಂಧವಿಲ್ಲ. ಆದರೆ, ಮೈಸೂರು ಬಂಟರ ಸಂಘಕ್ಕೂ ನನಗೂ ಸಾಕಷ್ಟು ಋಣಾನುಬಂಧವಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ವೈದ್ಯಕೀಯ ಶಿಕ್ಷಣ ಮಾಜಿ ನಿರ್ದೇಶಕ ಡಾ.ಎಸ್. ರಮಾನಂದ ಶೆಟ್ಟಿ, ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತೆ ನಿವ್ಯಾ ಪಿ. ಶೆಟ್ಟಿ, ಉದ್ಯಮಿ ರಾಜೇಶ್ ಶೆಟ್ಟಿ, ನಟರಾದ ಪ್ರಮೋದ್ ಶೆಟ್ಟಿ, ಶೈನ್ ಶೆಟ್ಟಿ ಮತ್ತು ರಣಜಿ ಆಟಗಾರ ಅಭಿಲಾಷ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಟಿ. ದೇವೇಗೌಡ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವಿಶ್ರಾಂತ ಕುಲಪತಿ ಡಾ.ಎಸ್. ಚಂದ್ರಶೇಖರ ಶೆಟ್ಟಿ, ಎಂಆರ್ ಐ ಗ್ರೂಪ್‌ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಟಿ. ಪ್ರಭಾಕರ್ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ ವೈ.ವಿ. ಸತೀಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಎಂ. ನಂದ್ಯಪ್ಪ ಶೆಟ್ಟಿ ಮೊದಲಾದವರು ಇದ್ದರು.