ದಸರಾ ಜನೋತ್ಸವಕ್ಕೆ ಮೆರುಗು ನೀಡಿದ ಸಾಂಪ್ರದಾಯಿಕ ವಾದ್ಯ ಕನ್ನಡಪ್ರಭ ವಾರ್ತೆ ಮಡಿಕೇರಿ
ಗೋಣಿಕೊಪ್ಪ ದಸರಾ ನಾಡ ಹಬ್ಬ ಸಮಿತಿ ವತಿಯಿಂದ ದಸರಾ ಪ್ರಯುಕ್ತ ಈ ಬಾರಿ ಆಯೋಜಿಸಿದ್ದ ಸ್ತಬ್ಧಚಿತ್ರ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡ ಹಲವು ಚಿತ್ರಗಳು ಜನಮನ ಗೆದ್ದಿವೆ. ಗೋಣಿಕೊಪ್ಪ ಆರ್ಎಂಸಿ ಆವರಣದಿಂದ ಆರಂಭಗೊಂಡ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ವಿವಿಧ ಸಂದೇಶ ಸಾರುವ 14 ಚಿತ್ರಗಳನ್ನು ಪ್ರದರ್ಶಿಸಲಾಯಿತು. ಭಗತ್ ಸಿಂಗ್ ಸಂಸ್ಥೆ ಮಾದಕ ವಸ್ತುವಿನಿಂದ ಆಗುತ್ತಿರುವ ದುಷ್ಪರಿಣಾಮ ಕುರಿತ ಸಾಮಾಜಿಕ ಕಳಕಳಿಯ ಚಿತ್ರ ಹೆಚ್ಚು ಗಮನ ಸೆಳೆಯಿತು.ಪೊನ್ನಂಪೇಟೆ ಗೆಳೆಯರ ಬಳಗ ನಿರ್ಮಿಸಿದ್ದ ಕೊಪ್ಪಳ ಜಿಲ್ಲೆಯ ಕುಣಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ತಬ್ಧ ಚಿತ್ರ ಮೆಚ್ಚುಗೆ ಪಡೆಯಿತು.
ಕೈಕೇರಿಯ ಪರಿಸರ ಪ್ರೇಮಿ ಬಳಗವದರು ನಿರ್ಮಿಸಿದ್ದ ಪರಿಸರ ಸ್ವಚ್ಛತೆ ಮತ್ತು ಮಾದಕ ವಸ್ತುಗಳ ಹಾನು ಕುರಿತ ಚಿತ್ರವೂ ಕೂಡ ಉತ್ತಮ ಸಂದೇಶ ಸಾರಿತು.ಕೇರಳದ ರಾಕುಲಂನ ಬೊಂಬೆ ಕುಣಿತ, ಹುದಿಕೇರಿ ವಾಲಗ ಮೆರವಣಿಗೆ ಕಳೆ ತುಂಬಿದವು. ಇವುಗಳ ಜತೆಗೆ ಶಿಕ್ಷಣ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ನರೇಗಾ, ತಾಲೂಕು ಪಂಚಾಯಿತಿ, ಪರಿಶಿಷ್ಟ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಜಲಜೀವನ್ ಮಿಷಿನ್, ತೋಟಗಾರಿಕೆ ಇಲಾಖೆ ಮೊದಲಾದ ಸ್ತಬ್ದ ಚಿತ್ರಗಳು ಕೂಡ ಆಕರ್ಷಣೀಯವಾಗಿತಗ್ತು. 