ವಿದ್ಯಾಭಾರತಿ ಶಾಲೆಯಲ್ಲಿ ೨೩ನೇ ವರ್ಷದ ಶಾಲಾ ವಾರ್ಷಿಕೋತ್ಸವ
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೆ ಉಜ್ವಲ ಭವಿಷ್ಯ ರೂಪಿಸಿಕೊಂಡು ಸಂಸ್ಕಾರವಂತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ವಿದ್ಯಾಭಾರತಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ೨೩ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ವ ಜನಾಂಗವನ್ನು ಸಮಾನತೆಯಿಂದ ಕಂಡಾಗ ಮಾತ್ರ ದೇಶದಲ್ಲಿ ಶಾಂತಿ, ಸೌಹಾರ್ದತೆ, ತೃಪ್ತಿ ಲಭಿಸುತ್ತದೆ. ಖಾಸಗಿ ಶಾಲೆಯೊಂದು ೨೩ ವರ್ಷಗಳ ಕಾಲ ಯಶಸ್ವಿಯಾಗಿ ನಡೆದುಬಂದಿರುವುದು ಉತ್ತಮ ಸಾಧನೆಯಾಗಿದೆ. ಈ ಶಾಲೆಯಲ್ಲಿ ೮೦೦ ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿ ದ್ದಾರೆಂದು ಶ್ಲಾಘಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ನಡೆದ ಕವಾಲಿ ಅಧ್ಬುತ ನೃತ್ಯ ಪ್ರದರ್ಶನ ನಿಜಕ್ಕೂ ಅರ್ಥಪೂರ್ಣ. ನೃತ್ಯ ಮಾಡಿದ ವಿದ್ಯಾರ್ಥಿಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಕಲೆ ಪ್ರೋತ್ಸಾಹಿಸಬೇಕೆಂದರು ಹೇಳಿದರು.ವಿವಿಧ ಧರ್ಮಗಳ ಜನರನ್ನು ಒಳಗೊಂಡ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದುವ ಮೂಲಕ ಪ್ರಪಂಚದಲ್ಲೇ ಜಾತ್ಯಾತೀತ ರಾಷ್ಟ್ರ ಎಂದ ಹೆಗ್ಗಳಿಕೆ ಪಡೆದಿದೆ ಎಂದು ಬಣ್ಣಿಸಿದರು.ಮಕ್ಕಳಿಗೆ ಯಾರೂ ಕದಿಯಲಾಗದ, ಕಿತ್ತುಕೊಳ್ಳಲಾಗದ ವಿದ್ಯೆಯನ್ನು ಕಲಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿ ಮಾಡಿದರೆ ಅವರ ಬದುಕು ಉತ್ತಮವಾಗಲಿದೆ. ಶಿಕ್ಷಣವೇ ದೊಡ್ಡ ಆಯುಧ ಇದ್ದಂತೆ. ಇದನ್ನು ಸಮರ್ಪಕವಾಗಿ ಬಳಸಿದಾಗ ಮಾತ್ರ ಜಗತ್ತಿನಲ್ಲಿ ದೇಶದ ದಿಕ್ಕನ್ನು ಬದಲಿಸಬಹುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆ ಕಾರ್ಯದರ್ಶಿ ಅಪ್ಸರ್ ಅಹಮದ್ ವಹಿಸಿದ್ದರು. ನಿಕಟಪೂರ್ವ ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಮಂಜುನಾಥ್ ಹಾಗೂ ಪೋಷಕರು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.