2 ಕಿಮೀ ದೂರ ಸಾಗಿದ ಮೆರವಣಿಗೆ ಸಂಜೆ ಸಮುದಾಯ ಆರೋಗ್ಯ ಕೇಂದ್ರದ ಹಿಂಬದಿಯಲ್ಲಿರುವ ದಸರಾ ನಾಡಹಬ್ಬ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಬಹುಮಾನ ವಿರತಣೆ ಬಳಿಕ ಮುಕ್ತಾಯಗೊಂಡಿತು.ಸ್ತಬ್ಧಚಿತ್ರ ಕಣ್ಣುಂಬಿಕೊಳ್ಳಲು ಪಟ್ಟಣದ ಉದ್ದಕ್ಕೂ ರಸ್ತೆ ಬದಿಗಳಲ್ಲಿ ಜನರು ಕಾದು ಕುಳಿತಿದ್ದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಸ್ತಬ್ಧಚಿತ್ರ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ಉದ್ಯಮಿ ಅಜಿತ್ ಅಯ್ಯಪ್ಪಹಾಗೂ ಸದಸ್ಯರು ಭಾಗವಹಿಸಿದ್ದರು.ಆರ್ಎಸ್ಎಸ್ ಸಂಘಟನೆಗೆ 100 ವರ್ಷ ತುಂಬಿದ ನೆನಪಿಗಾಗಿ ಲೋಪಮುದ್ರ ಮಹಿಳಾ ಸಂಘಟನೆಯವರು ರೂಪಿಸಿದ್ದ ಆರ್ಎಸ್ಎಸ್ ಸ್ತಬ್ಧ ಚಿತ್ರ, ಬಂಟವಾಳದ ಶ್ರೀರಾಮ ಭಜನಾ ತಂಡದ ಹಾಡು ಮತ್ತು ಕುಣಿತ ಹಾಗೂ ಆರ್ಎಸ್ಎಸ್ ಸಮವಸ್ತ್ರ ನೋಡುಗರ ಗಮನ ಸೆಳೆದವು.ಡಿಜೆಯಂತಹ ಅಬ್ಬರವಿಲ್ಲದೆ ಸುಶ್ರಾವ್ಯವಾದ ಜಾನಪದ ಗೀತೆ, ಭಜನೆ ಹಾಗೂ ಸಾಂಪ್ರದಾಯಕ ವಾದ್ಯಗಳ ಮೂಲಕ ಸಾಗಿದ ಸ್ತಬ್ದ ಚಿತ್ರ ಮೆರವಣಿಗೆ ವಿಶೇಷವಾಗಿತು.ಸರ್ವ ಸಂಸ್ಥೆ ಪಹಲ್ಗಾಮ್ ನೋವಿನಲ್ಲಿ ಪಾಕ್ ಮಣಿಸಿದ ಆಪರೇಷನ್ ಸಿಂಧೂರ ಹೋರಾಟವನ್ನು ಪ್ರದರ್ಶಿಸಿತು. ಭಾರತದ ದಿಟ್ಟ ಹೋರಾಟಕ್ಕೆ ಪಾಕ್ ಕಣ್ಣು ಕಳೆದುಕೊಂಡಿರುವ ಮಿಸೈಲ್ ದಾಳಿಯನ್ನು ಹೆಚ್ಚು ರಚನಾತ್ಮಕವಾಗಿ ಬಿಂಬಿಸಲಾಗಿತ್ತು. ಮೂರು ವಾಹನ ಬಳಸಿ ಎರಡು ಕಡೆಗಳಲ್ಲಿ ಭಾರತ ಮತ್ತು ಪಾಕ್ ಹೋರಾವನ್ನೇ ಕಾಣುವಂತೆ ಮಾಡಲಾಗಿತ್ತು. ಕೊನೆಗೆ ಪಾಕ್ ಮಣಿಸಿದ ದಾಳಿ ಚಿತ್ರ ಹೆಚ್ಚು ಆಕರ್ಷಿಸಿತು. ಪ್ಲಾಸ್ಟಿಕ್ ಇಲ್ಲದೆ ಎಲ್ಲವನ್ನೂ ಬಟ್ಟೆಯಿಂದಲೇ ತಯಾರಿಸಿ ರೂಪಿಸಿದ್ದ ಚಿತ್ರ ಪರಿಸರ ಪ್ರೇಮ ಮತ್ತು ದೇಶಭಕ್ತಿಗೆ ಸಾಕ್ಷಿಯಾಗಿತ್ತು.